ಶ್ರೀರಾಮ-ಲಕ್ಷ್ಮಣರಿಗೆ ಸಿಹಿ ಹಣ್ಣು ತಿನ್ನಿಸಿದ ಶಬರಿ

ತಾಯಿ ದಾರಿಹೋಕರಿಗೆ ಇಲ್ಲಿ ಉಳಿದುಕೊಳ್ಳಲು ಆಶ್ರಯ ದೊರೆಯುವುದೇ' ಎಂದು ಶಬರಿಯನ್ನು ಕೇಳುತ್ತಾನೆ. ಆಗ ಶಬರಿಯು ನಡುಗುವ ಎದೆಯಿಂದ ಧ್ವನಿ ಬಂದ ಕಡೆಗೆ ತಿರುಗಿ "ಎಲೈ ಮಹಾಪುರುಷನೇ, ನೀನು ಶ್ರೀರಾಮನೇ” ಎಂದು ಕೇಳುತ್ತಾಳೆ.

Written by - Manjunath N | Last Updated : Mar 19, 2025, 02:25 PM IST
  • ತಾಯಿ ದಾರಿಹೋಕರಿಗೆ ಇಲ್ಲಿ ಉಳಿದುಕೊಳ್ಳಲು ಆಶ್ರಯ ದೊರೆಯುವುದೇ' ಎಂದು ಶಬರಿಯನ್ನು ಕೇಳುತ್ತಾನೆ
  • ಆಗ ಶಬರಿಯು ನಡುಗುವ ಎದೆಯಿಂದ ಧ್ವನಿ ಬಂದ ಕಡೆಗೆ ತಿರುಗಿ "ಎಲೈ ಮಹಾಪುರುಷನೇ, ನೀನು ಶ್ರೀರಾಮನೇ” ಎಂದು ಕೇಳುತ್ತಾಳೆ
  • ಅದಕ್ಕೆ ಶ್ರೀರಾಮನು ಹೌದು ತಾಯಿ ನನ್ನನ್ನು ರಾಮ ಎನ್ನುತ್ತಾರೆ. ಆಗ ಶಬರಿಯು ಶ್ರೀರಾಮನನ್ನು ಕಂಡು ಬೆರಗಾದಳು
ಶ್ರೀರಾಮ-ಲಕ್ಷ್ಮಣರಿಗೆ ಸಿಹಿ ಹಣ್ಣು ತಿನ್ನಿಸಿದ ಶಬರಿ

ಶ್ರೀರಾಮನ ಗುಣಸ್ವಭಾವಗಳ ಸೆಳೆತಕ್ಕೆ ಸಿಕ್ಕಿ ಅವನನ್ನು ಕಾಣುವುದೇ ಜೀವನದ ಏಕೈಕ ಗುರಿ ಎಂದು ಭಾವಿಸಿದ ಅಸಂಖ್ಯಾತ ಭಕ್ತರಲ್ಲಿ ಶಬರಿಯೂ ಒಬ್ಬಳು. ಈಕೆ ಮಾತಂಗ ಋಷಿಯ ಆಶ್ರಮದಲ್ಲಿ ಇದ್ದವಳು. ಮಾತಂಗರು ದಿವ್ಯಲೋಕವನ್ನು ಸೇರಿದ ಬಳಿಕ ರಾಮಧ್ಯಾನದಲ್ಲಿ ತೊಡಗಿ ರಾಮನ ದರ್ಶನಕ್ಕಾಗಿ ಕಾದಿದ್ದಳು.

