)
Surveen Chawla: ಗ್ಲಾಮರ್ ಹೊದಿಕೆಯ ಹಿಂದಿನ ಕತ್ತಲೆ ಸತ್ಯವನ್ನು ಅನೇಕ ಬಾರಿ ನಟಿಯರು ಬಿಚ್ಚಿಟ್ಟಿದ್ದಾರೆ. ಇದೀಗ ದಕ್ಷಿಣದಿಂದ ಬಾಲಿವುಡ್ ತನಕ ತನ್ನ ಅಭಿನಯದ ಮೂಲಕ ಪ್ರೇಕ್ಷಕರ ಮನಸೆಳೆಯುತ್ತಿರುವ ಸುರ್ವೀನ್ ಚಾವ್ಲಾ, ತಮ್ಮ ಜೀವನದ ನೋವು ತುಂಬಿದ ಕಾಸ್ಟಿಂಗ್ ಕೌಚ್ ಅನುಭವವನ್ನು ಬಹಿರಂಗಪಡಿಸಿದ್ದಾರೆ.
OTT ಪರದೆಗಳಲ್ಲಿ ಕ್ರಿಮಿನಲ್ ಜಸ್ಟೀಸ್, ಮಂಡಲ ಮರ್ಡರ್ಸ್, ಅಂಧೇರಾ ಮುಂತಾದ ಪ್ರಾಜೆಕ್ಟ್ಗಳಲ್ಲಿ ಪ್ರಭಾವಶಾಲಿ ಪಾತ್ರಗಳನ್ನು ನಿರ್ವಹಿಸಿರುವ ಸುರ್ವೀನ್, ಇತ್ತೀಚಿನ ಸಂದರ್ಶನದಲ್ಲಿ, “ನನ್ನ ಮದುವೆ ಬಗ್ಗೆ ಮಾತನಾಡಿದ ನಂತರ ಕೂಡ, ನಿರ್ದೇಶಕರೊಬ್ಬರು ನನ್ನನ್ನು ಬಲವಂತವಾಗಿ ಮುತ್ತಿಸಲು ಪ್ರಯತ್ನಿಸಿದರು” ಎಂದು ಹೇಳಿಕೊಂಡಿದ್ದಾರೆ. ಅವರ ಕಚೇರಿಯೊಳಗೆ ನಡೆದ ಸಭೆಯ ನಂತರ, ಗೇಟ್ವರೆಗೂ ಬಿಟ್ಟುಬರುವ ನೆಪದಲ್ಲಿ ನಡೆದ ಈ ಘಟನೆ ತನ್ನನ್ನು ನಿಶ್ಯಬ್ದಗೊಳಿಸಿತೆಂದರು. ಆದರೆ, ತಕ್ಷಣ ಪ್ರತಿಕ್ರಿಯಿಸಿ, ಆ ವ್ಯಕ್ತಿಯನ್ನು ತಳ್ಳಿ ನಿಲ್ಲಿಸಿದ್ದಾಗಿ ಅವರು ಸ್ಮರಿಸಿದರು.
ಅಷ್ಟೇ ಅಲ್ಲದೆ, ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರೊಬ್ಬರೊಂದಿಗೆ ನಡೆದ ಇನ್ನೊಂದು ನೋವು ತುಂಬಿದ ಅನುಭವವನ್ನೂ ಅವರು ಹಂಚಿಕೊಂಡರು. ಆ ನಿರ್ದೇಶಕನಿಗೆ ಹಿಂದಿ ಭಾಷೆ ಗೊತ್ತಿರಲಿಲ್ಲ. ಆದ್ದರಿಂದ ಮಧ್ಯವರ್ತಿ ವ್ಯಕ್ತಿಯ ಮೂಲಕ, ಆಕೆಯೊಂದಿಗೆ “ಸಮಯ ಕಳೆಯಲು” ಬಯಸುತ್ತಿರುವುದಾಗಿ ಸಂದೇಶ ಕಳುಹಿಸಿದ್ದರು. ಇದನ್ನು ಕೇಳಿ ನಡುಗಿದ ಸುರ್ವೀನ್, ನೇರವಾಗಿ ಉತ್ತರಿಸಿದ ರೀತಿಯೇ ಅವರ ಮನಸ್ಸಿನಲ್ಲಿ ಇನ್ನೂ ಅಚ್ಚಳಿಯದೆ ಉಳಿದಿದೆ – “ಸರ್, ನೀವು ತಪ್ಪು ಬಾಗಿಲು ತಟ್ಟುತ್ತಿದ್ದೀರಿ. ಕೆಲಸಕ್ಕಾಗಿ ನಾನು ನನ್ನನ್ನು ವಿನಿಮಯ ಮಾಡಿಕೊಳ್ಳಲು ಬಂದಿಲ್ಲ.” ಅವರ ಈ ದಿಟ್ಟ ಮಾತುಗಳು ಎಲ್ಲರಿಗೂ ಅಚ್ಚರಿ ಮೂಡಿಸಿವೆ.
ಸುರ್ವೀನ್ ಚಾವ್ಲಾ, ಸೇಕ್ರೆಡ್ ಗೇಮ್ಸ್, ಡಿಕೌಪಲ್ಡ್, ರಾಣಾ ನಾಯ್ಡು ಮುಂತಾದ ಸೀರಿಸ್ಗಳಲ್ಲಿ ಪ್ರಭಾವ ಬೀರಿದ್ದರೂ, ಅವರ ಜೀವನದ ಹಾದಿ ಎಂದಿಗೂ ಸುಲಭವಾಗಿರಲಿಲ್ಲ. ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಅವರು ಕೇವಲ ಬಲಿಷ್ಠ ನಟಿಯಷ್ಟೇ ಅಲ್ಲ, ಮಹಿಳೆಯರ ಆತ್ಮಸಮಮಾನಕ್ಕಾಗಿ ಧ್ವನಿ ಎತ್ತುವ ಧೀರ ವ್ಯಕ್ತಿತ್ವವಾಗಿಯೂ ಹೊರಹೊಮ್ಮಿದ್ದಾರೆ.