ಬೆಂಗಳೂರು : ಸದಾ ರಾಜ್ಯದ, ರಾಜ್ಯದ ಜನತೆಯ ರಕ್ಷಣೆ ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲೇ ನಿರತವಾಗಿರುವ ಪೊಲೀಸರಿಗೆ ಈಗ ಸಾಹಿತ್ಯ ಸಂಭ್ರಮ.
ಹೌದು, ಹಗಲು-ರಾತ್ರಿಯೆನ್ನದೆ ಸದಾ ಕಾರ್ಯನಿರತರಾಗಿರುವ ಪೊಲೀಸರಿಗೆ ಈಗ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಳ್ಳಲು ನವೆಂಬರ್.27ರಂದು ಸಂಜೆ 4.30ಕ್ಕೆ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆಯಲಿರುವ `ಪೊಲೀಸ್ ಸಾಹಿತ್ಯ ಸಂಭ್ರಮ' ವೇದಿಕೆಯಾಗಲಿದೆ.
ಬೆಂಗಳೂರು ನಗರ ಪೊಲೀಸ್, ಪೊಲೀಸ್ ಸಾಹಿತ್ಯ ವೇದಿಕೆ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಕವಿಗೋಷ್ಠಿ ಮತ್ತು ಡಾ.ಡಿ.ಸಿ. ರಾಜಪ್ಪ ಅವರ ಸಂಪಾದಿತ ಕೃತಿ 'ಸಮವಸ್ತ್ರದೊಳಗೊಂದು ಸುತ್ತು-ಸಂಪುಟ 4' ಬಿಡುಗಡೆಗೊಳ್ಳಲಿದೆ.
ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ಕಾರ್ಯಕ್ರಮದ ಉದ್ಘಾಟನೆ ಮತ್ತು ಪುಸ್ತಕ ಬಿಡುಗಡೆಯನ್ನು ಮಾಡಲಿದ್ದಾರೆ. ಪುಸ್ತಕದ ಕುರಿತು ಕವಿ, ಚಂದ್ರಶೇಖರ ತಾಳ್ಯ ಅನಿಸಿಕೆ ಹಂಚಿಕೊಳ್ಳಲಿದ್ದಾರೆ. ಡಿಜಿ, ಐಜಿಪಿ ನೀಲಮಣಿ ಎನ್. ರಾಜು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ, ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರುತ್ತಾರೆ.
ರಾಜ್ಯ ಮಟ್ಟದ 4 ನೇ ಪೊಲೀಸ್ ಕವಿಗೋಷ್ಠಿಯನ್ನು ಖ್ಯಾತ ಕವಿ ಹೆಚ್.ಎಸ್.ವೆಂಕಟೇಶಮೂರ್ತಿ ಅವರು ಉದ್ಘಾಟಿಸಲಿದ್ದು, ನಿವೃತ್ತ ಮಹಾನಿರ್ದೇಶಕ ಡಾ.ಅಜಯ್ ಕುಮಾರ್ ಸಿಂಹ ಅಧ್ಯಕ್ಷತೆ ವಹಿಸಲಿದ್ದಾರೆ.