ಮಾತಂಗಾಶ್ರಮದ ಪರ್ಣಶಾಲೆಯ ಮುಂದಿನ ವನದಲ್ಲಿ ಶಬರಿಯು ಶ್ರೀರಾಮನ ಆಗಮನಕ್ಕಾಗಿ. ಕಾಯುತ್ತಿದ್ದಳು. ತಪಸ್ವಿನಿಯಂತೆ ಕೃಷ್ಣಾಜಿನಾಂಬರವನ್ನು ಧರಿಸಿದ ಶಬರಿಯು ವೃದ್ಧೆಯಂತೆ. ಬುದ್ಧಿಹೀನಳಂತೆ ಕಾಣುತ್ತಾಳೆ. ಶ್ರೀರಾಮ ನೀನೇಂದು ಇಲ್ಲಿಗೆ ಬರುವೆ? ನಾನು ನಿಂತಲ್ಲಿಯೇ ನಿನಗಾಗಿ ಕಾದಿದ್ದೇನೆ. ನೀನಿರುವ ಸ್ಥಳವನ್ನು ನಾನು ತಿಳಿದಿಲ್ಲ. ನೀನಿರುವ ಕಡೆಗೆ ಬರುವ ದಾರಿಯನ್ನೂ ಅರಿತಿಲ್ಲ. ನೀನು ಬಂದೇ ಬರುವೆ ಎಂಬ ನಂಬಿಕೆಯಿಂದ, ನೆಚ್ಚಿನಿಂದ ಹುಚ್ಚಿನಿಂದ, ಆಸೆಯಿಂದ ಕಾದಿರುವೆ ಎಂದುಕೊಳ್ಳುತ್ತಾ ಶಬರಿಯು ಬನದೊಳಗೆ ಹೋಗುತ್ತಾಳೆ.

ಶಬರಿಯು ಶ್ರೀ ರಾಮನಿಗಾಗಿ ತಳಿರು, ಹೂ, ಹಣ್ಣು ಹಂಪಲು, ಜೇನು, ಮಧುಪರ್ಕಗಳನ್ನು ಸಂಗ್ರಹಿಸಿ, ಶ್ರೀರಾಮನು ಬಾರದಿದ್ದರೆ ನನಗೇನೂ ತೋಚುವುದಿಲ್ಲ. ಅತ್ಯಂತ ಸಿಹಿಯಾದ ಈ ಹಣ್ಣುಗಳನ್ನು ತಿನ್ನದಿದ್ದರೆ ಏನು ಮಾಡಲಿ? ರಾಮನಿಗಾಗಿ ಸಂಗ್ರಹಿಸಿರುವ ಇವೆಲ್ಲವನ್ನು ಯಾರಿಗೆ ನೀಡಲಿ ಎಂದುಕೊಳ್ಳುತ್ತಾ ಶ್ರೀರಾಮಚಂದ್ರನೇ ಬೇಗ ಬಾ ಎಂದು ಕಾತರಿಸುತ್ತಿರುತ್ತಾಳೆ. ಆ ಸಮಯದಲ್ಲಿ ರಾಮಲಕ್ಷ್ಮಣರು ಕಾಣಿಸಿಕೊಳ್ಳುತ್ತಾರೆ.

