)
ಭಾರತವು ವೈವಿಧ್ಯತೆಯಿಂದ ತುಂಬಿರುವ ದೇಶ. ಇಲ್ಲಿ ಆಹಾರ ಪದ್ಧತಿ ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತದೆ. ಕೆಲವರು ಸಸ್ಯಾಹಾರಿಗಳಾದರೆ ಕೆಲವರು ಮಾಂಸಾಹಾರಿಗಳು. ಆದರೆ ಅನೇಕರು ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಕೂಡಾ ತಿನ್ನುವುದಿಲ್ಲ. ಹೆಚ್ಚಿನ ಭಾರತೀಯ ಅಡುಗೆಮನೆಗಳಲ್ಲಿ ಈರುಳ್ಳಿಯನ್ನು ಅತಿ ಮುಖ್ಯ ಎಂದು ಪರಿಗಣಿಸಲಾಗಿದೆ. ಆದರೆ ಈರುಳ್ಳಿಯ ಕುರುಹೇ ಇಲ್ಲದ ಸ್ಥಳವೊಂದಿದೆ. ನಮ್ಮ ದೇಶದ ಈ ರಾಜ್ಯದಲ್ಲಿ ಈರುಳ್ಳಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಭಾರತದಲ್ಲಿ, ಈರುಳ್ಳಿಯನ್ನು ಎಲ್ಲೆಡೆ ಬಳಸಲಾಗುತ್ತದೆ. ದಾಲ್ ನಿಂದ ತರಕಾರಿಗಳವರೆಗೆ, ಸಲಾಡ್ ನಿಂದ ಚಟ್ನಿವರೆಗೆ ಈರುಳ್ಳಿ ಬಳಸಲಾಗುತ್ತದೆ. ಕತ್ರಾ ನಗರದಲ್ಲಿ ಈರುಳ್ಳಿ ಕೃಷಿ, ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ. ಇಲ್ಲಿನ ಯಾವುದೇ ಹೋಟೆಲ್ ಅಥವಾ ರೆಸ್ಟೋರೆಂಟ್ ಗಳಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯಿಂದ ಮಾಡಿದ ಯಾವುದೇ ಖಾದ್ಯ ಸಿಗುವುದಿಲ್ಲ. ಈ ನಿಯಮದ ಹಿಂದೆ ಧಾರ್ಮಿಕ ಕಾರಣಗಳಿವೆ.
ಮಾತಾ ವೈಷ್ಣೋ ದೇವಿ ತೀರ್ಥಯಾತ್ರೆ ಇಲ್ಲಿಂದ ಪ್ರಾರಂಭವಾಗುತ್ತದೆ. ಆದ್ದರಿಂದ ಈ ಸ್ಥಳದ ಪಾವಿತ್ರ್ಯವನ್ನು ಕಾಪಾಡಿಕೊಳ್ಳಲು ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹಿಂದೂ ಧರ್ಮದ ಪ್ರಕಾರ, ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ತಾಮಸ ಆಹಾರವೆಂದು ಪರಿಗಣಿಸಲಾಗುತ್ತದೆ. ಈ ಆಹಾರವು ಮನಸ್ಸು ಮತ್ತು ದೇಹದಲ್ಲಿ ಸೋಮಾರಿತನ, ಕೋಪ ಮತ್ತು ಅಸ್ವಸ್ಥತೆಯನ್ನು ಹೆಚ್ಚಿಸುತ್ತದೆ ಎನ್ನುವುದು ನಂಬಿಕೆ. ಪೂಜೆ ಮತ್ತು ಉಪವಾಸದ ಸಮಯದಲ್ಲಿ ಇದರ ಸೇವನೆಯನ್ನು ನಿಷೇಧಿಸಲಾಗಿದೆ. ಕತ್ರಾ ಮಾತಾ ವೈಷ್ಣೋದೇವಿಯ ದೇವಾಲಯದ ಮುಖ್ಯ ದ್ವಾರವಾಗಿದೆ. ಆದ್ದರಿಂದ ಇಲ್ಲಿ ಸಾತ್ವಿಕ ವಾತಾವರಣವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಈ ಕಾರಣಕ್ಕಾಗಿಯೇ ಇಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ದೂರವಿಡಲಾಗುತ್ತದೆ.
ಕತ್ರಾದಲ್ಲಿ ಈರುಳ್ಳಿ ಮಾರಾಟ ಮಾಡುವುದೂ ಇಲ್ಲ. ತರಕಾರಿ ಮಾರುಕಟ್ಟೆಗಳಲ್ಲಿಯೂ ಈರುಳ್ಳಿ ಮಾರಾಟವಾಗುವುದಿಲ್ಲ. ದಿನಸಿ ಅಂಗಡಿಗಳಲ್ಲಿಯೂ ಲಭ್ಯವಿರುವುದಿಲ್ಲ. ಹೋಟೆಲ್ಗಳು, ಡಾಬಾಗಳು ಮತ್ತು ರೆಸ್ಟೋರೆಂಟ್ಗಳಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯಿಂದ ಮಾಡಿದ ವಸ್ತುಗಳನ್ನು ಬಡಿಸುವುದಿಲ್ಲ. ಇಲ್ಲಿನ ಸಾತ್ವಿಕ ಭಕ್ಷ್ಯಗಳು ಈರುಳ್ಳಿ ಮತ್ತು ಬೆಳ್ಳುಳ್ಳಿ ಇಲ್ಲದಿದ್ದರೂ ರುಚಿ ಮತ್ತು ಪೌಷ್ಟಿಕತೆಯಿಂದ ತುಂಬಿರುತ್ತವೆ.
ಸಂಪ್ರದಾಯ ಮತ್ತು ಶಿಸ್ತಿನ ವಿಶಿಷ್ಟ ಮಿಶ್ರಣ :
ಈ ಸಂಪ್ರದಾಯವನ್ನು ಕಾಪಾಡಿಕೊಳ್ಳುವಲ್ಲಿ ಸ್ಥಳೀಯ ಜನರು ಮತ್ತು ಆಡಳಿತ ಎರಡೂ ಪ್ರಮುಖ ಪಾತ್ರ ವಹಿಸುತ್ತವೆ. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ ಮತ್ತು ಸ್ಥಳೀಯ ಜನರು ಇದನ್ನು ನಂಬಿಕೆಯ ಭಾಗವಾಗಿ ಅಳವಡಿಸಿಕೊಳ್ಳುತ್ತಾರೆ. ಹೋಟೆಲ್ ನವರ ಪ್ರಕಾರ, ಹೊರಗಿನಿಂದ ಬರುವ ಪ್ರಯಾಣಿಕರು ಹೆಚ್ಚಾಗಿ ಈರುಳ್ಳಿಯನ್ನು ಕೇಳುತ್ತಾರೆ. ಆದರೆ ಅವರಿಗೆ ಸಾತ್ವಿಕ ಪರ್ಯಾಯಗಳನ್ನು ಸೂಚಿಸಲಾಗುತ್ತದೆ.