)
ಬಿಹಾರದ 2025ರ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಸ್ಪಷ್ಟ ಬಹುಮತ ಗಳಿಸಿ ಈಗ ಸರ್ಕಾರ ರಚಿಸುವ ಪ್ರಕ್ರಿಯೆಯಲ್ಲಿ ಸನ್ನದ್ದವಾಗಿದೆ.ಆರಂಭಿಕ ಹಂತದಲ್ಲೇ ಹೆಚ್ಚಿನ ಮುನ್ನಡೆಯನ್ನು ಕಾಯ್ದುಕೊಂಡ ಆಡಳಿತಾರೂಢ ಒಕ್ಕೂಟವು ಅಂತಿಮ ಹಂತದ ಮತ ಎಣಿಕೆವರೆಗೂ ಪ್ರಚಂಡ ಬಹುಮತವನ್ನು ಪಡೆಯಿತು.ಈ ಗೆಲುವಿಗೆ ಮುಖ್ಯವಾಗಿ ಜಾತಿ ಸಮೀಕರಣ, ಚುನಾವಣೆಗೆ ಮುಂಚಿನ ಜನಪ್ರಿಯ ಕಲ್ಯಾಣ ಯೋಜನೆಗಳು ಮತ್ತು ವಿರೋಧ ಪಕ್ಷಗಳ ತಂತ್ರಗಾರಿಕೆಯ ತಪ್ಪುಗಳು ಮುಖ್ಯ ಕಾರಣಗಳಾಗಿವೆ.
ಜಾತಿ ಸಮೀಕರಣದ ಪ್ರಭಾವ:
ಎನ್ಡಿಎ ಮೈತ್ರಿಕೂಟದ ಸಾಮಾಜಿಕ ಸಮೀಕರಣವು ಈ ಬಾರಿಯೂ ನಿರ್ಣಾಯಕವಾಗಿದೆ.ವಿಶೇಷವಾಗಿ ಎಂಬಿಸಿಗಳು (ಅತ್ಯಂತ ಹಿಂದುಳಿದ ವರ್ಗಗಳು) ಮತ್ತು ಮೇಲ್ಜಾತಿಗಳ ಒಗ್ಗಟ್ಟು ಲಾಲು ಪ್ರಸಾದ್ ಯಾದವ್ ಅವರ ಮುಸ್ಲಿಂ-ಯಾದವ್ ಮತಬ್ಯಾಂಕ್ಗೆ ಪ್ರತಿಕ್ರಿಯೆಯಾಗಿ ರೂಪಿತವಾಗಿದೆ. ಬಿಜೆಪಿ-ನಿತೀಶ್ ಕುಮಾರ್ ಒಕ್ಕೂಟವು ಮಂಡಲ್ ರಾಜಕಾರಣದ ಹಿಂದುತ್ವವನ್ನು ಮೀರಿಸುತ್ತದೆ ಎಂಬ ದೀರ್ಘಕಾಲದ ನಂಬಿಕೆಯನ್ನು ಹೋಗಲಾಡಿಸಿದೆ. ನಿತೀಶ್ ಕುಮಾರ್ ಅವರ ಗೆಲುವುಗಳು ಮೇಲ್ಜಾತಿ, ಅತಿ ಹಿಂದುಳಿದ ಸಮುದಾಯಗಳು ಮತ್ತು ದಲಿತರ ಬೆಂಬಲದ ಅಸಾಮಾನ್ಯ ಒಕ್ಕೂಟದ ಮೇಲೆ ನಿಂತಿವೆ. ಇದು ಬಿಹಾರದ ಪ್ರಜಾಪ್ರಭುತ್ವ ಬದಲಾವಣೆಯ ಸೂಕ್ಷ್ಮ ಡಯಾಲೆಕ್ಟಿಕ್ ಸ್ವರೂಪವನ್ನು ಪ್ರತಿಬಿಂಬಿಸುತ್ತದೆ.
