ಜನಪ್ರತಿನಿಧಿಗಳಿಗೆ ಕರ್ತವ್ಯದ ವೇಳೆ ವೈಯುಕ್ತಿಕ ವಿಚಾರಗಳು ಅಡ್ಡ ಬರಬಾರದು- ಕೆ.ಆರ್. ರಮೇಶ್‍ಕುಮಾರ್

ಬಯಸಿದವರೆಲ್ಲ ವಿಧಾನ ಸಭೆ/ವಿಧಾನ ಪರಿಷತ್ತಿಗೆ ಆಯ್ಕೆಯಾಗಿ ಬರಲು ಸಾಧ್ಯವಿಲ್ಲ.  ರಾಜ್ಯದ ಆರು ಕೋಟಿ ಜನರ ಪೈಕಿ ಕೇವಲ 224 ಜನರು ಮಾತ್ರ ಶಾಸನ ಸಭೆಗೆ ಆಯ್ಕೆಯಾಗಿ ಬರುತ್ತಾರೆ. 

Last Updated : Nov 16, 2018, 08:49 AM IST
ಜನಪ್ರತಿನಿಧಿಗಳಿಗೆ ಕರ್ತವ್ಯದ ವೇಳೆ ವೈಯುಕ್ತಿಕ ವಿಚಾರಗಳು ಅಡ್ಡ ಬರಬಾರದು-  ಕೆ.ಆರ್. ರಮೇಶ್‍ಕುಮಾರ್ title=
File Image

ಬೆಂಗಳೂರು: ಚುನಾಯಿತ ಜನಪ್ರತಿನಿಧಿಗಳಿಗೆ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ತಮ್ಮ ವೈಯುಕ್ತಿಕ ವಿಚಾರಗಳು ಅಡ್ಡ ಬರಬಾರದು, ಜನರ ಪ್ರಾತಿನಿತ್ಯವೇ ಅತಿ ಮುಖ್ಯ ಎಂದು ವಿಧಾನ ಸಭೆಯ ಸಭಾಧ್ಯಕ್ಷರಾದ ಕೆ. ಆರ್. ರಮೇಶ್‍ಕುಮಾರ್ ಅವರು ತಿಳಿಸಿದರು.  

ವಿಕಾಸ ಸೌಧದ ಸಮ್ಮೇಳನ ಸಭಾಂಗಣದಲ್ಲಿ  ಗುರುವಾರ  ಏರ್ಪಡಿಸಿದ್ದ ವಿಧಾನ ಸಭೆ, ವಿಧಾನ ಪರಿಷತ್ತಿಗೆ ಮೊದಲ ಬಾರಿಗೆ ಆಯ್ಕೆಯಾದ  ಶಾಸಕರಿಗೆ ಆಯೋಜಿಸಲಾಗಿದ್ದ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿಧಾನ ಮಂಡಲದ ಕಾರ್ಯಕಲಾಪಗಳು, ಜವಾಬ್ದಾರಿಗಳು ಹಾಗೂ ಹಕ್ಕು ಬಾದ್ಯತೆಗಳ ಅರಿವು ಮೂಡಿಸಲು ಈ ಶಿಬಿರವನ್ನು ಏರ್ಪಡಿಸಲಾಗಿದ್ದು ಪ್ರಥಮ ಬಾರಿಗೆ ಆಯ್ಕೆಯಾಗಿರುವ ಶಾಸಕರು ಇದರ ಸದ್ಬಳಕೆ ಮಾಡಿಕೊಂಡು ವಿಧಾನ ಸಭಾ ಸಭೆಯ ಕಾರ್ಯಕಲಾಪಗಳಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವಂತೆ ಶಿಬಿರದಲ್ಲಿ ಹಾಜರಿದ್ದ ಶಾಸಕರಿಗೆ ಸೂಚಿಸಿದರು.
    
ಬಯಸಿದವರೆಲ್ಲ ವಿಧಾನ ಸಭೆ/ವಿಧಾನ ಪರಿಷತ್ತಿಗೆ ಆಯ್ಕೆಯಾಗಿ ಬರಲು ಸಾಧ್ಯವಿಲ್ಲ.  ರಾಜ್ಯದ ಆರು ಕೋಟಿ ಜನರ ಪೈಕಿ ಕೇವಲ 224 ಜನರು ಮಾತ್ರ ಶಾಸನ ಸಭೆಗೆ ಆಯ್ಕೆಯಾಗಿ ಬರುತ್ತಾರೆ.  ಹಾಗಾಗಿ ನೀವು ಪುಣ್ಯವಂತರು ಈ ಅವಕಾಶವನ್ನು ಬಳಸಿಕೊಂಡು ಸಮಸ್ಯೆಯಲ್ಲಿರುವ ಜನರಿಗೆ ಒಳಿತು ಮಾಡುವಲ್ಲಿ ನಿಮ್ಮ ಗಮನ ಸದಾ ಇರಲಿ ಎಂದರು.  

