)
Shilpa Shetty: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ವಿರುದ್ಧ ವಂಚನೆ ಪ್ರಕರಣ ದಾಖಲಾಗಿರುವ ದಿನಗಳಲ್ಲೇ, ಶಿಲ್ಪಾ ಶೆಟ್ಟಿ ಮುಂಬೈನ ಬಾಂದ್ರಾದಲ್ಲಿ ಇರುವ ತಮ್ಮ ಪ್ರಸಿದ್ಧ ರೆಸ್ಟೋರೆಂಟ್ ‘ಬಾಸ್ಟಿಯನ್’ ಅನ್ನು ಮುಚ್ಚುತ್ತಿರುವುದಾಗಿ ಘೋಷಿಸಿದ್ದಾರೆ.
ಶಿಲ್ಪಾ ಶೆಟ್ಟಿ ತಮ್ಮ ಇನ್ಸ್ಟಾಗ್ರಾಮ್ ಮೂಲಕ ಅಭಿಮಾನಿಗಳಿಗೆ ಈ ವಿಚಾರವನ್ನು ಹಂಚಿಕೊಂಡಿದ್ದು, “ಈ ಗುರುವಾರದಿಂದ ಬಾಸ್ಟಿಯನ್ ಬಾಂದ್ರಾ ತನ್ನ ಬಾಗಿಲು ಮುಚ್ಚಿಕೊಳ್ಳುತ್ತಿದೆ. ಅನೇಕ ನೆನಪುಗಳು, ಮರೆಯಲಾಗದ ರಾತ್ರಿಗಳು ಮತ್ತು ಮುಂಬೈನ ನೈಟ್ಲೈಫ್ಗೆ ಗುರುತಾದ ಈ ಸ್ಥಳಕ್ಕೆ ವಿದಾಯ ಹೇಳುವ ಸಮಯ ಬಂದಿದೆ” ಎಂದು ಹೇಳಿದ್ದಾರೆ. ಅವರು ಮುಂದುವರಿದು, “ಬಾಸ್ಟಿಯನ್ ಬಾಂದ್ರಾಗೆ ವಿದಾಯ ಹೇಳುವ ಸಂದರ್ಭದಲ್ಲಿ ನಮ್ಮ ಹತ್ತಿರದ ಪೋಷಕರಿಗೆ ವಿಶೇಷ ಸಂಜೆ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಗುರುವಾರ ರಾತ್ರಿ ನಡೆಯುತ್ತಿದ್ದ ಆರ್ಕೇನ್ ಅಫೇರ್ ಕಾರ್ಯಕ್ರಮವನ್ನು ಮುಂದಿನ ವಾರದಿಂದ ‘ಬಾಸ್ಟಿಯನ್ ಅಟ್ ದ ಟಾಪ್’ ನಲ್ಲಿ ಮುಂದುವರಿಸುತ್ತೇವೆ” ಎಂದು ತಿಳಿಸಿದರು.
ಈ ನಿರ್ಧಾರ ಬಂದಿರುವುದು, ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವಿರುದ್ಧ 60.4 ಕೋಟಿ ರೂಪಾಯಿ ವಂಚನೆ ಆರೋಪದ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ. ಉದ್ಯಮಿ ದೀಪಕ್ ಕೊಠಾರಿ ಅವರು, 2015ರಿಂದ 2023ರ ನಡುವೆ ತಮ್ಮ ಹೂಡಿಕೆಗಳನ್ನು ‘ಬೆಸ್ಟ್ ಡೀಲ್ ಟಿವಿ ಪ್ರೈವೇಟ್ ಲಿಮಿಟೆಡ್’ ಕಂಪನಿಯ ಮೂಲಕ ವಂಚಿಸಲಾಗಿದೆ ಎಂದು ಆರೋಪಿಸಿದ್ದಾರೆ. ಈ ಕಂಪನಿಯನ್ನು ಕುಂದ್ರಾ ಮತ್ತು ಅವರ ಸಹಚರರು ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಕೇಸಿನ ಮೊತ್ತವು 10 ಕೋಟಿ ರೂ. ಗಿಂತ ಹೆಚ್ಚು ಇರುವುದರಿಂದ, ಪ್ರಕರಣವನ್ನು ಆರ್ಥಿಕ ಅಪರಾಧಗಳ ವಿಭಾಗ (EOW) ತನಿಖೆಗೆ ಹಸ್ತಾಂತರಿಸಲಾಗಿದೆ. ಶಿಲ್ಪಾ ಶೆಟ್ಟಿ – ರಾಜ್ ಕುಂದ್ರಾ ದಂಪತಿ ಈಗಾಗಲೇ ಹಲವು ವಿವಾದಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಬಾಸ್ಟಿಯನ್ ಬಾಂದ್ರಾ ಮುಚ್ಚುವಿಕೆ ಅವರ ಕುಟುಂಬಕ್ಕೆ ಮತ್ತೊಂದು ದೊಡ್ಡ ಹೊಡೆತವಾಗಿದೆ.