)
Sabarimala Gold-Plating Theft Case: ಶಬರಿಮಲೆ ದೇವಾಲಯದ ದ್ವಾರಪಾಲಕ ಮೂರ್ತಿಗಳಲ್ಲಿ ಲೇಪಿತವಾಗಿದ್ದ ಚಿನ್ನದ ತೂಕದಲ್ಲಿ ಅಸಮಾನತೆ ಕಂಡುಬಂದ ಹಿನ್ನೆಲೆಯಲ್ಲಿ ಭಾರಿ ಸಂಚಲನ ಸೃಷ್ಟಿಯಾಗಿದೆ. ಈ ಕುರಿತು ತನಿಕೆ ಮುಂದುವರೆದಿದ್ದು, ದೇವಸ್ಥಾನವನ್ನು ನೋಡಿಕೊಳ್ಳುವ ತಿರುವಾಂಕೂರು ದೇವಸ್ವಂ ಮಂಡಳಿ (TDB) ಈ ಕುರಿತು ಜಾಗೃತ ತಂಡವನ್ನು ರಚಿಸಿ ತನಿಖೆ ನಡೆಸಿದೆ.
ತನಿಖೆಯ ವೇಳೆ ಮೂರ್ತಿಗಳ ಕವಚದಲ್ಲಿದ್ದ ಚಿನ್ನದ ತೂಕ ಕಡಿಮೆಯಾಗಿದೆ ಎಂಬುದು ದೃಢಪಟ್ಟಿದೆ. ಚಿನ್ನದ ಲೇಪನ ಕಾಮಗಾರಿಯನ್ನು ಚೆನ್ನೈ ಮೂಲದ ಸ್ಮಾರ್ಟ್ ಕ್ರಿಯೇಷನ್ ಎಂಬ ಕಂಪನಿಗೆ ನೀಡಲಾಗಿತ್ತು. ಆದರೆ 42.8 ಕಿಲೋ ತೂಕದ ಚಿನ್ನದ ಕವಚ ಕೆಲಸ ಮುಗಿದು ಬಂದಾಗ ಕೇವಲ 38.2 ಕಿಲೋ ಮಾತ್ರ ಪತ್ತೆಯಾದ ಘಟನೆ ದೇವಸ್ವಂ ಮಂಡಳಿಯನ್ನೇ ಬೆರಗಾಗಿಸಿದೆ
ಈ ಕುರಿತು ದೇವಸ್ವಂ ಮಂಡಳಿಯ ಲೋಪವಿದೆ ಎಂಬ ಆರೋಪ ಕೇಳಿಬಂದಿದ್ದು, ಕೇರಳ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಚಿನ್ನದ ತೂಕ ಕಡಿಮೆಯಾದ ಪ್ರಕರಣದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲು ಹೈಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದೆ. ಅದರಂತೆ ಎಸ್ಐಟಿ ರಚಿಸಲ್ಪಟ್ಟಿದ್ದು, ಈಗಾಗಲೇ ಎರಡು ಪ್ರತ್ಯೇಕ ಕೇಸುಗಳನ್ನು ದಾಖಲಿಸಿ ತನಿಖೆ ನಡೆಸುತ್ತಿದೆ.
ಎಸ್ಐಟಿ ತನಿಖೆಯಲ್ಲಿ ಹಲವು ಚಕಿತಕಾರಿ ವಿಚಾರಗಳು ಬೆಳಕಿಗೆ ಬಂದಿವೆ. ಬೆಂಗಳೂರಿನ ಉದ್ಯಮಿ ಉನ್ನಿಕೃಷ್ಣನ್ ಪೋಟಿ ಪ್ರಮುಖ ಆರೋಪಿ ಎಂದು ಗುರುತಿಸಲಾಗಿದ್ದು, ಅವರೊಂದಿಗೆ ಬೆಂಗಳೂರಿನ ಮೂವರು ಪಾಲುದಾರರು ಭಾಗಿಯಾಗಿದ್ದಾರೆ ಎಂದು ವರದಿಯಾಗಿದೆ. ಪೋಟಿಯ ಪರವಾಗಿ ಅನಂತಸುಬ್ರಮಣ್ಯಂ ಹಾಗೂ ರಮೇಶ್ ಎಂಬವರು ಚಿನ್ನವನ್ನು ಸಂಗ್ರಹಿಸಿ ಮಾರಾಟಕ್ಕೆ ಸಹಕರಿಸಿದ್ದಾರೆ ಎಂಬ ಆರೋಪ ಇದೆ.
ತನಿಖೆಯ ಪ್ರಕಾರ ಕಳವು ಮಾಡಿದ ಚಿನ್ನವನ್ನು ಮಾರುಕಟ್ಟೆ ಬೆಲೆಯಿಗಿಂತಲೂ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗಿದೆ. ಇದರ ಹಿಂದೆ ದೇವಸ್ವಂ ಮಂಡಳಿಯ 10 ಮಂದಿ ಅಧಿಕಾರಿಗಳ ಸಹಭಾಗಿತ್ವವೂ ಪತ್ತೆಯಾಗಿದೆ. ಇವರ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಪ್ರಕರಣದ ಗಂಭೀರತೆಯನ್ನು ಗಮನಿಸಿ ಹೈಕೋರ್ಟ್ ತನಿಖೆ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸುವಂತೆ ಸೂಚನೆ ನೀಡಿದೆ. ದೇವಾಲಯದ ಭದ್ರತೆ ಮತ್ತು ನಂಬಿಕೆಯ ವಿಷಯದಲ್ಲಿ ಯಾವುದೇ ನಿರ್ಲಕ್ಷ್ಯ ಸಹಿಸಲು ಸಾಧ್ಯವಿಲ್ಲವೆಂದು ನ್ಯಾಯಾಲಯ ಎಚ್ಚರಿಕೆ ನೀಡಿದೆ.
ದೇವಸ್ವಂ ಮಂಡಳಿ ಈಗ ತನಿಖೆಗೆ ಪೂರ್ಣ ಸಹಕಾರ ನೀಡುತ್ತಿದೆ. ಪ್ರಕರಣದ ಮೊದಲ ಹಂತದ ವರದಿಯನ್ನು ಎಸ್ಐಟಿ ಕೋರ್ಟ್ಗೆ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಸಂಪೂರ್ಣ ಸತ್ಯ ಹೊರಬರುವ ನಿರೀಕ್ಷೆ ವ್ಯಕ್ತವಾಗಿದೆ.