)
BELAGAVI: ಪ್ರಿಯಕರನೊಡನೆ ಮಗಳು ಓಡಿಹೋದಳೆಂಬ ಕೋಪಕ್ಕೆ ಆಕೆಯ ತಿಥಿ ಮಾಡಿರುವ ತಂದೆ ಇಡೀ ಊರಿಗೆ ಊಟ ಹಾಕಿಸಿದ್ದಾರೆ. ಈ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಾಗರಾಳ ಗ್ರಾಮದಲ್ಲಿ ನಡೆದಿದ್ದು, ಸಾಕಷ್ಟು ಚರ್ಚೆ ಕಾರಣವಾಗಿದೆ.
ನಾಗರಾಳ ಗ್ರಾಮದ ಶಿವಗೌಡ ಪಾಟೀಲ್ ಎಂಬುವವರಿಗೆ ನಾಲ್ಕು ಮಂದಿ ಹೆಣ್ಣು ಮಕ್ಕಳಿದ್ದು, ಈ ಪೈಕಿ ಸುಶ್ಮಿತಾ (19) ಕೊನೆಯವಳಾಗಿದ್ದಳು. ಅದೇ ಗ್ರಾಮದಲ್ಲಿ ತಹಶೀಲ್ದಾರ್ ಕಚೇರಿಯಲ್ಲಿ ಗ್ರಾಮ ಸೇವಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ವಿಠಲ ಬಸ್ತವಾಡ ಎಂಬ 29 ವರ್ಷದ ಯುವಕನೊಂದಿಗೆ ಸುಶ್ಮಿತಾಗೆ ಪ್ರೇಮ ಅಂಕುರಿಸಿತ್ತು. ಹೀಗಾಗಿ ಆತನೊಂದಿಗೆ ಮದುವೆಯಾಗಿ ಮನೆಯವರಿಗೆ ಬೈ ಬೈ ಹೇಳಿದ್ದಳು.
ಇದನ್ನೂ ಓದಿ: ಗಿರೀಶ್ ಮಟ್ಟಣ್ಣನವರ ಬಾಂಬ್ ಇಟ್ಟಿದ್ದ ಪ್ರಕರಣ
ಮಗಳ ಪ್ರೇಮದ ಬಗ್ಗೆ ಗೊತ್ತಿಲ್ಲದೇ ಶಿವಗೌಡ ಅವರು ಮೊದಲು ರಾಯಭಾಗ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಬಳಿಕ ಮಗಳ ಪ್ರೇಮದ ವಿಷಯ ಗೊತ್ತಾಗಿತ್ತು. ಇದರಿಂದ ಆಕ್ರೋಶಗೊಂಡ ಶಿವಗೌಡ ತಮ್ಮ ಮಗಳು ಇನ್ನು ತಮ್ಮ ಪಾಲಿಗೆ ಸತ್ತಳೆಂದು ಘೋಷಿಸಿ ಶಾಸ್ರೋಕ್ತವಾಗಿ ಆಕೆಯ ತಿಥಿ ಆಚರಿಸಿದ್ದಾರೆ. ಇದಷ್ಟೇ ಅಲ್ಲದೇ, ಬಂಧು-ಬಳಗದವರೊಂದಿಗೆ ಊರಿನವರನ್ನೆಲ್ಲಾ ಕರೆದು ಊಟ ಹಾಕಿಸಿ ತಿಥಿ ಕಾರ್ಯ ಮಾಡಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಶಿವಗೌಡ, ಸಂಸ್ಕಾರ ಬಿಟ್ಟು ನನ್ನ ಮಗಳು ಈ ರೀತಿ ಮಾಡಿದ್ದಾಳೆ. ಆಕೆ ನಮ್ಮ ಮನಸ್ಸು ನೋಯಿಸಿದ್ದಾಳೆ. ಇನ್ನು ನಮ್ಮ ಪಾಲಿಗೆ, ನಮ್ಮ ಮನೆಯವರ ಪಾಲಿಗೆ ಆಕೆ ತೀರಿಕೊಂಡಿದ್ದಾಳೆಂದು ಈ ರೀತಿ ಮಾಡಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರಿಶಬ್ ಶೆಟ್ಟಿ ಸಂತೋಷದಿಂದ ಇರಲಿ ಒಳ್ಳೆಯ ಸಿನಿಮಾ ಕೊಡಲಿ
ನನ್ನ ಮಗಳಿಗೆ ಕೇವಲ 19 ವರ್ಷ. ಎಲ್ಲರೂ ಹೆಣ್ಣು ಮಕ್ಕಳೇ ಆಗಿದ್ದು, ನನಗೆ ಗಂಡು ಮಕ್ಕಳಿಲ್ಲ. ವಯಸ್ಸಾಗಿರುವ ಕಾಲದಲ್ಲಿ ಈ ರೀತಿ ಮಾಡುವುದು ಸರಿಯಲ್ಲ. ಯಾವುದೇ ಹೆಣ್ಣು ಮಕ್ಕಳಾಗಲೀ ಸಂಸ್ಕಾರ ಬಿಡಬೇಡಿ. ನಿಮ್ಮ ತಂದೆ-ತಾಯಿ ಮನಸ್ಸು ನೋಯಿಸಬೇಡಿ ಎಂದು ಶಿವಗೌಡ ಕಣ್ಣೀರು ಹಾಕಿದ್ದಾರೆ.