)
Child Marriage Case: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತವರು ಜಿಲ್ಲೆ ಬೆಳಗಾವಿಯಲ್ಲಿ ಮತ್ತೊಂದು ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷನೊಬ್ಬ 15 ವರ್ಷದ ಬಾಲೆಯನ್ನ ವಿವಾಹವಾಗಿರುವ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಬಸ್ಸಾಪುರ ಗ್ರಾಮದಲ್ಲಿ ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸಚಿವ ಸತೀಶ್ ಜಾರಕಿಹೊಳಿ ಪ್ರತಿನಿಧಿಸುವ ಯಮಕನಮರಡಿ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಬಸ್ಸಾಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷ ಭೀಮಶಿ ಕಾಲಿಮಣಿ ಎಂಬಾತನಿಂದ ಈ ಕೃತ್ಯ ನಡೆದಿದೆ. ಬಾಲ್ಯ ವಿವಾಹ ಮಾಡಿಕೊಂಡ ಗ್ರಾಪಂ ಅಧ್ಯಕ್ಷ ಭೀಮಶಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹುಕ್ಕೇರಿ ತಾಲೂಕಿನ ಯಮಕನಮರಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2023ರ ನವೆಂಬರ್ 5ರಂದು ಅಪ್ರಾಪ್ತೆ ಜೊತೆಗೆ ಭೀಮಶಿ ಕಾಲಿಮಣಿ ವಿವಾಹವಾಗಿದ್ದ. ಮದುವೆ ವೇಳೆ ಅಪ್ರಾಪ್ತೆಗೆ ಜಸ್ಟ್ 15 ವರ್ಷ ವಯಸ್ಸಾಗಿತ್ತು. ಬಂಧನದ ಭೀತಿಯಿಂದ ತಪ್ಪಿಸಿಕೊಳ್ಳಲು ಗ್ರಾಪಂ ಅಧ್ಯಕ್ಷ ಭೀಮಶಿ ಕಳ್ಳಾಟ ನಡೆಸಿದ್ದ. ದೂರು ಬಂದ ತಕ್ಷಣವೇ ಬಸ್ಸಾಪುರಕ್ಕೆ ನಾಲ್ಕು ಬಾರಿ ರಕ್ಷಣಾ ತಂಡ ಹೋಗಿತ್ತು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಡಾ.ಪರ್ವಿನ್ ನೇತೃತ್ವದ ತಂಡ ನಾಲ್ಕು ಬಾರಿ ಬಸ್ಸಾಪುರಕ್ಕೆ ಭೇಟಿ ನೀಡಿತ್ತು. ಆದರೆ ಬಾಲಕಿಯನ್ನ ಪತ್ತೆ ಹಚ್ಚಲು ಮಕ್ಕಳ ರಕ್ಷಣಾ ತಂಡ ವಿಫಲವಾಗಿತ್ತು.
ಈ ಮಧ್ಯೆಯೇ ತನ್ನ ಹೆಂಡತಿ ಪ್ರಾಪ್ತ ವಯಸ್ಸಿನವಳು ಎಂಬ ದಾಖಲೆಯನ್ನ ಭೀಮಶಿ ಬಿಡುಗಡೆ ಮಾಡಿದ್ದ. ಬಂಧನದ ಭೀತಿಯಿಂದ ಪತ್ನಿಯ ನಕಲಿ ಜನನ ಪ್ರಮಾಣ ಪತ್ರವನ್ನ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದ. ಶಾಲಾ ಟ್ರಾನ್ಸಫರ್ ಸರ್ಟಿಫಿಕೇಟ್ ಜೊತೆಗೆ ಹೊಸ ಜನನ ಪ್ರಮಾಣದ ದಾಖಲೆಯನ್ನ ಅಧಿಕಾರಿಗಳು ಹೋಲಿಕೆ ಮಾಡಿದ್ದರು. ಆ ವೇಳೆ ಗ್ರಾಪಂ ಅಧ್ಯಕ್ಷ ಭೀಮಶಿ ಕಾಲಿಮಣಿ ಬಾಲ್ಯ ವಿವಾಹ ಆಗಿರುವುದು ದೃಢವಾಗಿತ್ತು. ಕೃತ್ಯ ಎಸಗಿರುವುದು ದೃಢವಾದ ಹಿನ್ನೆಲೆ ಗ್ರಾಪಂ ಅಧ್ಯಕ್ಷನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.