)
ಬೆಂಗಳೂರು: ನಗರದಲ್ಲಿ ಪುತ್ತೂರು ಮೂಲದ ಯುವಕನೊಬ್ಬ ಲಾಡ್ಜ್ ಒಂದರಲ್ಲಿ ನಿಗೂಢವಾಗಿ ಮೃತಪಟ್ಟ ಘಟನೆ ಮಡಿವಾಳದ ಗ್ರ್ಯಾಂಡ್ ಚಾಯ್ಸ್ ಲಾಡ್ಜ್ನಲ್ಲಿ ನಡೆದಿದೆ. ರೂಮ್ನಲ್ಲಿ ಶವವಾಗಿ ಪತ್ತೆಯಾದ ಯುವಕ ತಕ್ಷಿತ್ (20) ತನ್ನ ಪ್ರೇಯಸಿಯೊಂದಿಗೆ 8 ದಿನ ಕಾಲ ವಾಸವಾಗಿದ್ದು, ನಿನ್ನೆ ಹೃದಯಾಘಾತದಿಂದ ಯುವಕ ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ವರದಿ ಪ್ರಕಾರ, ಮಡಿಕೇರಿಯ ವಿರಾಜಪೇಟೆಯ ಮೂಲದ ಪ್ರಿಯಾಂಕಾ ಎಂಬ ಯುವತಿಯೊಂದಿಗೆ ತಕ್ಷಿತ್ ಅಕ್ಟೋಬರ್ 9ರಂದು ಲಾಡ್ಜ್ನಲ್ಲಿ ರೂಮ್ ಬುಕ್ ಮಾಡಿದ್ದ. ಇಬ್ಬರೂ ಪಣಂಬೂರಿನಲ್ಲಿ ಬಿಬಿಎ ಓದುತ್ತಿದ್ದರು, ಆದರೆ ಬ್ಯಾಕ್ಲಾಗ್ಗಳ ಕಾರಣದಿಂದ ಕಾಲೇಜು ಬಿಟ್ಟಿದ್ದರು.
ತಕ್ಷಿತ್ ತನ್ನ ಕುಟುಂಬಕ್ಕೆ ಮೈಸೂರಿಗೆ ಓದಲು ಹೋಗುತ್ತಿದ್ದೇನೆ ಎಂದು ಹೇಳಿ ಬೆಂಗಳೂರಿಗೆ ಬಂದಿದ್ದ. ನಂತರ ಪ್ರಿಯಾಂಕಾ ಜೊತೆ ಲಾಡ್ಜ್ನಲ್ಲಿ ವಾಸಿಸಲು ನಿರ್ಧರಿಸಿದ್ದ. ಇಬ್ಬರೂ ಕಳೆದ 8 ದಿನಗಳ ಕಾಲ ಲಾಡ್ಜ್ನಲ್ಲೇ ವಾಸಿಸುತ್ತಿದ್ದು, ಹೊರಗೆ ಹೋಗದೆ ಸ್ವಿಗ್ಗಿಯಿಂದ ಪಾರ್ಸೆಲ್ ತರಿಸಿಕೊಂಡು ಊಟ ಮಾಡುತ್ತಿದ್ದರು. ಇಬ್ಬರೂ ಸ್ವಿಗ್ಗಿಯಿಂದ ಊಟ ತರಿಸಿಕೊಂಡಿದ್ದರು. ಊಟ ಮಾಡಿದ ನಂತರ ಇಬ್ಬರಿಗೂ ಅಸ್ವಸ್ಥತೆ ಕಾಣಿಸಿಕೊಂಡಿದ್ದು, ಹತ್ತಿರದ ಮೆಡಿಕಲ್ಗೆ ತೆರಳಿ ಮಾತ್ರೆಗಳನ್ನು ತಂದಿದ್ದರು ಎನ್ನಲಾಗಿದೆ.
