ರಾಷ್ಟ್ರ ರಾಜಕಾರಣದಲ್ಲಿ ನನಗೆ ಆಸಕ್ತಿ ಇಲ್ಲ: ಆರ್.ಅಶೋಕ್

ನಾನು ಪಕ್ಷದ ಮುಖಂಡರಾದ ಸುಬ್ಬಣ್ಣ, ವಿ.ಸೋಮಣ್ಣ ಮತ್ತು ಅರವಿಂದ್ ಲಿಂಬಾವಳಿ ಅವರ ಮಾರ್ಗದರ್ಶನದಲ್ಲಿ ಬೆಂಗಳೂರು ಬಿಜೆಪಿಯನ್ನೇ ಮುನ್ನಡೆಸಲು ಇಷ್ಟಪಡುತ್ತೇನೆ ಎಂದು ಆರ್.ಅಶೋಕ್ ಹೇಳಿದ್ದಾರೆ. 

Last Updated : Nov 15, 2018, 10:48 AM IST
ರಾಷ್ಟ್ರ ರಾಜಕಾರಣದಲ್ಲಿ ನನಗೆ ಆಸಕ್ತಿ ಇಲ್ಲ: ಆರ್.ಅಶೋಕ್ title=

ಬೆಂಗಳೂರು: ರಾಷ್ಟ್ರ ರಾಜಕಾರಣದಲ್ಲಿ ನನಗೆ ಆಸಕ್ತಿ ಇಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಹೇಳಿದ್ದಾರೆ. 

ಇತ್ತೀಚೆಗಷ್ಟೇ ನಿಧನರಾದ ಕೇಂದ್ರ ಸಚಿವ ಹೆಚ್.ಎನ್.ಅನಂತ್ ಕುಮಾರ್ ಅವರ ಸ್ಥಾನವನ್ನು ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಯಾರು ವಹಿಸಿಕೊಳ್ಳುತ್ತಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಆರ್.ಅಶೋಕ್, "ನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ. ನಾನು ಪಕ್ಷದ ಮುಖಂಡರಾದ ಸುಬ್ಬಣ್ಣ, ವಿ.ಸೋಮಣ್ಣ ಮತ್ತು ಅರವಿಂದ್ ಲಿಂಬಾವಳಿ ಅವರ ಮಾರ್ಗದರ್ಶನದಲ್ಲಿ ಬೆಂಗಳೂರು ಬಿಜೆಪಿಯನ್ನೇ ಮುನ್ನಡೆಸಲು ಇಷ್ಟಪಡುತ್ತೇನೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲೂ ಬಿಜೆಪಿ ಗೆಲುವಿಗೆ ಶ್ರಮಿಸುತ್ತೇನೆ" ಎಂದರು.

ಮುಂದುವರೆದು ಮಾತನಾಡಿದ ಅವರು, ಕೇಂದ್ರ ಸಚಿವರಾಗಿದ್ದ ಅನಂತ್ ಕುಮಾರ್ ಅವರಿಂದ ನಾನು ಸಾಕಷ್ಟು ವಿಚಾರಗಳನ್ನು ಕಲಿತಿದ್ದೇನೆ. ಅವರಿಲ್ಲದ ಬಿಜೆಪಿ ನಿಜಕ್ಕೂ ಬೇಸರ ಮೂಡಿಸುತ್ತದೆ. ಅನಂತ್ ಕುಮಾರ್ ಮತ್ತು ನನ್ನ ನಡುವೆ ಉತ್ತಮ ಬಾಂಧವ್ಯವಿತ್ತು. ಅದನ್ನು ಮುರಿಯಲು ಹಲವರು ಪ್ರಯತ್ನಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ" ಎಂದು ಅನಂತ್ ಕುಮಾರ್ ಅವರನ್ನು ನೆನೆದು ಅಶೋಕ್ ಕಣ್ಣೀರಿಟ್ಟರು.
 

Trending News