ನವದೆಹಲಿ: ಕನ್ನಡಿಗ ಹಾಗೂ ಸುಪ್ರೀಂಕೋರ್ಟ್ ವಕೀಲರಾದ ಸಂಜಯ್ ಹೆಗ್ಡೆ ಅವರ ಖಾತೆಯನ್ನು ಅಮಾನತುಗೊಳಿಸಿದ್ದಕ್ಕಾಗಿ ಈಗ ಭಾರತದಲ್ಲಿ ಅನೇಕರು ಟ್ವಿಟ್ಟರ್ ನ್ನು ಬಹಿಷ್ಕರಿಸುತ್ತಿದ್ದಾರೆ. ಅದರ ಬದಲಾಗಿ ಜರ್ಮನಿಯ ಮೂಲದ ಓಪನ್ ಸೋರ್ಸ್ ಸೋಷಿಯಲ್ ನೆಟ್ವರ್ಕ್ ಸೈಟ್ ಮಾಸ್ಟೊಡಾನ್ ಬಳಸಲು ಪ್ರಾರಂಭಿಸಿದ್ದಾರೆ.
ಇತ್ತೀಚಿನ ವಾರಗಳಲ್ಲಿ ಟ್ವಿಟ್ಟರ್ ನಲ್ಲಿ ಹೆಚ್ಚುತ್ತಿರುವ ತಾರತಮ್ಯದ ಆರೋಪಗಳ ನಂತರ ಭಾರತದ ಬಳಕೆದಾರರು ಮಾಸ್ಟೊಡಾನ್ ಬಳಸಲು ಪ್ರಾರಂಭಿಸಿದ್ದಾರೆ, ಬಹುತೇಕರು ಟ್ವಿಟ್ಟರ್ ಜಾತಿವಾದವನ್ನು ಪ್ರತಿಪಾದಿಸುತ್ತಿದೆ ಎಂದು ಆರೋಪಿಸಿದ್ದಾರೆ. ಈ ಹಿನ್ನಲೆಯಲ್ಲಿ ಈಗ ಪರ್ಯಾಯ ಮಾಧ್ಯಮವಾಗಿ ಮಾಸ್ಟೋಡಾನ್ ಬಳಕೆ ಮಾಡುತ್ತಿದ್ದಾರೆ ಎನ್ನಲಾಗಿದೆ.
ಈ ಸಾಮಾಜಿಕ ನೆಟ್ವರ್ಕ್ ಬಳಕೆದಾರರ ಡೇಟಾವನ್ನು ಸಂಗ್ರಹಿಸದಿದ್ದರೂ, ಕಳೆದ ವಾರದಲ್ಲಿ ಮಾಸ್ಟೋಡಾನ್ ದಲ್ಲಿ ನೂತನ 18,800 ಹೊಸ ಬಳಕೆದಾರರನ್ನು ಕಂಡಿದೆ ಎಂದು ತಿಳಿದುಬಂದಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಸ್ಟೊಡಾನ್ ವಕ್ತಾರರು 'ಟ್ವಿಟರ್ನ ಎಲ್ಲಾ ನೀತಿಗಳು ಟ್ವಿಟರ್ಗೆ ಲಾಭದಾಯಕದ ಆಧಾರದ ಮೇಲೆ ನಡೆಯುತ್ತವೆ. ಆದರೆ ಮಾಸ್ಟೋಡಾನ್ ಬಳಕೆದಾರರಿಗೆ ಆದ್ಯತೆ ನೀಡುತ್ತದೆ. ಮಾಸ್ಟೋಡಾನ್ ಕಿರುಕುಳ ಮತ್ತು ದ್ವೇಷದ ಮಾತಿನ ವಿರುದ್ಧ ಮಿತಗೊಳಿಸುವಿಕೆಗಾಗಿ ಬಳಕೆದಾರರಿಗೆ ಧೃಡವಾದ ಮತ್ತು ಸಮಗ್ರ ಸಾಧನಗಳನ್ನು ಒದಗಿಸುತ್ತದೆ ' ಎಂದು ವಕ್ತಾರರು ಹೇಳಿದ್ದಾರೆ. ಮಾಸ್ಟೊಡಾನ್ ವಿಕೇಂದ್ರೀಕೃತ ಸಾಮಾಜಿಕ ನೆಟ್ವರ್ಕಿಂಗ್ ಸೇವೆಯಾಗಿದ್ದು, ಇದು ಬಳಕೆದಾರರಿಗೆ ತಮ್ಮದೇ ಆದ ಖಾಸಗಿ ನೆಟ್ವರ್ಕ್ಗಳನ್ನು ರಚಿಸಲು ಅನುವು ಮಾಡಿಕೊಡುತ್ತದೆ.
ಇದು ಟ್ವಿಟರ್ನಂತೆ ಮಾರಾಟ ಮಾಡಲು ಬಳಕೆದಾರರ ಡೇಟಾವನ್ನು ಸಂಗ್ರಹಿಸುವುದಿಲ್ಲ, ಮತ್ತು ಅದರ ಎಲ್ಲಾ ಕೋಡ್ಗಳನ್ನು ಬಳಕೆದಾರರಿಗೆ ಮುಕ್ತಗೊಳಿಸಿದೆ. ಆ ಮೂಲಕ ಬಳಕೆದಾರರು ತಮ್ಮದೇ ಆದ ಮಾಸ್ಟೋಡಾನ್ ಪ್ರಾರಂಭಿಸುವುದಕ್ಕೆ ಅನುಕೂಲ ಮಾಡಿದೆ ಎನ್ನಲಾಗಿದೆ.