ಆದರೆ, ಪ್ರಿಯಾಂಕಾ ಆರೋಗ್ಯದಲ್ಲಿ ಸುಧಾರಣೆಯಾಗುತ್ತಿದ್ದಂತೆಯೇ ಲಾಡ್ಜ್ ರೂಮ್ ಖಾಲಿ ಮಾಡಿ ಊರಿಗೆ ಹೋಗಿದ್ದಾಳೆ. ನಂತರ ರೂಮಿನಲ್ಲಿದ್ದ ತಕ್ಷಿತ್ ಮಲಗಿದ್ದಲ್ಲೇ ಪ್ರಾಣ ಕಳೆದುಕೊಂಡಿದ್ದಾನೆ ಎನ್ನಲಾಗುತ್ತಿದೆ. ನಿನ್ನೆ ತಡರಾತ್ರಿ ಲಾಡ್ಜ್ ಸಿಬ್ಬಂದಿ ರೂಮಿನ ಬಾಗಿಲು ತಟ್ಟಿದಾಗ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಬಳಿಕ ಮಾಸ್ಟರ್ ಕೀ ಬಳಸಿ ಬಾಗಿಲು ತೆರೆಯುತ್ತಿದ್ದಂತೆಯೇ ತಕ್ಷಿತ್ ಶವವಾಗಿ ಪತ್ತೆಯಾಗಿದ್ದಾನೆ. ತಕ್ಷಣ ಸಿಬ್ಬಂದಿ ಮಡಿವಾಳ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಹೃದಯಾಘಾತವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈಗಾಗಲೇ ಪೋಲಿಸ್ರಿಂದ ತನಿಖೆ ಶುರುವಾಗಿದ್ದು, ನಿಜಾಂಶವೇನೆಂಬುವುದು ನಂತರದಲ್ಲಿ ಹೊರಬರಲಿದೆ.
ಈಗಾಗಲೇ ಪೊಲೀಸರು ಸ್ವಿಗ್ಗಿಯಿಂದ ತರಿಸಿದ ಆಹಾರ ಮಾದರಿಗಳನ್ನು ವಶಪಡಿಸಿಕೊಂಡಿದ್ದಾರೆ. ವಿಷದ ಅಂಶ ಇರಬಹುದೆಂಬ ಶಂಕೆಯೂ ಇದೆ. ಜೊತೆಗೆ, ಲಾಡ್ಜ್ನ CCTV ದೃಶ್ಯಗಳು ಮತ್ತು ತಕ್ಷಿತ್ನ ಮೊಬೈಲ್ ಫೋನ್ಗಳನ್ನು ಪರಿಶೀಲಿಸಲಾಗುತ್ತಿದೆ. ಇನ್ನು ಈ ಕೇಸ್ನಿಂದ ಪೊಲೀಸರಿಗೆ ಹಲವು ಅನುಮಾನಗಳನ್ನು ಹುಟ್ಟಿಸಿವೆ. ಪ್ರಿಯಾಂಕಾ ಹೊರಟ ನಂತರ ತಕ್ಷಿತ್ ಸತ್ತದ್ದೇ ಹೇಗೆ? ತಿಂದ ಆಹಾರದಲ್ಲಿ ವಿಷದ ಅಂಶವಿತ್ತೇ? ಪ್ರೇಮ ವೈಫಲ್ಯದಿಂದ ಆತ್ಮಹತ್ಯೆ ಮಾಡಿಕೊಂಡ್ನಾ? ಅಥವಾ ಹೃದಯಾಘಾತದಿಂದ ಸಾವಾಗಿತ್ತಾ..? ಈ ಎಲ್ಲ ಪ್ರಶ್ನೆಗಳಿಗೆ ತನಿಖೆಯ ನಂತರ ಉತ್ತರ ಸಿಗಲಿದೆ. ಸಧ್ಯಕ್ಕೆ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಮುಂದುವರಿಸಿದ್ದು, ವೈದ್ಯಕೀಯ ವರದಿ ಬಂದ ನಂತರ ಸಾವಿನ ನಿಖರ ಕಾರಣ ಬಹಿರಂಗವಾಗಲಿದೆ.