ನಗರದಲ್ಲಿ ಮಳೆಹಾನಿ ಪ್ರದೇಶಗಳನ್ನು ಪರಿಶೀಲಿಸಿದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ

ಮಳೆಹಾನಿ ಪ್ರದೇಶಗಳಾದ ವಿಜಯನಗರ, ಮಲ್ಲೇಶ್ವರ, ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಗೆ ಭೇಟಿ ನೀಡಿ ಮಳೆಯಿಂದ ಆದ ಅನಾಹುತದ ಕುರಿತು ಪರಿಶೀಲನೆ ನಡೆಸಿದ ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ. ಜಿ. ಪರಮೇಶ್ವರ  

Last Updated : May 27, 2019, 12:34 PM IST
ನಗರದಲ್ಲಿ ಮಳೆಹಾನಿ ಪ್ರದೇಶಗಳನ್ನು ಪರಿಶೀಲಿಸಿದ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ title=

ಬೆಂಗಳೂರು: ನಗರಾಭಿವೃದ್ಧಿ ಸಚಿವರಾದ ಡಾ.ಜಿ. ಪರಮೇಶ್ವರ ಇಂದು ಮಳೆಹಾನಿ ಪ್ರದೇಶಗಳಾದ ವಿಜಯನಗರ, ಮಲ್ಲೇಶ್ವರ, ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಗೆ ಭೇಟಿ ನೀಡಿ ಮಳೆಯಿಂದ ಆದ ಅನಾಹುತದ ಕುರಿತು ಪರಿಶೀಲನೆ ನಡೆಸಿದರು.

ಮೊದಲಿಗೆ ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯಲ್ಲಿ ಮೂರಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿದ್ದವು. ವಿಜಯನಗರಕ್ಕೆ ತೆರಳಿದ ರಸ್ತೆ ಬಳಿ ನೆಲಕ್ಕುರುಳಿದ ಮರಗಳನ್ನು ವೀಕ್ಷಿಸಿದ ಅವರು ಇದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಆಗುತ್ತಿರುವ ಸಮಸ್ಯೆ ಆಲಿಸಿದರು. 

ನೆಲಕ್ಕುರುಳುದ ರೆಂಬೆಗಳನ್ನು ಕೂಡಲೇ ತೆರವು ಮಾಡುವಂತೆ ಸಿಬ್ಬಂದಿಗೆ ಸೂಚನೆ ನೀಡಿದ ಸಚಿವ ಪರಮೇಶ್ವರ, ಜೊತೆಗೆ ಮಳೆಯಿಂದಾಗಿ ವಿದ್ಯುತ್‌ ಲೈನ್‌ ಕಡಿತಗೊಂಡಿದ್ದು, ಕೂಡಲೇ ಸರಿಪಡಿಸುವಂತೆಯೂ  ಬೆಸ್ಕಾಂ ಸಿಬ್ಬಂದಿಗೆ ಸೂಚಿಸಿದರು.

ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ನಗರಾಭಿವೃದ್ಧಿ ಸಚಿವರು, ಕಳೆದ ಎರಡು ದಿನದಿಂದ ನಗರದಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗಿದ್ದು, 500 ಕ್ಕೂ ಹೆಚ್ಚು ಮರಗಳು ಹಾನಿಯಾಗಿದೆ. 100 ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿದೆ. ರಾಜ್ಯದ ಕೆಲವೆಡೆ 120 ಮೀ.ಮೀ ಗೂ ಅಧಿಕ ಮಳೆಯಾಗಿದೆ. 

ಮಳೆ ಹಾನಿ ಸರಿಪಡಿಸಲು 61 ತಂಡಗಳಿಂದ ಕೆಲಸ:
ಬಿರುಗಾಳಿ ಇದ್ದ ಕಾರಣ ಹೆಚ್ಚು ಮರ ನೆಲಕ್ಕುರುಳಿದೆ. ಮರಗಳ ತೆರವು, ವಿದ್ಯುತ್‌ ಲೈನ್‌ ಸರಿಪಡಿಸುವುದು ಸೇರಿದಂತೆ ಇತರೆ ಮಳೆ ಹಾನಿ ಸರಿಪಡಿಸಲು ಬಿಬಿಎಂಪಿ, ಬೆಸ್ಕಾಂ ಸೇರಿ ಇತರೆ ಇಲಾಖೆಗಳ 61 ತಂಡಗಳು ಕೆಲಸ ಮಾಡುತ್ತಿವೆ‌. ಜೊತೆಗೆ ಬಿಬಿಎಂಪಿ ಸಹಾಯವಾಣಿ ಸಹಿತ ಇರುವುದರಿಂದ ಸಮಸ್ಯೆಗಳು ಕೂಡಲೇ ತಿಳಿದು ಬರುತ್ತಿದೆ ಎಂದರು.

ಮುಂಗಾರು ಮಳೆಗೆ ಬಿಬಿಎಂಪಿ ಸಿದ್ಧ:
ಕೆಲವೇ ದಿನಗಳಲ್ಲಿ ಮುಂಗಾರು ಮಳೆ ಪ್ರಾರಂಭವಾಗಲಿದೆ. ಅದಕ್ಕೂ ಈಗಾಗಲೇ ಬಿಬಿಎಂಪಿ ಸಿದ್ಧವಾಗಿದೆ. ಒಂದು ತಿಂಗಳು ಪೂರ್ವಭಾವಿಯಾಗಿ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳುವ ಸಂಬಂಧ ಅಧಿಕಾರಿಗಳ ಸಭೆ ಕರೆದು ಸೂಚನೆ ನೀಡಿದ್ದೆ. ಹೀಗಾಗಿ ಮಳೆಯಾದರೂ ತಗ್ಗು ಪ್ರದೇಶದಲ್ಲಿ ಪ್ರವಾಹದಂಥ ಪರಿಸ್ಥಿತಿ ಎದುರಾಗಿಲ್ಲ ಎಂದರು.

ಮರ ಬಿದ್ದಾಗ ಹೆಚ್ಚಾಗಿ ಸಮಸ್ಯೆ ಆಗುವುದು ಕೇಬಲ್‌ಗಳು ಕಡಿತವಾಗುವುದು ಕೂಡ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಇನ್ನು ಎರಡು ತಿಂಗಳಲ್ಲಿ ಎಲ್ಲ ಕೇಬಲ್‌ಗಳ ಲೈನ್‌ಗಳನ್ನು ನೆಲದಡಿಯಲ್ಲಿ ಎಳೆಯುವ ಯೋಜನೆ ಕೈಗೆತ್ತಿಕೊಳ್ಳಲಿದ್ದೇವೆ ಎಂದರು.

Trending News