ಯಾವಾಗ ನಾನು ಶ್ರೀರಾಮನನ್ನು ಕಾಣುವೆ? ದಶರಥನ ಪುತ್ರನಂತೆ, ಸಾಧು ಸಜ್ಜನರ ಮಿತ್ರನಂತೆ, ಅವನು ಧೀರ ಶೂರ, ವೀರ, ಗಂಭೀರ, ಸದ್ಗುಣಗಳ ಸಾಕಾರ ಮೂರ್ತಿಯಂತೆ, ಅವುಗಳ ಸಾರವೇ ಮೈವೆತ್ತಂತೆ ಇರುವನಂತೆ. ಅಂಥ ಶ್ರೀರಾಮನನ್ನು ನಾನು ಯಾವಾಗ ಕಾಣುವೆನು? ಶ್ರೀರಾಮನು ಬಿಲ್ಲು ಹಿಡಿದು ಬರುತ್ತಾನಂತೆ! ಶತ್ರುಗಳನ್ನು ಹೆದರಿಸುವವರನ್ನು ಎದುರಿಸುವನಂತೆ! ಆದರೂ ತುಂಬಾ ಸೌಮ್ಯ ಸ್ವಭಾವದವನಂತೆ, ಮಗುವಿನ ಮುಗ್ಧತೆ ಉಳ್ಳವನಾಗಿರುನಂತೆ, ಅರಸುತನವನ್ನೇ ತೊರೆದನಂತೆ, ತಪಸ್ವೀತನವನ್ನ ತನ್ನದಾಗಿಸಿಕೊಂಡನಂತೆ, ತಮ್ಮ ಲಕ್ಷ್ಮಣನೊಂದಿಗೆ ಕಾಡಿನಲ್ಲಿ ಬರುತ್ತಿದ್ದರೂ ಯಾವ ಭಯವೂ ಅವನಿಗೆ ಇಲ್ಲವಂತೆ, ಕೆಟ್ಟಕನಸು ಕಂಡ ರಾತ್ರಿ ಕಳೆದು ಸುಪ್ರಭಾತದಂತೆ ಇರುವನಂತೆ, ಗುರುಗಳು, ತಪಸ್ವಿಗಳು, ಸಾಧಕರೇ ಮೆಚ್ಚುವಂಥ ಸನ್ಮಂಗಳ ಮೂರ್ತಿಯಂತೆ ಅಂಥ ಶ್ರೀರಾಮನನ್ನ ಯಾವಾಗ ಕಾಣುವೇನೋ ಎಂದು ಹೇಳುತ್ತಾ ತಾನು ಕಟ್ಟಿದ್ದ ಪುಷ್ಪಮಾಲೆಗೆ ಪ್ರೀತಿಯಿಂದ ಚುಂಬಿಸುತ್ತಾಳೆ.

ಶ್ರೀರಾಮನು ಆಶ್ರಮದ ಬಾಗಿಲಲ್ಲಿ ನಿಂತು 'ತಾಯಿ ದಾರಿಹೋಕರಿಗೆ ಇಲ್ಲಿ ಉಳಿದುಕೊಳ್ಳಲು ಆಶ್ರಯ ದೊರೆಯುವುದೇ' ಎಂದು ಶಬರಿಯನ್ನು ಕೇಳುತ್ತಾನೆ. ಆಗ ಶಬರಿಯು ನಡುಗುವ ಎದೆಯಿಂದ ಧ್ವನಿ ಬಂದ ಕಡೆಗೆ ತಿರುಗಿ "ಎಲೈ ಮಹಾಪುರುಷನೇ, ನೀನು ಶ್ರೀರಾಮನೇ” ಎಂದು ಕೇಳುತ್ತಾಳೆ. ಅದಕ್ಕೆ ಶ್ರೀರಾಮನು ಹೌದು ತಾಯಿ ನನ್ನನ್ನು ರಾಮ ಎನ್ನುತ್ತಾರೆ. ಆಗ ಶಬರಿಯು ಶ್ರೀರಾಮನನ್ನು ಕಂಡು ಬೆರಗಾದಳು. ಅನಂತರ ಶ್ರೀ ರಾಮನ ಬಳಿಗೆ ಬಂದು ಅವನ ಮೈಯನ್ನು ಮುಟ್ಟಿ ಪಾದಕ್ಕೆ ನಮಸ್ಕರಿಸಿ ಅವನ ಕೈಯನ್ನು ಕಣ್ಣಿಗೊತ್ತಿಕೊಂಡು ಆನಂದದ ಕಣ್ಣೀರು ಸುರಿಸಿದಳು. ಬನ್ನಿ ಬನ್ನಿ ಎಂದು ಪ್ರೀತಿಯಿಂದ ಆಶ್ರಮಕ್ಕೆ ಆಹ್ವಾನಿಸಿದಳು. ಅಯ್ಯೋ ಇಂದು ಏನು ಸಿದ್ಧತೆ ನಡೆಸಿಲ್ಲವೆ ಎಂದು ಪೇಚಾಡುತ್ತಾಳೆ. ನಿನ್ನೆಯಷ್ಟು ಚೆನ್ನಾಗಿ ಸಿದ್ಧತೆ ಮಾಡಿಲ್ಲ ಎಂದು ನೊಂದುಕೊಳ್ಳುತ್ತಾಳೆ. ತಾನು ಪ್ರೀತಿಯಿಂದ ಕಟ್ಟಿದ ಹೂವಿನ ಮಾಲೆಯನ್ನು ಅವರ ಕೊರಳಿಗೆ ಹಾಕಿ ಹಿಗ್ಗಿ ಸಂಭ್ರಮಿಸುತ್ತಾಳೆ. ತಾನು ತಂದ ಹಣ್ಣನ್ನು ನೀಡುತ್ತಾ ಜಗತ್ತಿನಲ್ಲೇ ಇದರಷ್ಟು ರುಚಿಯಾದ ಹಣ್ಣು ಯಾವುದೂ ಇಲ್ಲ. ಇದನ್ನು ಸವಿಯಿರಿ ಎಂದು ನೀಡುತ್ತಾಳೆ. ಇದರಿಂದ ಪ್ರಸನ್ನರಾದ ರಾಮ ಲಕ್ಷ್ಮಣರನ್ನು ಕಂಡು ಶಬರಿ ಧನ್ಯಭಾವದಿಂದ ಆನಂದಿಸಿ ನರ್ತಿಸುತ್ತಾಳೆ.

