ನವದೆಹಲಿ: ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿಯವರು ಮುಂದುವರೆಯಬೇಕು ಮತ್ತು ರಾಜೀನಾಮೆ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಮತ್ತು ಹಲವು ಕಾರ್ಯಕರ್ತರು ಒತ್ತಾಯಿಸುತ್ತಲೇ ಇದ್ದಾರೆ. ಆದರೂ ಕೂಡ ರಾಹುಲ್ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅದಾಗ್ಯೂ, ರಾಹುಲ್ ಗಾಂಧಿ ತಮ್ಮ ನಿರ್ಧಾರವನ್ನು ಮರುಪರಿಶೀಲಿಸಬೇಕು, ರಾಹುಲ್ ಗಾಂಧಿಯವರೇ ಪಕ್ಷದ ನೇತೃತ್ವ ವಹಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
Delhi: Congress workers sit on hunger strike outside party Headquarters, urging Rahul Gandhi to take back his resignation from the post of party President. pic.twitter.com/pqlI5ulZnV
— ANI (@ANI) July 1, 2019
2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕಳಪೆ ಸಾಧನೆ ತೋರಿದ ಹಿನ್ನೆಲೆಯಲ್ಲಿ ಮೇ 25 ರಂದು ರಾಹುಲ್ ಗಾಂಧಿ ಪಕ್ಷದ ಸೋಲಿಗೆ ನೈತಿಕ ಹೊಣೆಹೊತ್ತು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಹಿರಿಯ ನಾಯಕರು ರಾಹುಲ್ ಗಾಂಧಿಯವರಿಗೆ ತಮ್ಮ ನಿರ್ಧಾರವನ್ನು ಪರಿಶೀಲಿಸುವಂತೆ ಮನವಿ ಮಾಡಿಕೊಂಡರಾದರೂ ಕೂಡ ರಾಹುಲ್ ಮಣಿಯಲಿಲ್ಲ.
ಪಕ್ಷದ ಹಿರಿಯ ನಾಯಕರು ಸಾಕಷ್ಟು ಬಾರಿ ರಾಹುಲ್ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದ್ದಾರೆ. ಇದಕ್ಕೆ ಕಡಾಖಂಡಿತವಾಗಿ ಅವರು ತಮ್ಮ ಪೂರ್ವ ನಿರ್ಧಾರಕ್ಕೆ ಬದ್ದವಾಗಿರುವುದಾಗಿ ತಿಳಿಸಿರುವ ರಾಹುಲ್, ಸಾಧ್ಯವಾದಷ್ಟು ಬೇಗ ಪರ್ಯಾಯ ನಾಯಕರನ್ನು ಆಯ್ಕೆ ಮಾಡಿ ಎಂದಿರುವ ರಾಹುಲ್, ಒಬಿಸಿ, ಎಸ್ಸಿ/ಎಸ್ಟಿ ನಾಯಕರಿಗೆ ಪಕ್ಷದ ಅಧ್ಯಕ್ಷ ಗಿರಿ ನೀಡಲು ಸಲಹೆಯನ್ನೂ ನೀಡಿದ್ದರು.