)
Kannada femous film: ಒಂದು ಸಿನಿಮಾ ಯಶಸ್ವಿಯಾಗಬೇಕೆಂದರೆ ದೊಡ್ಡ ಬಜೆಟ್, ಬೃಹದಾಕಾರದ ಸೆಟ್ಗಳು, ಸ್ಟಾರ್ ಹೀರೋ ಬೇಕೇಬೇಕು ಎಂಬ ನಂಬಿಕೆ ಬಹಳ ಜನರಲ್ಲಿತ್ತು. ಆದರೆ ಈ ಎಲ್ಲ ನಂಬಿಕೆಗಳಿಗೆ ಬ್ರೇಕ್ ಹಾಕಿ, ಇಡೀ ಕನ್ನಡ ಚಿತ್ರೋದ್ಯಮವೇ ಅಚ್ಚರಿ ಪಡುವಂತೆ ಈ ಒಂದು ವಿಶೇಷ ಚಲನಚಿತ್ರ ಮಾಡಿತು. ಇದು ಬಹಳ ಕಡಿಮೆ ಸಮಯದಲ್ಲಿ ಬೇಗ ಮನ್ನಣೆ ಪಡೆಯಿತು. ಈ ಪ್ರಸಿದ್ದ ಸ್ಯಾಂಡಲ್ವುಡ್ ಮೂವಿಯ ಹೆಸರು "ಮುಂಗಾರು ಮಳೆ". ಬಿಡುಗಡೆಯಾಗಿ ಬಹಳ ವರ್ಷಗಳಾದರೂ ಇದರ ಚಿತ್ರಕಥೆ ಮತ್ತು ಹಾಡುಗಳು ಇನ್ನು ಜನರಿಗೆ ನೆನಪಿದೆ.
2006ರಲ್ಲಿ ಬಿಡುಗಡೆಯಾದ ಈ ಪ್ರೇಮಕಥಾ ಚಿತ್ರವನ್ನು ಯೋಗರಾಜ್ ಭಟ್ ನಿರ್ದೇಶಿಸಿದರು. ನಾಯಕನಾಗಿ ಗಣೇಶ್ ಮತ್ತು ನಾಯಕಿಯಾಗಿ ಪೂಜಾ ಗಾಂಧಿ ನಟಿಸಿದ್ದರು. ಸಿನಿಮಾ ತಯಾರಿಕೆಗೆ ಕೇವಲ 70 ಲಕ್ಷ ರೂ. ವೆಚ್ಚವಾಯಿತು. ಆದರೆ ಬಿಡುಗಡೆಯಾದ ಬಳಿಕ ಈ ಚಿತ್ರ ಬಾಕ್ಸ್ ಆಫೀಸ್ನ್ನು ನಡುಗಿಸುವಂತೆ ಬಂಪರ್ ಹಿಟ್ ಆಯಿತು. ಮನಮೋಹಕ ಹಾಡುಗಳು ಮತ್ತು ನೈಜ ಭಾವನೆಗಳಿಂದ ಕೂಡಿದ ದೃಶ್ಯಗಳು – ಇವೆಲ್ಲವೂ ಸೇರಿ ಈ ಚಿತ್ರವನ್ನು ಅಸಾಧಾರಣ ಯಶಸ್ಸಿನತ್ತ ಕರೆದೊಯ್ದವು.
ದಾಖಲೆಯ ಕಲೆಕ್ಷನ್
70 ಲಕ್ಷ ಬಜೆಟ್ನ ಸಿನಿಮಾ ವಿಶ್ವಾದ್ಯಂತ ಸುಮಾರು 75 ಕೋಟಿ ರೂ. ಗಳಿಸಿತು. ಅದರಲ್ಲಿ 57 ಕೋಟಿ ರೂ. ಕೇವಲ ಕರ್ನಾಟಕದಿಂದಲೇ ಬಂದಿತ್ತು. ಅಚ್ಚರಿ ಏನೆಂದರೆ ಹೂಡಿಕೆ ಮಾಡಿದ ಮೊತ್ತಕ್ಕಿಂತ 100 ಪಟ್ಟು ಹೆಚ್ಚು ಲಾಭ ಪಡೆದಿತ್ತು. ಆದಾಯ ತೆರಿಗೆ ಇಲಾಖೆಯೇ ಮಧ್ಯ ಪ್ರವೇಶಿಸಿ ಅಂತಿಮವಾಗಿ ಚಿತ್ರವು 67.5 ಕೋಟಿ ರೂ. ಗಳಿಸಿದೆ ಎಂದು ದೃಢಪಡಿಸಿತು. ಮುಂಗಾರು ಮಳೆ ಕೇವಲ ಹಣವಷ್ಟೇ ಗಳಿಸುವುದಲ್ಲ, ಪ್ರದರ್ಶನದಲ್ಲೂ ದಾಖಲೆಯನ್ನು ಬರೆಯಿತು. ಈ ಸಿನಿಮಾ ಒಟ್ಟು 460 ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿತು. ಇದರೊಂದಿಗೆ ಬೆಂಗಳೂರಿನ ಒಂದು ಮಲ್ಟಿಪ್ಲೆಕ್ಸ್ನಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಕಾಲ ತೆರೆಕಂಡಿತು. ಹೊಸ ಇತಿಹಾಸ ಸೃಷ್ಟಿಸಿತು. ಆ ಕಾಲದಲ್ಲಿ ಇಂತಹ ಯಶಸ್ಸು ಕನ್ನಡ ಚಿತ್ರರಂಗದಲ್ಲಿ ಕೇಳಿಯೇ ಇರಲಿಲ್ಲ. ಸುಮಾರು ಹತ್ತು ವರ್ಷಗಳವರೆಗೆ ಈ ದಾಖಲೆ ಮುರಿಯಲಿಲ್ಲ. ಕೊನೆಗೆ ಯಶ್ ನಟನೆಯ ಕೆಜಿಎಫ್ ಅಧ್ಯಾಯ 1 ಮಾತ್ರ ಅದನ್ನು ಮೀರಿಸಿತು.