ನಾನು ಈಗ ತುಂಬಾ ಸುಖಿಯಾಗಿಹನು, ನನ್ನ ಜೀವನದ ಮಹದಾಸೆ ನೆರವೇರಿದೆ. ನನ್ನ ಹಂಬಲ ಅಳಿದು ದುಂಬಿಯಾಗಿರುವೆನು. ನಾನು ಸುಖಿಯಾಗಿರುವೆನು, ನದಿ, ಹೊಳೆಯು, ಸಮುದ್ರವನ್ನ ಸೇರುವಂತೆ, ದೋಣಿಯು ದಡವನ್ನು ಸೇರುವಂತೆ, ನನ್ನ ಮನಸ್ಸು ನಿರಾಳವಾಗಿದೆ. ನಿಮ್ಮನ್ನು ನೋಡಿ, ನಿಮ್ಮೊಡನೆ ಮಾತನಾಡಿ, ನಿಮ್ಮ ದಣಿವನ್ನು ತಣಿಸಿ, ನಾನು ಆನಂದವಾಗಿದ್ದೇನೆ. ಇಂದು ನನ್ನ ಮನಸ್ಸಿನ ಭಾರ ಇಳಿದು ಹಗುರವಾಗಿದೆ. ಜೀವನ ಸಾರ್ಥಕವಾಗಿದೆ. ಪರಲೋಕ ಕರ ನೀಡಿ ಕರೆಯುತ್ತಿದೆ. ನಾನು ಅತ್ಯಂತ ಸುಖವಾಗಿರುವೆನು. ಆಗ ಶ್ರೀರಾಮನು ಶಬರಿಗೆ ನೀನು ನೀಡಿದ ಅದರ ಅತಿಥ್ಯದಿಂದ ನಾವು ಸುಖ, ಸಂತೋಷದಿಂದ ಇದ್ದೇವೆ. ಅರಣ್ಯದಲ್ಲಿದ್ದರೂ ಸ್ವರ್ಗದಂತಹ ಅನುಭವವಾಗಿದೆ. ಇಂಥ ಸವಿಯಾದ ಹಣ್ಣುಗಳನ್ನು ನೀಡಿರುವ ನಿನಗೆ ನಾವು ಋಣಿಯಾಗಿದ್ದೇವೆ, ಎಂದರು. ಈ ಎಲ್ಲಾ ಶ್ರೀರಾಮನ ಮಾತುಗಳನ್ನು ಕೇಳಿ ಶಬರಿ ತನ್ನ ಉದ್ವೇಗವನ್ನು ನಿಗ್ರಹಿಸಿಕೊಂಡು ಕಣ್ಣುಗಳಲ್ಲಿ ಕಂಬನಿಯನ್ನು ತುಂಬಿಕೊಂಡು ನನ್ನಾಸೆಯಂತೆ ನೀವು ನಮ್ಮ ಆಶ್ರಮಕ್ಕೆ ಬಂದಿದ್ದೀರಾ, ತುಂಬಾ ದಣಿದಿದ್ದೀರಾ, ಹಸಿವು ಬಾಯಾರಿಕೆಯಿಂದ ಬಳಲಿದ್ದೀರಾ? ನಾನು ಬಡವಳು, ಒಬ್ಬಳೇ ಏನು ತಾನೇ ಮಾಡುತ್ತಾಳೆ ಎಂದು ಮರುಕ ತಳೆದಿದ್ದೀರಾ? ಎಂದು ಶಬರಿಯು ಹೇಳುತ್ತಾಳೆ.

