ನವದೆಹಲಿ: ಫರೀದಾಬಾದ್ ನ ಬಲ್ಲಭ್ ಘಡದಲ್ಲಿರುವ ಅಗ್ರರ್ವಾಲ್ ಕಾಲೇಜಿನ ಹೊರಗೆ ನಡೆದ ಯುವತಿಯ ಹತ್ಯೆ ಪ್ರಕರಣಕ್ಕೆ (Ballabhgarh murder)  ಈಗ ಇನ್ನೊಂದು ತಿರುವು ಸಿಕ್ಕಿದೆ. ನಡುಹಗಲೇ ನಡೆದ ಈ ಬರ್ಬರ ಹತ್ಯೆಯ ಸಿಸಿಟಿವಿ ದೃಶ್ಯಾವಳಿ (CCTV footage) ಇದೀಗ ಬಹಿರಂಗವಾಗಿದೆ. 


COMMERCIAL BREAK
SCROLL TO CONTINUE READING

ಸಿಸಿಟಿವಿ ದೃಶ್ಯಾವಳಿಯಲ್ಲಿ ಏನಿದೆ..?


ಐಟೆನ್ ಕಾರಿನಲ್ಲಿ ಬಂದ ಇಬ್ಬರು ಯುವಕರು ಹಾಡಹಗಲೇ ಇಬ್ಬರು ವಿದ್ಯಾರ್ಥಿನಿಯರ ಜೊತೆ ವಾಗ್ವಾದಕ್ಕೆ ಇಳಿಯುತ್ತಾರೆ. ಅಲ್ಲದೆ ಅವರನ್ನು ಗಟ್ಟಿಯಾಗಿ ಹಿಡಿದು ಕಾಲೇಜು ಗೇಟ್ ಬಳಿ ನಿಂತಿದ್ದ ಕಾರೊಳಗೆ ತಳ್ಳಲು ಯತ್ನಿಸುತ್ತಾರೆ.ಅದಕ್ಕೆ ಯುವತಿಯರಿಬ್ಬರೂ ಪ್ರಬಲ ಪ್ರತಿರೋಧ ಒಡ್ಡುತ್ತಾರೆ. ಈ ಸನ್ನಿವೇಶದಲ್ಲಿ ರಿವಾಲ್ವರ್ ಹೊರ ತೆಗೆಯುವ ಯುವಕನೊಬ್ಬ ಯುವತಿಯರನ್ನು ಗುರಿಯಿಟ್ಟು ಗುಂಡು ಹಾರಿಸುತ್ತಾನೆ.ಇವೆಲ್ಲವೂ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಘಟನೆಯ ಇಂಚಿಂಚೂ ಮಾಹಿತಿ ನೀಡುತ್ತಿದೆ. 


ಗುಂಡು ಹಾರಿಸಿದ ಆರೋಪಿ ತೌಸೀಫ್ ಬಂಧನ.


ಅಗರವಾಲ್ ಕಾಲೇಜಿನ ಬಳಿ ಸೋಮವಾರ ಮಧ್ಯಾಹ್ನ 3.30ಕ್ಕೆ ಈ ಶಾಕಿಂಗ್ ಘಟನೆ ನಡೆದಿದ್ದು, ವಿದ್ಯಾರ್ಥಿನಿ ನಿಖಿತಾ ತೋಮರ್ (Nikita Tomar ) ಅವರನ್ನು ಹತ್ಯೆಗೈಯಲಾಗಿದೆ. ನಿಖಿತಾ ಅವರನ್ನು ಕೂಡಲೇ ಹತ್ತಿರದ ಅಸ್ಪತ್ರೆಗೆ ದಾಖಲಿಸಲಾಯಿತಾದರೂ, ಯಾವುದೇ ಪ್ರಯೋಜನವಾಗಲಿಲ್ಲ.  ನಿಖಿತಾ, ಬಿ.ಕಾಂ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದು, ಪರೀಕ್ಷೆ ಮುಗಿಸಿ ಹೊರಬರುತ್ತಿದ್ದಾಗ  ಈ ದಾಳಿ ನಡೆದಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಪ್ರಕರಣದ  ಮುಖ್ಯ  ಆರೋಪಿ ತೌಸೀಫ್ ನನ್ನು ಬಂಧಿಸಿದ್ದಾರೆ.ಇನ್ನೋರ್ವನ ಬಂಧನಕ್ಕೆ ಬಲೆ ಬೀಸಿದ್ದಾರೆ. 


