)
ಕೃಷ್ಣಾವತಾರ ಹೊತ್ತಿರುವ ಗಣಪ ಮೂರ್ತಿ.. ಕಲಾ ತಂಡಗಳಿಂದ ವಿನಾಯಕನ ಅದ್ದೂರಿ ವಿಸರ್ಜನಾ ಮೆರವಣಿಗೆ... ಹಿಂದೂಪರ ಸಂಘಟನೆಗಳಿಂದ, ರಾಜಕೀಯ ಪ್ರಮುಖರಿಂದ ವೇದಿಕೆಯಲ್ಲಿ ಭಾಷಣದ ಗರ್ಜನೆ.. ರಸ್ತೆಯಲ್ಲಿ ಹಾರಾಡಿದ ರಾಮ, ಹನುಮ, ಭಗತ್ ಸಿಂಗ್, ವೀರ ಸಾವರ್ಕರ್, ವಿಜಯನಗರ ನಗರ ಸಾಮ್ರಾಜ್ಯದ ಲಾಂಛನ ಇರುವ ಕೇಸರಿ ಧ್ವಜ.. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ಹುಬ್ಬಳ್ಳಿ ಹೃದಯ ಭಾಗದಲ್ಲಿರುವ ಸದಾ ವಿವಾದದ ಕೇಂದ್ರ ಬಿಂದುವಾಗಿರುವ ಈದ್ಗಾ ಮೈದಾನದಲ್ಲಿ.. ಹೋರಾಟ, ಪ್ರತಿಭಟನೆ, ತೀವ್ರ ವಿರೋಧ ನಡೆವೆ ಈದ್ಗಾ ಮೈದಾನದಲ್ಲಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಪ್ರತಿಷ್ಠಾಪನೆಗೊಳ್ಳುತ್ತಿದ್ದ, ಗಣೇಶ ಈ ಬಾರಿ ಯಾವುದೇ ವಿಘ್ನವಿಲ್ಲದೆ, ಮೂರು ದಿನ ಈದ್ಗಾ ಮೈದಾನದಲ್ಲಿ ವಿರಾಜಮಾನವಾಗಿ ಪ್ರತಿಷ್ಠಾಪನೆಗೊಂಡು, ಅಷ್ಟೇ ಶಾಂತಿಯುತವಾಗಿ ವಿಸರ್ಜನೆಗೊಂಡಿದ್ದಾನೆ..
ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಹುಬ್ಬಳ್ಳಿ ರಾಣಿ ಚೆನ್ನಮ್ಮ ಈದ್ಗಾ ಮೈದಾನದಲ್ಲಿ ಅದ್ದೂರಿಯಾಗಿ ಗಣೇಶೋತ್ಸವ ನಡೆಯಿತು. ಬಿಗಿ ಪೊಲೀಸ್ ಭದ್ರತೆ ಹಾಗೂ ಸಿಆರ್ ಪಿಎಫ್ ಕಣ್ಗಾವಲಿನಲ್ಲಿ ಮೂರು ದಿನಗಳ ಕಾಲ ಕೃಷ್ಣಾವರತಾರಿ ಗಣೇಶನಿಗೆ ಧಾರ್ಮಿಕ ವಿಧಿ ವಿಧಾನಗಳು ನಡೆದುವು. ಹಿಂದೂಪರ ಸಂಘಟನೆ ಮುಖ್ಯಸ್ಥರು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶಾಸಕ ಮಹೇಶ್ ಟೆಂಗಿನಕಾಯಿ ಸೇರಿದಂತೆ ಪ್ರಮುಖರು ಈ ಬಾರಿ ಗಣೇಶ ಮೂರ್ತಿ ದರ್ಶನ ಪಡೆದರು.. ಅಂದರೆ ಪಾಲಿಕೆ ನಿಯಮಗಳಂತೆ, ಮೂರನೇ ದಿನವಾದ ಇಂದು ಅದ್ದೂರಿ ವಿಸರ್ಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ 12 ಗಂಟೆಗೆ ಆರಂಭವಾದ ಮೆರವಣಿಗೆ ಸಂಜೆ 5 ಗಂಟೆ ತನಕ ನಡೆಯಿತು. ಉತ್ತರ ಕರ್ನಾಟಕ ಪ್ರಸಿದ್ಧ ಜಾನಪದ ಕಲಾ ತಂಡಗಳು, ವಾದ್ಯಘೋಷಗಳು, ಯಕ್ಷಗಾನ, ಡೊಳ್ಳು, ಗೊಂಬೆ ಪ್ರದರ್ಶನ ಮೆರವಣಿಗೆ ಸೊಬಗು ಹೆಚ್ಚಿಸಿದ್ದವು.. ಸುಮಾರು ಆರು ಗಂಟೆ ಅದ್ದೂರಿ ಮೆರವಣಿಗೆ ಬಳಿಕ ಇಂದಿರಾಗಾಂಧಿ ಗಾಜಿನ ಮನೆಯ ಬೃಹತ್ ಬಾವಿಯಲ್ಲಿ ಶಾಸ್ತ್ರೋಕ್ತವಾಗಿ ಗಣೇಶ ಮೂರ್ತಿ ವಿಸರ್ಜನೆ ಮಾಡಲಾಯಿತು. ಇನ್ನೂ ಇಂದಿನಿಂದ ಈದ್ಗಾ ಮೈದಾನಕ್ಕೆ ರಾಣಿ ಚೆನ್ನಮ್ಮ ಮೈದಾನ ಎಂದು ಮರುನಾಮಕರಣ ಮಾಡಲಾಗಿದೆ. ಈ ಬಗ್ಗೆ ಮಹಾನಗರ ಪಾಲಿಕೆ ಠರಾವು ಪಾಸ್ ಮಾಡಿದೆ. ಈ ವಿಚಾರವನ್ನು ಪಾಲಿಕೆ ಉಪಮೇಯರ್ ಸಂತೋಷ ಚೌಹ್ವಾಣ್ ವೇದಿಕೆ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದರು..
