ಮದ್ಯ ಸೇವಿಸಲು ಹಣ ನೀಡದ ಕಾರಣಕ್ಕೆ ಪಾಪಿ ಪತಿಯೊಬ್ಬ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಪಾರ್ವತಿಪುರಂ ಮಾನ್ಯಂ ಜಿಲ್ಲೆಯಲ್ಲಿ ನಡೆದಿದೆ. ಮೇಸ್ತ್ರಿ ಕೆಲಸ ಮಾಡುವ ರಾಮಕೃಷ್ಣ ತನ್ನ ಪತ್ನಿ ತ್ರಿವೇಣಿಯನ್ನು ಮಿಕ್ಸರ್ ವೈರ್ ಬಳಸಿ ಕೊಲೆ ಮಾಡಿದ್ದಾನೆ.

Parvathipuram Murder Case: ಮದ್ಯ ಕುಡಿಯಲು ಹಣ ನೀಡಲಿಲ್ಲವೆಂಬ ಕಾರಣಕ್ಕೆ ಕಟುಕ ಗಂಡನೊಬ್ಬ ತನ್ನ ಹೆಂಡತಿಯನ್ನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿದೆ. ಈ ಆಘಾತಕಾರಿ ಘಟನೆ ಆಂಧ್ರಪ್ರದೇಶದ ಮಾನ್ಯಂ ಜಿಲ್ಲೆಯ ಪಾರ್ವತಿಪುರಂನಲ್ಲಿ ನಡೆದಿದೆ. ಮಕ್ಕುವ ಮಂಡಲದ ಗೋಪಾಲಪುರಂ ಗ್ರಾಮದ ತ್ರಿವೇಣಿ ಮತ್ತು ಪಾರ್ವತಿಪುರಂ ಮಂಡಲದ ಬಂಡಲುಪ್ಪಿ ಗ್ರಾಮದ ರಾಮಕೃಷ್ಣ ಕೆಲವು ವರ್ಷಗಳ ಹಿಂದೆ ವಿವಾಹವಾಗಿದ್ದರು. ಈ ದಂಪತಿ ಸಾಲೂರು ಪಟ್ಟಣದ ದುಗ್ಗನ ಬೀದಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಇವರಿಗೆ ಆದಿತ್ಯ ಮತ್ತು ಮಹೇಂದರ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.
ರಾಮಕೃಷ್ಣ ಮೇಸ್ತ್ರಿ ಕೆಲಸ ಮಾಡುತ್ತಿದ್ದರೆ, ತ್ರಿವೇಣಿ ಸಣ್ಣಪುಟ್ಟ ಮನೆ ಕೆಲಸ ಮಾಡುತ್ತಿದ್ದರು. ಕುಟುಂಬವನ್ನ ಪೋಷಿಸಲು ತ್ರಿವೇಣಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದರು. ಆದರೆ ಮಳೆಯಿಂದ ಕೆಲಸವಿಲ್ಲದ ಕಾರಣ ಕಳೆದ ಕೆಲವು ದಿನಗಳಿಂದ ಅವರು ಮನೆಯಲ್ಲಿಯೇ ಇದ್ದರು. ಈ ಸಂದರ್ಭದಲ್ಲಿ ರಾಮಕೃಷ್ಣ ಮದ್ಯಕ್ಕಾಗಿ ಹಣ ಕೇಳಿದ್ದರು. ಆದರೆ ತ್ರಿವೇಣಿ ತನ್ನ ಬಳಿ ಹಣವಿಲ್ಲವೆಂದು ಹೇಳಿ ನಿರಾಕರಿಸಿದ್ದರು. ಈ ವಿಷಯಕ್ಕೆ ಇಬ್ಬರ ನಡುವೆ ಜಗಳವಾಯಿತು. ಈ ಸಂದರ್ಭದಲ್ಲಿ ತೀವ್ರ ಕೋಪಗೊಂಡ ರಾಮಕೃಷ್ಣ ಮಿಕ್ಸರ್ ವೈರ್ ತೆಗೆದುಕೊಂಡು ಹೆಂಡತಿಯ ಕುತ್ತಿಗೆಗೆ ಕಟ್ಟಿ ಕೊಲೆ ಮಾಡಿದ್ದಾನೆ.
ಸ್ವಲ್ಪ ಸಮಯದ ನಂತರ ಮನೆಗೆ ಬಂದ ಕಿರಿಯ ಮಗ ಮಹೇಂದರ್, ತನ್ನ ತಾಯಿ ಸತ್ತು ಬಿದ್ದಿರುವುದನ್ನ ನೋಡಿ ಆಘಾತಕ್ಕೊಳಗಾಗಿದ್ದ. ಏನಾಯಿತು ಎಂದು ತಂದೆಯನ್ನ ಕೇಳಿದ್ದಾನೆ. ಈ ವೇಳೆ ರಾಮಕೃಷ್ಣ, ʼನಿನ್ನ ತಾಯಿ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ. ಆಕೆ ಹಾರ್ಟ್ ಅಟ್ಯಾಕ್ ಆಗಿ ಸಾವನ್ನಪ್ಪಿದ್ದಾಳೆಂದು ಅಜ್ಜಿಗೆ ಮತ್ತು ನೆರೆಹೊರೆಯವರಿಗೆ ಹೇಳುವಂತೆ ತಿಳಿಸಿದ್ದ. ಕೂಡಲೇ ತ್ರಿವೇಣಿಯವರನ್ನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ವೈದ್ಯರು ಅವರು ಅದಾಗಲೇ ಸಾವನ್ನಪ್ಪಿದ್ದಾರೆಂದು ತಿಳಿಸಿದರು.
ವಿಷಯ ತಿಳಿದ ತಕ್ಷಣ ರಾಮಕೃಷ್ಣನ್ ಸ್ಥಳದಿಂದ ಪರಾರಿಯಾಗಿದ್ದಾನೆ. ಕಿರಿಯ ಮಗ ಮಹೇಂದರ್ ತನ್ನ ಅಣ್ಣ ಆದಿತ್ಯನಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದು, ನಂತರ ಸಂಬಂಧಿಕರ ಸಹಾಯದಿಂದ ಪೊಲೀಸರಿಗೆ ದೂರು ನೀಡಿದ್ದಾರೆ. ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಬಳಿಕ ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಯ ಬಂಧನಕ್ಕೆ ಬಲೆ ಬಿಸಿದ್ದಾರೆ.