ನವದೆಹಲಿ: ಮಹಾರಾಷ್ಟ್ರದಲ್ಲಿ ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ಮೈತ್ರಿ ಸರ್ಕಾರದ ಕುರಿತಾಗಿ ಶರದ್ ಪವಾರ್ ಅವರ ಭಿನ್ನ ಹೇಳಿಕೆಗಳನ್ನು ಲೆಕ್ಕಿಸದೆ, ಎನ್ಸಿಪಿ ಮತ್ತು ಕಾಂಗ್ರೆಸ್ ಜೊತೆ ಸರ್ಕಾರ ರಚನೆ ಕಾರ್ಯ ನಡೆಯಲಿದೆ ಎಂದು ಶಿವಸೇನೆ ಹೇಳಿದೆ.
'ನೀವು ಪವಾರ್ ಮತ್ತು ನಮ್ಮ ಮೈತ್ರಿಯ ಬಗ್ಗೆ ಚಿಂತಿಸಬೇಡಿ. ಶೀಘ್ರದಲ್ಲೇ ಡಿಸೆಂಬರ್ ಮೊದಲ ವಾರದಲ್ಲಿ ಶಿವಸೇನೆ ನೇತೃತ್ವದ ಮೈತ್ರಿ ಸರ್ಕಾರ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬರಲಿದೆ. ಇದು ಸ್ಥಿರವಾದ ಸರ್ಕಾರವಾಗಲಿದೆ" ಎಂದು ಸಂಜಯ್ ರೌತ್ ಮಂಗಳವಾರ ಹೇಳಿದ್ದಾರೆ.
ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ನಡುವಿನ ಒಪ್ಪಂದ ಇನ್ನು ಇತ್ಯರ್ಥವಾಗಿಲ್ಲ ಎನ್ನುವ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಸಂಜಯ್ ರೌತ್ ' ನಿಜವಾಗಿಯೂ? ಶರದ್ ಪವಾರ್ ಏನು ಹೇಳುತ್ತಾರೆಂದು ಅರ್ಥ ಮಾಡಿಕೊಳ್ಳಲು 100 ಜನ್ಮ ಬೇಕಾಗುತ್ತವೆ' ಎಂದು ರೌತ್ ಉತ್ತರಿಸಿದರು.
ಇನ್ನೊಂದೆಡೆ ಶಿವಸೇನಾದ ತಂತ್ರಗಾರಿಕೆಗೆ ಬ್ರೇಕ್ ಹಾಕಲು ಬಿಜೆಪಿ ಎನ್ಸಿಪಿಯೊಂದಿಗೆ ಮಾತುಕತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಇದರಲ್ಲಿ ಪ್ರಮುಖವಾಗಿ ರಾಷ್ಟ್ರಪತಿ ಹುದ್ದೆಗೆ ಪವಾರ್ ಅವರನ್ನು ನೇಮಿಸುವ ಆಫರ್ ನ್ನು ಎನ್ಸಿಪಿಗೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿ ಜೊತೆಗಿನ ಮೈತ್ರಿ ಸಾಧ್ಯತೆ ಬಗ್ಗೆ ಪ್ರತಿಕ್ರಿಯಿಸಿದ ಮೂಲಗಳು ' 50:50 ಡೀಲ್ ಒಪ್ಪಿಗೆಯಾದಲ್ಲಿ ಮೈತ್ರಿಗೆ ಮತ್ತೆ ಜೀವ ನೀಡುವುದಾಗಿ ಶಿವಸೇನಾ ಹೇಳಿದೆ ಎನ್ನಲಾಗಿದೆ.