ನವದೆಹಲಿ: ಕಾಶ್ಮೀರಿ ಮಹಿಳೆಯೊಬ್ಬರು ಶ್ರೀನಗರದಿಂದ ದೆಹಲಿಗೆ ಹೋಗುತ್ತಿದ್ದಾಗ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಗೆ ತಮ್ಮ ಅವಸ್ಥೆಯನ್ನು ವಿವರಿಸುತ್ತಿರುವ ವೀಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವೀಡಿಯೊವನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಜಂಟಿ ಕಾರ್ಯದರ್ಶಿ ಕೃಷ್ಣ ಅಲ್ಲಾರು ಹಂಚಿಕೊಂಡಿದ್ದಾರೆ.ಈ ವೀಡಿಯೊದಲ್ಲಿರುವ ಮಹಿಳೆ "ಹಮ್ ಹರ್ ತಾರೀಕೆ ಸೆ ಪರೇಶಾನ್ ಹೈ" (ನಾವು ಎಲ್ಲ ರೀತಿಯಲ್ಲೂ ತೊಂದರೆಗೀಡಾಗಿದ್ದೇವೆ) ಎಂದು ಹೇಳುವುದನ್ನು ಕೇಳಬಹುದು. ತನ್ನ ಮಕ್ಕಳು ಮನೆಯ ಹೊರಗೆ ಹೆಜ್ಜೆ ಹಾಕುವುದು ಅಸಾಧ್ಯ ಮತ್ತು ತನ್ನ ಸಹೋದರನಿಗೆ ತನ್ನೊಂದಿಗೆ ಪ್ರಯಾಣಿಸಲು ಟಿಕೆಟ್ ನಿರಾಕರಿಸಲಾಗಿದೆ ಎಂದು ಮಹಿಳೆ ರಾಹುಲ್ ಗಾಂಧಿಗೆ ಹೇಳಿದ್ದಾಳೆ. ಆಗ ರಾಹುಲ್ ಗಾಂಧಿ ಆ ಮಹಿಳೆಯನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು.
ಶನಿವಾರದಂದು ಜಮ್ಮು ಕಾಶ್ಮೀರದ ಪರಿಸ್ಥಿತಿಯನ್ನು ಪರಿಶೀಲಿಸಲು ಶ್ರೀನಗರ ವಿಮಾನ ನಿಲ್ದಾಣಕ್ಕೆ ಬಂದ ನಂತರ ರಾಹುಲ್ ಗಾಂಧಿ ಮತ್ತು ಇತರ ವಿರೋಧ ಪಕ್ಷಗಳ 11 ನಾಯಕರನ್ನು ವಾಪಸ್ ದೆಹಲಿಗೆ ಕಳುಹಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಆಡಳಿತವು ರಾಜಕೀಯ ನಾಯಕರಿಗೆ ಭೇಟಿ ನೀಡದಂತೆ ಕೇಳಿಕೊಂಡಿತು. ಇದರಿಂದಾಗಿ ಇತರ ಜನರಿಗೆ ಅನಾನುಕೂಲತೆಯುಂಟಾಗಲಿದೆ ಎಂದು ಅದು ಹೇಳಿದೆ.
ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ (ಜೆ & ಕೆ) ವಿಶೇಷ ಸ್ಥಾನಮಾನ ನೀಡಿದ 370 ನೇ ವಿಧಿಯನ್ನು ಆಗಸ್ಟ್ 5 ರಂದು ರದ್ದುಪಡಿಸಲಾಯಿತು.