ನವದೆಹಲಿ: ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿಯು ಒಂದೇ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡುವ ಪ್ರಸ್ತಾಪವನ್ನು ಚುನಾವಣಾ ಆಯೋಗ ಬೆಂಬಲಿಸುತ್ತದೆ ಎಂದು ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ಈ ವಿಷಯದ ಕುರಿತಾಗಿ ಸಲ್ಲಿಸಿದ ಅಫಿಡವಿಟ್ ನಲ್ಲಿ ಚುನಾವಣಾ ಆಯೋಗ ಈ ಅಭಿಪ್ರಾಯ ತಿಳಿಸಿದೆ.
ಸುಪ್ರೀಂ ಕೋರ್ಟ್ ಡಿಸೆಂಬರ್ 2017 ರಲ್ಲಿ ಚುನಾವಣಾ ಆಯೋಗಕ್ಕೆ ಈ ವಿಚಾರದ ಕುರಿತಾಗಿ ಅಭಿಪ್ರಾಯವನ್ನು ಕೇಳಿತ್ತು. ಇದೇ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಏಕಕಾಲಕ್ಕೆ ಹಲವು ಕ್ಷೇತ್ರಗಲ್ಲಿ ಅಭ್ಯರ್ಥಿಯು ಸ್ಪರ್ಧಿಸುವುದರಿಂದ ಅದು ಉಪಚುನಾವಣೆಗೆ ನಾಂದಿ ಮಾಡಿಕೊಡುತ್ತದೆ ಎಂದು ಅಭಿಪ್ರಾಯಪಟ್ಟಿತ್ತು.
ಈ ರೀತಿಯ ಪ್ರಕ್ರಿಯೆಯನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ವಕೀಲ ಮತ್ತು ಬಿಜೆಪಿ ನಾಯಕ ಅಶ್ವಿನಿ ಕುಮಾರ್ ಉಪಾಧ್ಯಾಯ ಸುಪ್ರಿಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯು ಪ್ರಮುಖವಾಗಿ ದೇಶದಾದ್ಯಂತದ ಹಲವು ರಾಜಕೀಯ ಪಕ್ಷಗಳ ನಾಯಕರು ಜಯ ಸಾಧಿಸಲು ಒಂದಕ್ಕಿಂತ ಹೆಚ್ಚು ಕ್ಷೇತ್ರದಿಂದ ಸ್ಪರ್ಧಿಸುವ ಕ್ರಮದ ನಿಯಂತ್ರಣಕ್ಕೆ ಸಂಬಂಧಿಸಿದೆ. ಆ ಮೂಲಕ ಇದು ಉಪಚುನಾವಣೆಯ ಸಂಪ್ರದಾಯದ ನಡೆಗೆ ಅಂತ್ಯಹಾಡಲಿದೆ.