ಆಗ ಶ್ರೀರಾಮನು ತಾಯಿ ಏಕೆ ಈ ಕಣ್ಣೀರು, ನೀನು ನಮಗೆ ನೀಡಿರುವ ಅದರ, ಆತಿಥ್ಯ ಸತ್ಕಾರಗಳಲ್ಲಿ ಯಾವುದಕ್ಕೂ ಕೊರತೆಯಿಲ್ಲ. ನಮ್ಮ ಆಯೋಧ್ಯೆಯ ಅರಮನೆಗಿಂತಲೂ ಹೆಚ್ಚಿನ ಸತ್ಕಾರ ಇಲ್ಲಿ ನಮಗೆ ದೊರೆಯಿತು. ಇದು ಕಾಡು ಎಂಬುದನ್ನು ಮರೆತು ನಮ್ಮ ಮನೆ ಎಂಬ ಭಾವನೆ ನಮಗೆ ಬಂದಿದೆ. ನಿನ್ನನ್ನು ನಮ್ಮ ತಾಯಿ ಎಂದು ಭಾವಿಸಿದ್ದೇವೆ ಎನ್ನುತ್ತಾರೆ. ಆಗ ಶಬರಿಯು ಶ್ರೀರಾಮನಿಗೆ 'ನಿನ್ನ ರೂಪದಂತೆಯೇ ನಿನ್ನ ಮಾತು ಕೂಡ ತುಂಬಾ ಉದಾರವಾಗಿದೆ' ನಾನು ಧನ್ಯಳು, ಸಿದ್ಧರ, ಪುಣ್ಯ ಪುರುಷರ, ತಪಸ್ವಿಗಳ ವರ ನನಗೆ ಇಂದು ಲಭಿಸಿದೆ. ನಿಮ್ಮನ್ನು ಕಂಡ ಪುಣ್ಯವಂತೆ ನಾನಾಗಿದ್ದೇನೆ. ಇಂದಿಗೆ ನನ್ನ ಚಿಂತೆಯೆಲ್ಲಾ ಕರಗಿಹೋಯಿತು. ಗುರುಗಳನ್ನು ಪೂಜಿಸಿದ ತೃಪ್ತಿ ನನಗೆ ಇದೆ ಎನ್ನುತ್ತಾಳೆ. ಆಗ ಶ್ರೀರಾಮನು ನಿನ್ನಂಥ ಶಿಷ್ಠೆಯನ್ನು ಪಡೆದ ನಿನ್ನ ಗುರುಗಳು ಎಂಥ ಮಹಿಮಾನ್ವಿತರು ಆಗಿದ್ದಾರೆ. ನಾನು ಅವರ ಮಹಿಮೆ ಕೇಳಿದ್ದೇನೆ. ಅವರು ಶಾಂತ ಸ್ವಭಾವದವರು. ಈ ಶಾಂತಿಯ ವನ, ಆಶ್ರಮ ನನ್ನ ದುಃಖವನ್ನೆಲ್ಲಾ ಮರೆಸಿತು. ನೀನು ಪರಿಶುದ್ಧ ಭಾವಿಸುತ್ತೇನೆ ಎಂದು ಶಬರಿಗೆ ಹೇಳಿದನು. ಪ್ರೇಮವುಳ್ಳವಳು, ಇಂದು ನಮ್ಮ ಸುದಿನ ಎಂದು