ಜನಪ್ರಿಯ ಯೋಜನೆಗಳ ಆಕರ್ಷಣೆ:
ಜಾತಿ ಸಮೀಕರಣಗಳ ಜೊತೆಗೆ, ಚುನಾವಣೆಗೆ ಮುಂಚೆ ಎನ್ಡಿಎ ಸರ್ಕಾರ ಜಾರಿಗೊಳಿಸಿದ ಉದಾರ ಯೋಜನೆಗಳು ಮತದಾರರನ್ನು ಆಕರ್ಷಿಸಿವೆ. ಮಹಿಳೆಯರಿಗೆ 10,000 ರೂಪಾಯಿ ನಗದು ವರ್ಗಾವಣೆ, 125 ಯೂನಿಟ್ ಉಚಿತ ವಿದ್ಯುತ್ ಸೇರಿದಂತೆ ಹಲವು ಕಲ್ಯಾಣ ಯೋಜನೆಗಳು ಜನಪ್ರಿಯತೆ ಗಳಿಸಿವೆ. ಹತ್ತು ವರ್ಷಗಳ ಕಾಲ ಆಡಳಿತ ನಡೆಸುತ್ತಿರುವ ಸರ್ಕಾರದ ವಿರುದ್ಧ ಇದ್ದ ಆಡಳಿತ ವಿರೋಧಿ ಅಲೆಯನ್ನು ಮಹಾಘಟಬಂಧನ್ ಸೂಕ್ತವಾಗಿ ಬಿಂಬಿಸಲು ವಿಫಲವಾಯಿತು.
ಎನ್ಡಿಎಯಲ್ಲಿ ಆಂತರಿಕ ತಳಮಳಗಳಿದ್ದರೂ, ನಿತೀಶ್ ಕುಮಾರ್ ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ.ಆದರೆ ಈಗ ಬಿಜೆಪಿ ಬಿಹಾರದಲ್ಲಿ ಹೆಚ್ಚು ರಾಜಕೀಯ ಪ್ರಾಬಲ್ಯ ಹೊಂದಿದ್ದು, ನಿತೀಶ್ ಅವರ ಸಾಮಾಜಿಕ ಆಕರ್ಷಣೆ ಅಗತ್ಯವಿದ್ದರೂ ಅವರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಲಿದೆ. ನಿತೀಶ್ ಅವರಿಗೆ ಆರೋಗ್ಯ ಸಮಸ್ಯೆಯ ಕಾರಣದಿಂದಾಗಿ ಒಕ್ಕೂಟದಲ್ಲಿ ನಾಯಕತ್ವ ಬದಲಾವಣೆ ಶೀಘ್ರದಲ್ಲೇ ಅನಿವಾರ್ಯವಾಗಲಿದೆ.
ಇನ್ನೊಂದೆಡೆಗೆ ಮಹಾಘಟಬಂಧನ್ ಮೈತ್ರಿಕೂಟವು ಚುನಾವಣಾ ಆಯೋಗವನ್ನು ದೋಷಾರೋಪಿಸುವುದನ್ನು ಮುಂದುವರಿಸುತ್ತಿದ್ದರೂ, ಈಗ ಅವರಿಗೆ ಆತ್ಮಾವಲೋಕನದ ಸಮಯ. ಹಾಗಾಗಿ ಈಗ ಆಂತರಿಕ ಘರ್ಷಣೆಗಳನ್ನು ಬಗೆಹರಿಸಿ ತಪ್ಪುಗಳನ್ನು ಸರಿಪಡಿಸಬೇಕು.ಕೇವಲ ಆಯೋಗ ಅಥವಾ ಬಿಜೆಪಿಯನ್ನು ದೋಷಾರೋಪಿಸುವುದು ಫಲಿತಾಂಶ ಬದಲಾಯಿಸದು.ಈ ಚುನಾವಣೆಯ ಫಲಿತಾಂಶವು ಬಿಹಾರದ ರಾಜಕೀಯ ಭೂದೃಶ್ಯವನ್ನು ಮತ್ತೊಮ್ಮೆ ಬದಲಾಯಿಸುವ ಸುಳಿವು ನೀಡಿದೆ.