ಚಾಮರಾಜನಗರ: ಕೆರೆಗೆ ನೀರು ತುಂಬಿಸುವಂತೆ ಬುಧವಾರ ಬಿಜೆಪಿ ನಡೆಸಿದ ಪಾದಯಾತ್ರೆ ವೇಳೆ ರಸ್ತೆ ತಡೆದು ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಗುಂಡ್ಲುಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪ್ರಣಯ್, ಪ್ರತಾಪ್, ಮಂಜು, ಮಡಹಳ್ಳಿ ಸಂತೋಷ್ , ಬೊಮ್ಮಲಾಪುರ ಬಸವಣ್ಣ, ತೆರಕಣಾಂಬಿ ಗುರು ಸೇರಿದಂತೆ ಇತರರ ವಿರುದ್ಧ ಗುಂಡ್ಲುಪೇಟೆ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ತಮಿಳುನಾಡು, ಕೇರಳ ಸಂಪರ್ಕ ರಸ್ತೆ ಸಂಪರ್ಕಿಸುವ ಎಂಡಿಸಿಸಿ ಬ್ಯಾಂಕ್ ವೃತ್ತದ ಬಳಿ ಏಕಾಏಕಿ ರಸ್ತೆತಡೆದು ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿ, ಓಡಾಟಕ್ಕೆ ಅಡ್ಡಿ ಪಡಿಸಿದ್ದಾರೆಂದು ಕೇಸ್ ದಾಖಲಾಗಿದೆ. ಗಡಿಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಕೆರೆಗಳಲ್ಲಿ ನೀರಿಲ್ಲದೇ ರೈತರು ಪರಿತಪಿಸುತ್ತಿದ್ದಾರೆ. 110 ಕೆರೆಗಳಿಗೆ ನೀರು ತುಂಬಿಸುವಂತೆ ಒತ್ತಾಯಿಸಿ ರೈತರು ಅಹೋರಾತ್ರಿ ಬಿಜೆಪಿ ನಾಯಕರು ಬೆಂಬಲ ವ್ಯಕ್ತಪಡಿಸಿ 8 ಕಿಮೀ ಪಾದಯಾತ್ರೆ ನಡೆಸಿ ಸರ್ಕಾರವು ಕೂಡಲೇ ಕೆರೆಗಳಿಗೆ ನೀರು ತುಂಬಿಸಬೇಕೆಂದು ಬುಧವಾರ ಬಿಜೆಪಿಗರು ಒತ್ತಾಯಿಸಿದ್ದರು.
ಕಲ್ಕಟ್ಟೆ ಕೆರೆ ಆವರಣದಿಂದ ಗುಂಡ್ಲುಪೇಟೆ ತಾಲೂಕು ಕಚೇರಿ ತನಕದ ಪಾದಯಾತ್ರೆಯಲ್ಲಿ ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ಸಂಸದ ಯದುವೀರ್ ಒಡೆಯರ್, ಮಾಜಿ ಸಂಸದ ಪ್ರತಾಪ್ ಸಿಂಹ ಭಾಗಿಯಾಗಿ ಸರ್ಕಾರದ ವಿರುದ್ಧ ಟೀಕೆಗಳ ಮಳೆಗೈದರು.
ನವೆಂಬರ್ ಕ್ರಾಂತಿಯನ್ನೇ ಗುರಿಯಾಗಿಸಿದ ಕಮಲ ಕಲಿಗಳು ಅಧಿಕಾರ ಹಸ್ತಾಂತರದ ಮಾತುಗಳಿಂದ ಅಭಿವೃದ್ಧಿಯೇ ಕುಂಠಿತವಾಗಿದೆ. ಸರ್ಕಾರ ಐಸಿಯು ನಲ್ಲಿದ್ದು ಹೇಳೊರು- ಕೇಳೋರು ಯಾರೂ ಇಲ್ಲ. ಚಾಮರಾಜನಗರ ಜಿಲ್ಲೆಯಲ್ಲಿ ಬಿಜೆಪಿಯ ಓರ್ವ ಶಾಸಕನೂ ಇಲ್ಲದಿದ್ದರೂ ರೈತರ ಕಷ್ಟಕ್ಕೆ ಧ್ವನಿಯಾದ ಯಡಿಯೂರಪ್ಪ ಕೆರೆಗಳನ್ನು ತುಂಬಿಸಿದರು.
ಈಗ ಗ್ಯಾರಂಟಿ ಭರಾಟೆಗೆ ಖಜಾನೆ ಖಾಲಿಯಾಗಿ ಕೆರೆ ತುಂಬಿಸಲು ಹೋರಾಟ ಮಾಡಬೇಕಿದೆ. ಕಾಂಗ್ರೆಸ್ ಸರ್ಕಾರ ಜನರ ಪಾಲಿಗೆ ಸತ್ತಿದೆ. ನವೆಂಬರ್ ಕ್ರಾಂತಿಯಿಂದಾಗಿ ಪ್ರಗತಿಯೇ ಇಲ್ಲವಾಗಿದೆ ಎಂದು ಬಿಜೆಪಿಗರು ಕಿಡಿಕಾರಿದ್ದರು.









