ನವದೆಹಲಿ: ನ್ಯಾಯಾಲಯಗಳಲ್ಲಿನ ಕಾರ್ಯ ಕಲಾಪಗಳ ನೇರ ಪ್ರಸಾರ ಹಾಗೂ ವೀಡಿಯೋ ರೆಕಾರ್ಡಿಂಗ್ ಮಾಡಲು ಸಮ್ಮತಿ ಸೂಚಿಸುವ ಮೂಲಕ ಸುಪ್ರೀಂ ಕೋರ್ಟ್ ಬುಧವಾರ ಐತಿಹಾಸಿಕ ತೀರ್ಪು ನೀಡಿದೆ.
ಇದೇ ಸಂದರ್ಭದಲ್ಲಿ, ನ್ಯಾಯಾಧೀಶರ ಘನತೆಯನ್ನು ಕಾಪಾಡುವಂತಹ ಮತ್ತು ಸಾರ್ವಜನಿಕರ ಹಕ್ಕನ್ನು ಸಮತೋಲನಗೊಳಿಸುವ ಅಗತ್ಯ ಕಾನೂನುಗಳನ್ನು ಶೀಘ್ರದಲ್ಲೇ ರಚಿಸಲಾಗುವುದು ಎಂದು ಉನ್ನತ ನ್ಯಾಯಾಲಯ ಹೇಳಿದೆ.
ನ್ಯಾಯಾಲಯ ಕಲಾಪಗಳ ನೇರಪ್ರಸಾರಕ್ಕೆ ಸಂಬಂಧಿಸಿದಂತೆ ಹಿರಿಯ ವಕೀಲ ಇಂದಿರಾ ಜೈಸಿಂಗ್, ಕಾನೂನು ವಿದ್ಯಾರ್ಥಿ ಸ್ನೇಹಿಲ್ ತ್ರಿಪಾಠಿ ಸೇರಿದಂತೆ ‘Centre For Accountability and Systemic Change’ ಹೆಸರಿನ ಎನ್ಜಿಒ ಅರ್ಜಿ ಸಲ್ಲಿಸಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹಾಗೂ ನ್ಯಾಯಮೂರ್ತಿಗಳಾದ ಎ.ಎಂ.ಖನ್ವಿಲ್ಕರ್ ಹಾಗೂ ಡಿ.ವೈ.ಚಂದ್ರಚೂಡ್ ಅವರನ್ನೊಳಗೊಂಡ ಸಾಂವಿಧಾನಿಕ ಪೀಠ ಕಳೆದ ಆಗಸ್ಟ್ 24ಕ್ಕೆ ವಿಚಾರಣೆ ಮುಕ್ತಾಯಗೊಳಿಸಿ, ತೀರ್ಪನ್ನು ಸೆಪ್ಟೆಂಬರ್ 26ಕ್ಕೆ ಕಾಯ್ದಿರಿಸಿತ್ತು.
ಇದೀಗ ನ್ಯಾಯಾಲಯ ಕಲಾಪಗಳ ನೇರ ಪ್ರಸಾರಕ್ಕೆ ಅನುಮತಿ ದೊರೆತಿರುವುದರಿಂದ ಕೋರ್ಟ್ನಲ್ಲಿ ಪ್ರೇಕ್ಷಕರು ಕಡಿಯಾಗುವುದರಿಂದ ಜನಸಂದಣಿಯೂ ಕಡಿಮೆಯಾಗುತ್ತದೆ. ಅಲ್ಲದೆ, ಕೋರ್ಟ್ ಕಲಾಪಗಳ ನೇರಪ್ರಸಾರದಿಂದಾಗಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಮತ್ತಷ್ಟು ಪಾರದರ್ಶಕತೆ ಬರಲಿದೆ ಎಂದು ನ್ಯಾಯಾಲಯ ಹೇಳಿದೆ.