ಈ ಬಾರಿ ಮುಖ್ಯ ಅತಿಥಿಯಾಗಿ ಮೈಸೂರಿನ ಮಾಜಿ ಸಂಸದ ಪ್ರತಾಪ್ ಸಿಂಹ ವಿಸರ್ಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.. ಜಾತಿಯನ್ನು ಬಿಟ್ಟು ಹಿಂದೂಗಳು ಒಂದಾಗಬೇಕು, ಗಣೇಶೋತ್ಸವವನ್ನು ಸ್ವಾತಂತ್ರ್ಯ ಹೋರಾಟಕ್ಕೆ ತಿಲಕರು ಬಳಸಿಕೊಂಡರು, ಈಗ ನಾವು ಹಿಂದೂ ಧರ್ಮ ಉಳಿವಿಗಾಗಿ ಬಳಸಿಕೊಂಡು, ಧರ್ಮ ಕಟ್ಟುವ ಕಾರ್ಯ ಮಾಡಬೇಕೆಂದರು.. ಇದೇ ವೇಳೆ ದಸರಾ ಉದ್ಘಾಟನೆಯ ಬಾನು ಮುಷ್ತಾಕ್ ವಿವಾದ ಹಾಗೂ ಧರ್ಮ ಸ್ಥಳ ವಿಚಾರವನ್ನು ಸಹ ಮಾತನಾಡಿದರು.. ಶಾಸಕ ಮಹೇಶ್ ಟೆಂಗಿನಕಾಯಿ, ಗಜಾನನ ಉತ್ಸವ ಮಹಾಮಂಡಳಿ ಅಧ್ಯಕ್ಷ ಸಂಜೀವ ಬಡಾಸ್ಕರ್ ಸೇರಿದಂತೆ ಹಲವರು ಪ್ರತಾಪ್ ಸಿಂಹ ಗೆ ಸಾಥ್ ನೀಡಿದ್ದರು..
ಇನ್ನೂ ಸತತ ಮೂರು ದಿನ ಮತ್ತು ಮೆರವಣಿಗೆಯಲ್ಲಿ ಬಿಗಿ ಪೊಲೀಸ್, ಸಿಆರ್ ಪಿಎಫ್ ಭದ್ರತೆ ಹಾಕಲಾಗಿತ್ತು. ಒಟ್ಟಿನಲ್ಲಿ ವಿವಾದ ಕೇಂದ್ರ ಬಿಂದುವಾಗಿದ್ದ ಹುಬ್ಬಳ್ಳಿ ಈದ್ಗಾ ಮೈದಾನ ನಿಧಾನವಾಗಿ ತನ್ನ ಕಳಂಕವನ್ನು ಕಳೆದುಕೊಂಡು, ಭಾವೈಕ್ಯತೆ ರೂಪ ಪಡೆದುಕೊಳ್ಳುತ್ತಿದೆ. ಇದು ಕೆವಲ ಹಿಂದೂ ಧರ್ಮೀಯರ ಹಬ್ಬಕ್ಕೆ ಮಾತ್ರ ಸೀಮಿತವಾಗಿರದೆ, ಸರ್ವಧರ್ಮಕ್ಕೂ ಅನ್ವಯ ಆಗಲಿ, ಗಣೇಶ ಎಲ್ಲರಿಗೂ ಒಳಿತು ಮಾಡಲಿ ಎನ್ನುವುದು ಹುಬ್ಬಳ್ಳಿ ಜನರ ಆಶಯ..