ಬೆಂಗಳೂರು: ಕಳೆದ ತಿಂಗಳು ಕಚೇರಿಯಲ್ಲೇ ಅಪರಿಚಿತ ವ್ಯಕ್ರಿಯೋರ್ವನಿಂದ ಚಾಕು ಇರಿತಕ್ಕೆ ಒಳಗಾಗಿದ್ದ ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರು ವಿಶ್ರಾಂತಿ ಬಳಿಕ ಇಂದು ಕರ್ತವ್ಯಕ್ಕೆ ಹಾಜರಾದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ನಡೆದ ಘಟನೆ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಲು ಇಷ್ಟಪಡುವುದಿಲ್ಲ. ಇನ್ನು ಮುಂದೆ ಯಾರೇ ಬಂದರೂ ಸಮಯ ನಿಗದಿ ಮಾಡುವೆ. ಈ ಘಟನೆ ನನಗೆ ಪಾಠವಾಗಿದೆ. ನಮ್ಮ ಕಚೇರಿಯಲ್ಲಿ ಸಾಕಷ್ಟು ಸೆಕ್ಯೂರಿಟಿ ಇದೆ. ಆದರೂ ಈ ಘಟನೆ ನಡೆದಿದೆ ಎಂದ ಲೋಕಾಯುಕ್ತರು, ಈಗಾಗಲೇ ಶರ್ಮಾ ಕಸ್ಟಡಿಯಲ್ಲಿದ್ದಾನೆ. ಆದರೂ ಹೇಗೆ ಈ ಘಟನೆ ನಡೆಯಿತು ಎಂಬುದರ ಬಗ್ಗೆ ನನಗೂ ಆಶ್ಚರ್ಯವಿದೆ. ಇದೀಗ ನನ್ನ ಆರೋಗ್ಯ ಸುಧಾರಿಸಿದೆ. ಹಾಗಾಗಿ ಕರ್ತವ್ಯಕ್ಕೆ ಹಾಜರಗಿದ್ದೇನೆ" ಎಂದರು.
ಕಳೆದ ಮಾರ್ಚ್ 7 ರಂದು ಲೋಕಾಯುಕ್ತ ಕಚೇರಿಗೆ ವಿಚಾರಣೆಗೆ ಆಗಮಿಸಿದ್ದ ತುಮಕೂರು ಮೂಲದ ತೇಜ್ ರಾಜ್ ಶರ್ಮಾ ಎಂಬ ವ್ಯಕ್ತಿ, ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕುವಿನಿಂದ ಇರಿದಿದ್ದ. ಇದರಿಂದ ಗಂಭಿರವಾಗಿ ಗಾಯಗೊಂಡಿದ್ದ ವಿಶ್ವನಾಥ್ ಶೆಟ್ಟಿ ಅವರನ್ನು ಬೆಂಗಳೂರಿನ ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಬಳಿಕ 47 ದಿನಗಳ ಕಾಲ ವಿಶ್ರಾಂತಿಯಲ್ಲಿದ್ದ ನ್ಯಾಯಮೂರ್ತಿಗಳು ಇಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ.