)
EPFO ಸ್ಟಾಫ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ನಡೆದ 70 ಕೋಟಿ ರೂ. ವಂಚನೆ ಪ್ರಕರಣ ಇದೀಗ ಗಂಭೀರ ತಿರುವು ಪಡೆದುಕೊಂಡಿದೆ.. ಪ್ರಾಥಮಿಕ ತನಿಖೆ ಇನ್ನೆರಡು ದಿನಗಳಲ್ಲಿ ಪೂರ್ಣಗೊಂಡು, ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲು ಪೊಲೀಸರು ತೀರ್ಮಾನಿಸಲಾಗಿದೆ.. ಸದ್ಯ ತನಿಖೆಯನ್ನು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ವಹಿಸಲಾಗಿದ್ದು, ಕೇಂದ್ರ ವಿಭಾಗದ ಡಿಸಿಪಿ ಅಕ್ಷಯ್ ಎಂ ಹಾಕೆ ಅವರ ನೇತೃತ್ವದಲ್ಲಿ ಪ್ರಕರಣದ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ.
ಈ ವಂಚನೆ ಪ್ರಕರಣದಲ್ಲಿ ಸೊಸೈಟಿಯ ಅಕೌಂಟೆಂಟ್ ಜಗದೀಶ್ ಕೇಂದ್ರ ಭಾಗಿಯಾಗಿರುವುದು ತನಿಖೆಯಲ್ಲಿ ಬಹಿರಂಗವಾಗಿದ್ದು, ಪ್ರಾರಂಭಿಕ ಹಂತದಲ್ಲಿ ಸಿಇಒ ಗೋಪಿನಾಥ್ ಈ ವಂಚನೆಯ ಮುಖ್ಯ ಸಂಚುಕೋರ ಎಂದು ಪೊಲೀಸರು ಶಂಕಿಸಿದ್ದರು. ಆದರೆ ದಾಖಲೆ ಮತ್ತು ಬ್ಯಾಂಕ್ ವ್ಯವಹಾರಗಳ ಪರಿಶೀಲನೆಯಲ್ಲಿ ಅಕೌಂಟೆಂಟ್ ಜಗದೀಶ್ ನಡೆಸಿದ ಹಣ ವರ್ಗಾವಣೆ ಕೌಶಲ್ಯ ಪೊಲೀಸರನ್ನೇ ಬೆಚ್ಚಿಬೀಳಿಸಿದೆ. ಕೇವಲ 21 ಸಾವಿರ ಸಂಬಳ ಪಡೆಯುತ್ತಿದ್ದ ಜಗದೀಶ್, ಕೋಟ್ಯಾಂತರ ಆಸ್ತಿ, ಐಷಾರಾಮಿ ಕಾರು, ಮನೆ ಮತ್ತು ಫಾರ್ಮ್ ಹೌಸ್ ಗಳನ್ನು ಹೊಂದಿರುವುದು ಕಂಡುಬಂದಿದ್ದು, ಅವನ ಸಂಪತ್ತಿನ ಮೌಲ್ಯದ ಏಕಾಏಕಿ ಏರಿಕೆಯ ಕುರಿತು ಹಲವು ಪ್ರಶ್ನೆಗಳು ಎದ್ದಿವೆ.
ಮಾಹಿತಿ ಪ್ರಕಾರ ಜಗದೀಶ್ ಈ ವಂಚನೆಯನ್ನು ಒಬ್ಬನೇ ಮಾಡಿಲ್ಲ.. ಜೊತೆಗೆ ಅವನ ಪತ್ನಿ ಲಕ್ಷ್ಮೀ ಕೂಡ ಇದರಲ್ಲಿ ನೇರವಾಗಿ ಭಾಗಿಯಾಗಿದ್ದಾಳೆ.. ಹೂಡಿಕೆದಾರರ ಹಣ ಬ್ಯಾಂಕ್ಗೆ ಸೇರುತ್ತಿದೆ ಎಂಬಂತೆ ದಾಖಲೆಗಳನ್ನು ತಯಾರಿಸಿ, ವಾಸ್ತವದಲ್ಲಿ ಆ ಹಣವನ್ನು ನಾಲ್ಕೈದು ವಿಭಿನ್ನ ಖಾತೆಗಳ ಮೂಲಕ ಬೇರೆಡೆಗೆ ತಿರುಗಿಸಲಾಗಿದೆ.. ಇತರರ ಹೆಸರಿನಲ್ಲಿ ಕೆಲ ಖಾತೆಗಳನ್ನು ತೆರೆದು, ಹಣದ ಹಾದಿಯನ್ನು ಮಸುಕುಗೊಳಿಸುವ ಪ್ರಯತ್ನವೂ ನಡೆದಿದೆ.. ಹೂಡಿಕೆ ಮಾಡಿದ ಸದಸ್ಯರು ಹಣ ಹಿಂತೆಗೆದಾಗ ಅಥವಾ ವಿವರ ಕೇಳಿದಾಗ, ಜಗದೀಶ್ ಎಸ್ಕೇಪ್ ಆಗಿದ್ದು ಈಗ ಸ್ಪಷ್ಟವಾಗಿದೆ.
ಅಂಜನಾಪುರದಲ್ಲಿರುವ ಜಗದೀಶ್ ನಿವಾಸದ ಮೇಲೆ ಪೊಲೀಸರು ಮಂಗಳವಾರ ದಾಳಿ ನಡೆಸಿದ್ದು, ಅಲ್ಲಿ ಹಲವು ದಾಖಲೆಗಳು ಮತ್ತು ಸುಮಾರು ಅರ್ಧ ಕಿಲೋ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಈವರೆಗೆ ಜಗದೀಶ್ ಪತ್ನಿ ಲಕ್ಷ್ಮೀ ಮತ್ತು ಸೊಸೈಟಿ ಸಿಇಒ ಗೋಪಿನಾಥ್ ಬಂಧಿತರಾಗಿದ್ದಾರೆ. ಆದರೆ ಜಗದೀಶ್ ಮಾತ್ರ ತಲೆಮರೆಸಿಕೊಂಡಿದ್ದು, ಆತನಿಗಾಗಿ ವಿಶೇಷ ಪೊಲೀಸ್ ತಂಡವು ಹುಡುಕಾಟ ನಡೆಸಿದೆ.. ಪ್ರಕರಣದಲ್ಲಿ ಅಕ್ರಮ ಆಸ್ತಿ ಸಂಗ್ರಹ ಮತ್ತು ಬೇರೆ ಅಧಿಕಾರಿಗಳ ಪಾತ್ರದ ಬಗ್ಗೆ ಸಂಶಯ ವ್ಯಕ್ತವಾಗಿರುವುದರಿಂದ, ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗುತ್ತಿದೆ. ಈ ತನಿಖೆ ಆರಂಭವಾದ ಬಳಿಕ ವಂಚನೆಯ ನಿಜವಾದ ವ್ಯಾಪ್ತಿ ಮತ್ತು ವಂಚನೆ ಜಾಲದಲ್ಲಿ ಮತ್ತಷ್ಟು ಮಂದಿ ಭಾಗಿಯಾಗಿದ್ದಾರೆಯೇ ಎಂಬುದನ್ನು ಹೊರತರುವ ಸಾಧ್ಯತೆ ಇದೆ..
ಈ ವಂಚನೆ ಪ್ರಕರಣ ಈಗ EPFO ಸೊಸೈಟಿ ಸದಸ್ಯರ ಮೇಲಷ್ಟೇ ಅಲ್ಲದೇ, ಸರ್ಕಾರಿ ಸಂಸ್ಥೆಗಳ ಆರ್ಥಿಕ ವ್ಯವಹಾರದ ಸುರಕ್ಷತೆಯ ಮೇಲೂ ಪ್ರಶ್ನೆ ಹುಟ್ಟುಹಾಕಿದೆ. ಮುಂದಿನ ಕೆಲವು ದಿನಗಳಲ್ಲಿ ಪ್ರಕರಣ ಇನ್ನಷ್ಟು ದೊಡ್ಡ ಮಟ್ಟದ ರಹಸ್ಯಗಳ ಬಯಲಿಗೆ ಕಾರಣವಾಗಬಹುದು..