ಕೆಲವು ತಿಂಗಳ ಹಿಂದೆಯೇ ನಿಖಿತಾ ಬೆನ್ನು ಬಿದ್ದಿದ್ದ ತೌಸೀಫ್..


ಘಟನೆ ಬಗ್ಗೆ ಮಾಹಿತಿ ನೀಡಿದ ಬಲ್ಲಭ್ ಗಢ ಎಸಿಪಿ ಜೈವೀರ್ ರಾಥಿ, “ಪ್ರಕರಣದ ಓರ್ವ ಆರೋಪಿ ತೌಸೀಫ್  (Tauseef)  ಹತ್ಯೆಗೊಳಗಾದ ಯುವತಿ ನಿಖಿತಾ ತೋಮರ್ ಗೆ ಪರಿಚಯದವನಾಗಿದ್ದ.  ಕೆಲವು ತಿಂಗಳ ಹಿಂದೆ ನಿಖಿತಾ ಅವರ ಸಂಬಂಧಿಯೊಬ್ಬರು ಆತನ ವಿರುದ್ದ ಪೊಲೀಸ್ ಠಾಣೆಯಲ್ಲಿ ಕಿರುಕುಳ ಮತ್ತು ಹಿಂಸೆಯ ದೂರು ದಾಖಲಿಸಿದ್ದಳು. ಆದರೆ, ಬಳಿಕ ರಾಜೀ ಮಾಡಿಕೊಳ್ಳಲಾಗಿತ್ತು.” ಎಂದು ಹೇಳಿದ್ದಾರೆ.


ಸ್ನೇಹವನ್ನು ನಿರಾಕರಿಸಿದ್ದೇ ಈ ಹತ್ಯೆಗೆ ಕಾರಣವಾಗಿರಬಹುದೆಂದು ಪೊಲೀಸರು ಅನುಮಾನ  ವ್ಯಕ್ತ ಪಡಿಸಿದ್ದಾರೆ.ಈ ಘಟನೆಯಲ್ಲಿ ಒಳಗೊಂಡಿರುವ ಅಪರಾಧಿಗಳಿಗೆ ತೀವ್ರ ಸ್ವರೂಪದ ಶಿಕ್ಷೆ ನೀಡಲಾಗುವುದು ಎಂದು ಪೊಲೀಸ್ ಆಯುಕ್ತ ಒ.ಪಿ.ಸಿಂಗ್ ಹೇಳಿದ್ದಾರೆ. ಇದೇ ವೇಳೆ, ಇಬ್ಬರು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಹತ್ಯೆಗೀಡಾದ ಯುವತಿಯ ಪರಿವಾರ ಮತ್ತು ಮಿತ್ರರು ಘಟನಾ ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದಾರೆ.


ಯುವತಿಯ ಸಹೋದರ ಹೇಳಿದ್ದೇನು ಗೊತ್ತಾ..?


ಝೀ ನ್ಯೂಸ್ (Zee News) ಜೊತೆ ಮಾತಾಡಿದ ಯುವತಿಯ ಸಹೋದರ, ಮುಖ್ಯ ಆರೋಪಿ ತೌಸೀಫ್ ಇಸ್ಲಾಂಗೆ ಮತಾಂತರವಾಗುವಂತೆ ನಿಖಿತಾಗೆ ಬಲವಂತ ಮಾಡುತಿದ್ದ ಎಂದು ಆರೋಪಿಸಿದ್ದಾರೆ.