ವಿಧಾನ ಸಭೆ  ಅಧಿವೇಶನ ಹಾಗೂ ವಿಧಾನ ಮಂಡಲ ಸಮಿತಿಗಳ ಸಭೆಗೆ ಕಡ್ಡಾಯವಾಗಿ ಹಾಜರಾಗಿ ಚರ್ಚೆಯಲ್ಲಿ ಪಾಲ್ಗೊಳ್ಳಿ ಎಂದು ಮಾತನಾಡಿದ ಅವರು ವಿಧಾನ ಸಭೆ ಅಧಿವೇಶನಕ್ಕೆ ಬರುವ ಮುನ್ನ ಪೂರ್ವ ಸಿದ್ದತೆ ಮಾಡಿಕೊಂಡು ಬಂದು ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಿರಿ ಎಂದು ಸೂಚಿಸಿದರು.  

ನಾವು ಆಯ್ಕೆಯಾಗಿರುವುದು ನಮ್ಮ ಸಂವಿಧಾನದ ಜನಪ್ರತಿನಿಧಿ ಕಾಯ್ದೆಯಡಿ ಪ್ರತಿ ಹಂತದಲ್ಲೂ ನಾವು ಜನರನ್ನು ಪ್ರತಿನಿಧಿಸಬೇಕು.  ಜನರ ನೋವು ಕಷ್ಟಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕು.  ಪ್ರಜಾತಂತ್ರ ವ್ಯವಸ್ಥೆಯಲ್ಲಿ ಯಾರಿಗೂ ಸರ್ವಾಧಿಕಾರ ಮನೋಭಾವ ಬರಬಾರದು. ಅಲ್ಲದೆ ಇರಕೂಡದೂ ಎಂದ ಅವರು ಇತ್ತೀಚೆಗೆ ಪ್ರಜಾಪ್ರಭುತ್ವದ ನೆರಳಿನಲ್ಲಿಯೇ ಸರ್ವಾಧಿಕಾರ ಕಂಡು ಬರುತ್ತಿದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.  

ಅಧಿವೇಶಗಳಿಗೆ ಸಮಯಕ್ಕೆ ಸರಿಯಾಗಿ ಬಂದು​ ಸದನ ಮುಗಿಯುವವರೆಗೂ ಕುಳಿತುಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ:
ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಧಾನ ಪರಿಷತ್ತಿನ ಸಭಾಪತಿಗಳಾದ ಬಸವರಾಜ ಹೊರಟ್ಟಿ ಅವರು ಪ್ರಥಮ  ಬಾರಿಗೆ ಚುನಾಯಿತರಾಗಿರುವ ಶಾಸಕರು ಸದನಗಳಲ್ಲಿ ಹೆಚ್ಚಿನ ಸಮಯ ಚರ್ಚೆಯಲ್ಲಿ ಪಾಲ್ಗೊಳ್ಳಬೇಕು ಎಂದ ಅವರು ಶಾಸಕರು ವಿಧಾನ ಮಂಡಲದ ಅಧಿವೇಶಗಳಿಗೆ ಸಮಯಕ್ಕೆ ಸರಿಯಾಗಿ ಬಂದು ಸದನ ಮುಗಿಯುವವರೆಗೂ ಕುಳಿತುಕೊಳ್ಳುವ ಅಭ್ಯಾಸ ಮಾಡಿಕೊಳ್ಳಬೇಕು ಎಂದರು.

ಶಾಸನ ಸಭೆಗಳಲ್ಲಿ ಸಾರ್ವಜನಿಕ ಸಮಸ್ಯೆಗಳನ್ನು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿ ನ್ಯಾಯಪಡೆಯಬೇಕು ಎಂದು ಮಾತನಾಡಿದ ಬಸವರಾಜ ಹೊರಟ್ಟಿ ವಿಧಾನ ಮಂಡಲದ ಗ್ರಂಥಾಲಯಕ್ಕೆ ಹೋಗುವ ಅಭ್ಯಾಸ ರೂಡಿಸಿಕೊಂಡು ಹೆಚ್ಚಿನ ಅಧ್ಯಯನ ಮಾಡಿದಲ್ಲಿ ವಿಧಾನ ಮಂಡಲದಲ್ಲಿ ಪಾಲ್ಗೊಳ್ಳಿವಿಕೆ ಬಗ್ಗೆ ಅರಿವು ಮೂಡುತ್ತದೆ ಎಂದರು.  ಸಭೆಯಲ್ಲಿ ಅರಣ್ಯ ಸಚಿವ ಶಂಕರ್ ಸೇರಿದಂತೆ ಪ್ರಥಮ ಬಾರಿಗೆ ಆಯ್ಕೆಯಾದ ಶಾಸಕರು ಶಿಬಿರದಲ್ಲಿ ಪಾಲ್ಗೊಂಡಿದ್ದರು.
 

Trending News