ಈ ಸಿನಿಮಾ ಯಶಸ್ಸನ್ನು ನೀಡುವುದಲ್ಲದೆ, ಹೊಸ ತಾರೆಯರನ್ನೂ ಕನ್ನಡಕ್ಕೆ ಕೊಟ್ಟಿತು. ‘ಗೋಲ್ಡನ್ ಸ್ಟಾರ್’ ಎಂಬ ಬಿರುದು ಪಡೆದ ಗಣೇಶ್, ಈ ಚಿತ್ರದ ಬಳಿಕ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರ ಸಾಲಿಗೆ ಸೇರಿದರು. ಪೂಜಾ ಗಾಂಧಿ ಕೂಡ ರಾತ್ರೋರಾತ್ರಿ ಕನ್ನಡದ ಟಾಪ್ ನಟಿಯಾಗಿ ಹೊರಹೊಮ್ಮಿದರು. ನಿರ್ದೇಶಕ ಯೋಗರಾಜ್ ಭಟ್ಗೆ ಈ ಸಿನಿಮಾ ಅಸಾಧಾರಣ ಕ್ರೇಜ್ ತಂದುಕೊಟ್ಟಿತು. ಈ ಚಿತ್ರದ ಯಶಸ್ಸಿಗೆ ಸಂಗೀತವೇ ಹೃದಯ ಎಂದರೆ ತಪ್ಪಾಗುವುದಿಲ್ಲ. ಮನೋಮೂರ್ತಿ ನೀಡಿದ ಹಾಡುಗಳು ಕನ್ನಡಿಗರ ಹೃದಯದಲ್ಲಿ ಅಚ್ಚಳಿಯದ ಗುರುತು ಬರೆದವು. ವಿಶೇಷವಾಗಿ ‘ಗಾಳಿಪಟ’ ಹಾಡು ಸಂಚಲನ ಸೃಷ್ಟಿಸಿತು.
ಇನ್ನು ಈ ಚಿತ್ರದ ಕ್ರೇಜ್ ಕಂಡು, ಇದನ್ನು ತೆಲುಗು, ತಮಿಳು ಹಾಗೂ ಬಂಗಾಳಿ ಭಾಷೆಗಳಲ್ಲಿ ರೀಮೇಕ್ ಮಾಡಲಾಯಿತು. ತೆಲುಗಿನಲ್ಲಿ ಇದನ್ನು ‘ವಾನ’ ಹೆಸರಿನಲ್ಲಿ ಎಂ.ಎಸ್. ರಾಜು ನಿರ್ದೇಶಿಸಿದರು. ಅಲ್ಲಿ ಯಶಸ್ಸು ಸಿಗದಿದ್ದರೂ, ಹಾಡುಗಳು ಸೂಪರ್ ಹಿಟ್ ಆಗಿ ಮೆಚ್ಚುಗೆ ಗಳಿಸಿದವು. ಒಟ್ಟಾರೆಯಾಗಿ ಹೇಳುವುದಾದರೆ ಮುಂಗಾರು ಮಳೆ ಕನ್ನಡ ಚಲನಚಿತ್ರೋದ್ಯಮಕ್ಕೆ ಹೊಸ ದಿಕ್ಕು ತೋರಿಸಿದ ಸಿನಿಮಾ. ದೊಡ್ಡ ಬಜೆಟ್, ದೊಡ್ಡ ಸ್ಟಾರ್ಗಳ ಅಗತ್ಯವಿಲ್ಲದೆ ಕೇವಲ ಕಥೆ, ಸಂಗೀತ, ಭಾವನೆಗಳು ಸಾಕು ಎನ್ನುವುದನ್ನು ಈ ಚಿತ್ರ ಸಾಬೀತು ಮಾಡಿತು.