ಕೊಲ್ಕತ್ತಾ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಶ್ಚಿಮಬಂಗಾಳದ ಕೋಲ್ಕತ್ತಾದಲ್ಲಿ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಬ್ರಿಗೇಡ್ ಮೈದಾನದಲ್ಲಿ ಹಮ್ಮಿಕೊಂಡಿರುವ ಬೃಹತ್ ರ್ಯಾಲಿಯಲ್ಲಿ ದೇಶದ ಘಟಾನುಘಟಿ ನಾಯಕರಾದ ಅಖಿಲೇಶ್ ಯಾದವ್, ಫಾರೂಕ್ ಅಬ್ದುಲ್ಲಾ, ಹಾರ್ದಿಕ್ ಪಟೇಲ್, ಜಿಗ್ನೆಸ್ ಮೆಬಾನ್, ಕರ್ನಾಟಕ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಎಂ.ಕೆ.ಸ್ಟಾಲಿನ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದಾರೆ.
ಪ್ರತಿಪಕ್ಷಗಳ ಬೃಹತ್ ಯಾಲಿಗೆ ಜನಸಾಗರವೇ ಹರಿದು ಬಂದಿದ್ದು, ಬ್ರಿಗೆಡ್ ಪರೇಡ್ ಮೈದಾನದಲ್ಲಿ ಬಿಗಿಬಂದೋಬಸ್ತ್ ನಿಯೋಜಿಸಲಾಗಿದೆ. 20 ವೀಕ್ಷಣಾ ಗೋಪುರ, 1000 ಮೈಕ್ರೋಫೋನ್ ಗಳು, 30 ಎಲ್ ಇಡಿ ಸ್ಕ್ರೀನ್ ಗಳನ್ನು ಅಳವಡಿಸಲಾಗಿದೆ. 10,000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ.
Visuals from the Trinamool Congress led Opposition rally in Kolkata pic.twitter.com/o0evCZY2Yz
— ANI (@ANI) January 19, 2019
'ಏಕೀಕೃತ ಭಾರತ ರ್ಯಾಲಿ'ಯನ್ನು ಮಮತಾ ಬ್ಯಾನರ್ಜಿ ಅವರು ಬಿಜೆಪಿ ಪಾಲಿಗೆ 'ಮರಣ ಮೃದಂಗ' ಎಂದು ಬಣ್ಣಿಸಿದ್ದು, ಈ ರ್ಯಾಲಿಯ ಮೂಲಕ ಬಿಜೆಪಿಯೇತರ ಪ್ರತಿಪಕ್ಷಗಳ ನೇತೃತ್ವವನ್ನು ತಾವೇ ವಹಿಸಿಕೊಳ್ಳಲು ಮಮತಾ ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗಿದೆ.
ಅನಾರೋಗ್ಯದ ಕಾರಣ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಸಭೆಯಲ್ಲಿ ಭಾಗವಹಿಸುತ್ತಿಲ್ಲ. ಅಂತೆಯೇ ವೈಯಕ್ತಿಕ ಕಾರಣಗಳಿಂದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರೂ ಸಭೆಯಲ್ಲಿ ಭಾಗವಹಿಸಿಲ್ಲ. ಈಗಾಗಲೇ ಈ ಬಗ್ಗೆ ಮಮತಾ ಬ್ಯಾನರ್ಜಿ ಅವರಿಗೆ ಕಾಂಗ್ರೆಸ್ ಅಧಿನಾಯಕಿ ಪತ್ರ ಬರೆದು ತಮ್ಮ ಬೆಂಬಲ ಸೂಚಿಸಿದ್ದಾರೆ.