ಈ ರೀತಿಯ ಮಾತನ್ನು ಕೇಳಿದ ಶಬರಿಯು "ಶ್ರೀರಾಮ ನನ್ನನ್ನು ಏಕೆ ಹೋಗಳುತ್ತಿರುವೆ? ಇದೆಲ್ಲಾ ನನ್ನ ಗುರುಗಳಾದ ಮತಂಗ ಋಷಿಗಳ ಕೃಪೆ. ನಮ್ಮ ಗುರುಗಳು ನಿಮ್ಮ ಆಗಮನದ ಬಗ್ಗೆ ಹೇಳಿದ್ದ ಮಾತುಗಳು ಇಂದು ನಿಜವೆನಿಸಿದೆ' ಎಂದು ಹೇಳುತ್ತಾ ವೈರಾಗ್ಯದಿಂದ ಈ ರೀತಿ ಹಾಡುತ್ತಾಳೆ. "ನೀಲಗಗನದ ನಡುವೆ ಪ್ರಕಾಶಿಸುತ್ತಿರುವ ಸೂರ್ಯನಿಂದ ಆಚೆ ಇರುವ ಮಾಯಾಲೋಕವನ್ನು ನಾನು ಪ್ರವೇಶಿಸಬೇಕು. ಹಕ್ಕಿಯಂತೆ ಹಾರಿ, ಮೋಡದಂತೆ ತೇಲಿ, ಮಿಂಚಿನಂತೆ ಈ ಸಂಸಾರದಿಂದ ಮಾಯವಾಗಲು ಬಯಸುತ್ತೇನೆ" ಎಂದು ಆಗ ಶ್ರೀರಾಮನು "ನೀನು ನಮ್ಮನ್ನ ತಾಯಿಯಂತೆ ಆಧರಿಸಿ ಈ ರೀತಿ ವೈರಾಗ್ಯದ ಮಾತನ್ನು ಆಡುವುದು ಸರಿಯೇ ಎಂದು ಹೇಳುತ್ತಾನೆ", ಅದಕ್ಕೆ ಶಬರಿಯು "ನನಗೆ ಪುಣ್ಯಲೋಕ ದೊರೆಯಲೆಂದು ಹರಸಿ" ಎನ್ನುತ್ತಾಳೆ. ಅದಕ್ಕೆ ಶ್ರೀರಾಮನು ನಮ್ಮನ್ನು ಇಷ್ಟು ಪ್ರೀತಿಯಿಂದ ಕಂಡ ನಿನಗೆ ಮರಣವೆ? ಎನ್ನುತ್ತಾನೆ ಮರಣವಲ್ಲ, ಮುಕ್ತಿ ಬೇಕು. ಅದೇ ನನ್ನ ಪ್ರತಿಜ್ಞೆ ಎಂದಳು ಶಬರಿ. ಮನಸ್ಸು ಒಪ್ಪಿದರೂ ಹೃದಯ ಒಪ್ಪುತ್ತಿಲ್ಲ ಎನ್ನುತ್ತಾನೆ. ನೀನು ಒಲಿದು ಒಪ್ಪಿದರೆ ಮುಕ್ತಿ ತಪ್ಪದೆ ದೊರೆಯುವುದು ಎನ್ನುತ್ತಾಳೆ. ಆಗ ಶ್ರೀರಾಮನು ನಾನು ನಿನ್ನ ಅಪೇಕ್ಷೆಗೆ ಬೆರಗಾಗಿದ್ದೇನೆ. ನಿನ್ನ ಇಷ್ಟಾರ್ಥ ಸಿದ್ಧಿಸಲಿ ಎನ್ನುತ್ತಾನೆ. ಶಬರಿಯು ಸಂತೋಷದಿಂದ ಅಗ್ನಿಕುಂಡವನ್ನು ಪ್ರದಕ್ಷಣೆ ಮಾಡಿ, ಕಾಡು, ಮೇಡು, ಬೆಟ್ಟ ಗುಡ್ಡಗಳಿಗೆ ವಂದಿಸಿದಳು.

