)
Sandalwood: ಸ್ಯಾಂಡಲ್ವುಡ್ನ ಯುವ ನಟ ಸಂತೋಷ್ ಬಾಲರಾಜ್ (34 ವರ್ಷ) ಅವರು ನಿಧನರಾದರು. ಹಿರಿಯ ನಿರ್ಮಾಪಕ ಆನೆಕಲ್ ಬಾಲರಾಜ್ ಅವರ ಪುತ್ರರಾದ ಇವರು ಜಾಂಡೀಸ್ನಿಂದ ಬಳಲುತ್ತಿದ್ದು, ಕಳೆದ ಕೆಲವು ದಿನಗಳಿಂದ ಕುಮಾರಸ್ವಾಮಿ ಲೇಔಟ್ನ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.. ಜಾಂಡೀಸ್ ನಿಂದ ದೇಹದ ಎಲ್ಲಾ ಭಾಗಗಳಿಗೂ ಸೋಂಕು ಹರಡಿದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ.
ಸಂತೋಷ್ ಬಾಲರಾಜ್ ಅವರು 'ಕರಿಯಾ-2', 'ಕೆಂಪ', 'ಗಣಪ', 'ಬರ್ಕ್ಲಿ', 'ಸತ್ಯ' ಸೇರಿದಂತೆ ಹಲವು ಚಿತ್ರಗಳಲ್ಲಿ ನಾಯಕನಾಗಿ ಅಭಿನಯಿಸಿದ್ದರು. ತಮ್ಮ ಅಪ್ಪ ಆನೆಕಲ್ ಬಾಲರಾಜ್ ಅವರು ದರ್ಶನ್ ಅಭಿನಯದ ‘ಕರಿಯಾ’ ಚಿತ್ರದ ನಿರ್ಮಾಪಕರಾಗಿದ್ದರು. ಚಿತ್ರರಂಗದಲ್ಲಿ ತಂದೆಯ ಹೆಸರಿನ ನೆರಳಲ್ಲಿ, ತಾನು ನಾಯಕನಾಗಿ ಗುರುತಿಸಿಕೊಳ್ಳಲು ಹರಸಾಹಸ ಪಡುತ್ತಿದ್ದರು. ಬಾಲರಾಜ್ಗೆ ಮದುವೆಯಾಗಿರಲಿಲ್ಲ.. ಅವರು ತಾಯಿಯೊಂದಿಗೆ ವಾಸವಿದ್ದರು.. ವಾರಗಳ ಹಿಂದೆ ಆಸ್ಪತ್ರೆ ದಾಖಲಾಗಿದ್ದರೂ ಕೂಡ ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.
ಯುವ ನಟನ ಹಠಾತ್ ಸಾವಿನ ಸುದ್ದಿ ಕೇಳಿ, ಸ್ಯಾಂಡಲ್ವುಡ್ನಲ್ಲಿ ಬೇಸರದ ಛಾಯೆ ಆವರಿಸಿದ್ದು, ಹಲವಾರು ನಟ-ನಟಿಯರು, ನಿರ್ದೇಶಕರು ಸಂತಾಪ ವ್ಯಕ್ತಪಡಿಸುತ್ತಿದ್ದಾರೆ. “ಅವನಿಗೆ ಇನ್ನೂ ಸಾಕಷ್ಟು ಅವಕಾಶಗಳು ಕಾಯುತ್ತಿದವು. ಆದರೆ, ಬದುಕು ಅಷ್ಟರಲ್ಲಿ ಮುಗಿಯಿತು” ಎಂಬ ಶೋಕಸಂದೇಶಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.