ಇತ್ತೀಚೆಗೆ ನಡೆದ ದೆಹಲಿ ಸಿಎಂ ದಾಳಿಯಲ್ಲಿ ಭಾಗಿಯಾದ ವೈಕ್ತಿಯಿಂದ ಆಘಾತಕಾರಿ ಸತ್ಯವೊಂದು ಹೊರಬಂದಿದೆ. ಈ ಘಟನೆಯ ಕುರಿತು ಮುಖ್ಯಮಂತ್ರಿಯವರು ಮಾತನಾಡಿದ್ದಾರೆ.

ನವದೆಹಲಿ: ಆಗಸ್ಟ್ 20ರಂದು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರ ಸಿವಿಲ್ ಲೈನ್ಸ್ನ ಅಧಿಕೃತ ನಿವಾಸದಲ್ಲಿ, ಸಾರ್ವಜನಿಕ ಕುಂದುಕೊರತೆ ವಿಚಾರಣೆಯ ವೇಳೆ ಆಘಾತಕಾರಿ ಘಟನೆ ಸಂಭವಿಸಿತು. ಗುಜರಾತ್ನ ರಾಜ್ಕೋಟ್ ಮೂಲದ ರಾಜೇಶ್ ಭಾಯಿ ಖಿಮ್ಜಿ ಭಾಯಿ ಎಂಬ ವ್ಯಕ್ತಿ ಮುಖ್ಯಮಂತ್ರಿಯವರ ಮೇಲೆ ದಾಳಿ ನಡೆಸಲು ಪ್ರಯತ್ನಿಸಿದರು. ತನಿಖಾಧಿಕಾರಿಗಳಿಗೆ ನೀಡಿದ ಹೇಳಿಕೆಯಲ್ಲಿ, ಆತನು ಚಾಕುವಿನಿಂದಲೇ ದಾಳಿ ಮಾಡಲು ಉದ್ದೇಶಿಸಿದ್ದಾಗಿ ಸ್ಪಷ್ಟಪಡಿಸಿದ್ದಾನೆ. ಆದರೆ, ಸ್ಥಳದಲ್ಲಿದ್ದ ಭಾರೀ ಭದ್ರತೆಯನ್ನು ಕಂಡು ಆತ ಹಿಂಜರಿದಿದ್ದಾನೆ ಎಂದು ಹೇಳಲಾಗಿದೆ.
ಘಟನೆಯ ಬಳಿಕ, ಆಗಸ್ಟ್ 21ರಂದು ರಾಜೇಶ್ ಖಿಮ್ಜಿ ಅವರನ್ನು ಕರ್ತವ್ಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ಅಂದು ಅವರನ್ನು ಮೊದಲು ಅರುಣಾ ಆಸಿಫ್ ಅಲಿ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಯಿತು. ನಂತರ ಎಲ್ಎನ್ಜೆಪಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅಂತಿಮವಾಗಿ, ಅವರನ್ನು ಐದು ದಿನಗಳ ಕಸ್ಟಡಿಗೆ ಒಪ್ಪಿಸಲಾಯಿತು. ಈ ಪ್ರಕರಣ ಸಂಬಂಧ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಈ ದಾಳಿಯ ನಂತರ ಮಾತನಾಡಿದ ಮುಖ್ಯಮಂತ್ರಿ ರೇಖಾ ಗುಪ್ತಾ, “ಇದು ನನ್ನ ಮೇಲೆ ಆದಂತಹ ವೈಯಕ್ತಿಕ ದಾಳಿ ಮಾತ್ರವಲ್ಲ, ದೆಹಲಿಯ ಜನರ ಹಿತಕ್ಕಾಗಿ ನಾನು ಕೈಗೊಂಡಿರುವ ಕೆಲಸಗಳ ಮೇಲಿನ ದಾಳಿ ಕೂಡ ಹೌದು” ಎಂದು ಕಿಡಿಕಾರಿದರು. ಭಾನುವಾರ ಶಾಲಿಮಾರ್ ಬಾಗ್ನಲ್ಲಿ ನಡೆದ ಎರಡು ರಾಮಲೀಲಾ ಶಂಕುಸ್ಥಾಪನೆ ಸಮಾರಂಭದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಅವರು, “ಭಗವಾನ್ ರಾಮನ ಆಶೀರ್ವಾದ ಮತ್ತು ಜನರ ವಾತ್ಸಲ್ಯವೇ ನನ್ನನ್ನು ಸುರಕ್ಷಿತವಾಗಿಯೂ ಬಲಿಷ್ಠಳಾಗಿಯೂ ಉಳಿಸಿದೆ. ರಾಮರಾಜ್ಯ ಎಂದರೆ ನ್ಯಾಯ, ಪಾರದರ್ಶಕತೆ ಮತ್ತು ಜನಕೇಂದ್ರೀಕೃತ ಆಡಳಿತ. ಅದನ್ನು ಸಾಧಿಸಲು ವಿನಾಶಕಾರಿ ಶಕ್ತಿಗಳನ್ನು ಎದುರಿಸಲೇಬೇಕು. ದೆಹಲಿಯನ್ನು ರಾಮರಾಜ್ಯದ ದಾರಿಯಲ್ಲಿ ಮುನ್ನಡೆಸುವ ಜವಾಬ್ದಾರಿಯನ್ನು ಭಗವಾನ್ ರಾಮನು ನನಗೆ ವಹಿಸಿದ್ದಾನೆ” ಎಂದು ಹೇಳಿದರು.