)
Rishab Shetty Kantara : 'ಕಾಂತಾರ ಅಧ್ಯಾಯ 1' ಬಿಡುಗಡೆಗೂ ಮುನ್ನವೇ ಸಂಚಲನ ಸೃಷ್ಟಿಸುತ್ತಿದೆ. ಚಿತ್ರತಂಡವು ಯೋಜನೆಯಂತೆ ಪ್ರಚಾರ ಕಾರ್ಯವನ್ನು ವೇಗವಾಗಿ ನಡೆಸುತ್ತಿದೆ. ಸೋಮವಾರ (ಸೆಪ್ಟೆಂಬರ್ 22) ಬಿಡುಗಡೆಯಾದ ಟ್ರೇಲರ್ಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ಇದರಿಂದ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿದೆ..
ಹೌದು.. 'ಕಾಂತಾರ ಅಧ್ಯಾಯ 1' ಚಿತ್ರದ ಟ್ರೇಲರ್ ಬಿಡುಗಡೆಯಾದ ನಂತರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಚಿತ್ರತಂಡ, ಪತ್ರಕರ್ತರು ಕೇಳಿದ ಹಲವು ಪ್ರಶ್ನೆಗಳಿಗೆ ಆಸಕ್ತಿದಾಯಕ ಉತ್ತರಗಳನ್ನು ನೀಡಿದರು. ಈ ಸಂದರ್ಭದಲ್ಲಿ, ನಟ ರಿಷಭ್ ಶೆಟ್ಟಿ ಅವರಿಗೆ ಒಂದು ಆಸಕ್ತಿದಾಯಕ ಪ್ರಶ್ನೆ ಎದುರಾಯಿತು.
ಇತ್ತೀಚೆಗೆ ಕಾಂತಾರ ಅಧ್ಯಾಯ 1 ಕ್ಕೆ ಸಂಬಂಧಿಸಿದ ಪೋಸ್ಟರ್ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಅದರಲ್ಲಿ ಉಲ್ಲೇಖಿಸಿರುವ ವಿಷಯಗಳು ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿವೆ. 'ಕಾಂತಾರ ಚಿತ್ರವನ್ನು ನೋಡಲು ಬರುವವರು ಮದ್ಯಪಾನ, ಧೂಮಪಾನ ಮತ್ತು ಮಾಂಸ ಸೇವನೆ ಮಾಡಿರಬಾರದು' ಎಂದು ಪೋಸ್ಟರ್ನಲ್ಲಿ ಬರೆಯಲಾಗಿದೆ.
ಇತ್ತೀಚಿನ ಪತ್ರಿಕಾಗೋಷ್ಠಿಯಲ್ಲಿ ರಿಷಭ್ ಶೆಟ್ಟಿ ಈ ವಿಷಯಕ್ಕೆ ಪ್ರತಿಕ್ರಿಯಿಸಿದರು. ವೈರಲ್ ಪೋಸ್ಟರ್ ನಕಲಿ ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ಜನರ ಆಹಾರ ಪದ್ಧತಿ ಮತ್ತು ಅಭ್ಯಾಸಗಳನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಯಾರೋ ನಕಲಿ ಪೋಸ್ಟರ್ ಸೃಷ್ಟಿಸಿದ್ದಾರೆ. ಅದು ನಮ್ಮ ಗಮನಕ್ಕೂ ಬಂದಿದೆ. ತಕ್ಷಣ ಅವರು ಪೋಸ್ಟರ್ ತೆಗೆದು ಕ್ಷಮೆಯಾಚಿಸಿದರು ಎಂದು ರಿಷಬ್ ಶೆಟ್ಟಿ ತಿಳಿಸಿದರು.
ಅಷ್ಟೇ ಅಲ್ಲದೆ, "ಆ ಪೋಸ್ಟರ್ ಗೂ ನಮ್ಮ ಪ್ರೊಡಕ್ಷನ್ ಹೌಸ್ ಗೂ ಯಾವುದೇ ಸಂಬಂಧವಿಲ್ಲ. ಅದನ್ನು ನೋಡಿ ನಮಗೆ ಆಘಾತವಾಯಿತು. ಯಾರೋ ನನಗೆ ಕಳುಹಿಸಿದ್ದರು. ನಾನು ತಕ್ಷಣ ಅದನ್ನು ಪ್ರೊಡಕ್ಷನ್ ಗ್ರೂಪ್ ನಲ್ಲಿ ಹಾಕಿದೆ. ಇದನ್ನು ಯಾರು ಮಾಡುತ್ತಿದ್ದಾರೆ? ಏಕೆ ಮಾಡುತ್ತಿದ್ದಾರೆ? ಇದರ ಬಗ್ಗೆ ಜನರು ಏನು ಯೋಚಿಸುತ್ತಾರೆ? ಅಂತ ನಾನು ಕೇಳಿದೆ. ಪ್ರತಿಯೊಬ್ಬರಿಗೂ ಅವರದೇ ಆದ ಜೀವನಶೈಲಿ ಇರುತ್ತದೆ. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ. ಈ ಪೋಸ್ಟರ್ಗೂ ನಿರ್ಮಾಣ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ" ಎಂದು ರಿಷಬ್ ಶೆಟ್ಟಿ ಹೇಳಿದರು.