ಆಗ ಲಕ್ಷ್ಮಣನು ನಾವು ಯಾರು? ಎಲ್ಲಿಂದ ಬಂದೆವು? ಏಕೆ ಬಂದೆವು? ಎಂದು ಕೇಳದೆ ಮಕ್ಕಳಂತೆ ನಮ್ಮನ್ನು ಕಂಡಳು. ನಮಗೆ ಒಲಿದಳು, ನಲಿದಳು. ತನ್ನ ದುಃಖವನ್ನು ಮರೆತಳು ಎನ್ನುತ್ತಾನೆ. ಆಗ ರಾಮನು ಲಕ್ಷ್ಮಣನಿಗೆ ಶಬರಿಯನ್ನು ಕುರಿತು ಈ ರೀತಿಯಾಗಿ ಹೇಳುತ್ತಾನೆ. "ಜಗತ್ತಿಗೆ ಬೆಳಕನ್ನು ನೀಡುವವರು, ಪರೋಪಕಾರ ಮಾಡುವವರು, ತಮ್ಮ ನೋವನ್ನು ಮರೆಯುತ್ತಾರೆ. ತಮ್ಮ ಸಂಕಟವನ್ನು ಮತ್ತೊಬ್ಬರಿಗೆ ಹೇಳುವುದಿಲ್ಲ. ಹೇಗೆ ದೀಪದ ಬತ್ತಿಯ ಉರಿದ ಕಪ್ಪು ಭಾಗ ಬೇರೆಯವರಿಗೆ ಕಾಣುವುದಿಲ್ಲವೋ ಇವರೂ ಹಾಗೆ, ನೋಡುಗರಿಗೆ ಕೇವಲ ಬೆಳಕು ಮಾತ್ರ ಕಾಣುತ್ತದೆ." ಹೀಗೆ ಕೊನೆಗೆ "ಶಬರಿಯು ಪಂಚಭೂತಗಳಲ್ಲಿ ಬೆರೆಯುತ್ತ ಸೀತೆಯನ್ನು ರಕ್ಷಿಸಲಿ" ಎಂದು ಹೇಳಿ ಶಬರಿ ರಾಮ ಎನ್ನುತ್ತಾ ಮುಕ್ತಿ ಪಡೆಯುತ್ತಾಳೆ.

ಲೇಖಕರು: ಡಾ. ಡಿ.ಸಿ.ರಾಮಚಂದ್ರ

ಶ್ರೀ ಕ್ಷೇತ್ರ ಅದಿಚುಂಚನಗಿರಿ

derchandru74@gmail.com

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ನಿಮ್ಮ ಜೀ ಕನ್ನಡ ನ್ಯೂಸ್‌ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್‌ ಲಭ್ಯ 
Sun Direct-292 
TATA PLAY- 1664 
JIO TV-1334 
NXT Digital-30 
IN-CABLE-30 
U-Digital-162 
GTPL-17 
Rockline Telecommunications ಬೆಂಗಳೂರು-42
 V4 Digital Infotech ಮಂಗಳೂರು-628
Malanad infotech Pvt Ltd-56 
Metrocast ಬೆಂಗಳೂರು, ಬೆಳಗಾವಿ-830 ಲಭ್ಯ.

Trending News