)
ಚಾಮರಾಜನಗರ: ವೇತನ ಹೆಚ್ಚಳ ಮತ್ತು ವೇತನ ಬಾಕಿ ಪಾವತಿ ಮಾಡುವಂತೆ ಒತ್ತಾಯಿಸಿ ಸಾರಿಗೆ ನೌಕರರ ಮುಷ್ಕರದ ಬಿಸಿ ಗಡಿಜಿಲ್ಲೆ ಚಾಮರಾಜನಗರದ ಜನರಿಗೆ ತಟ್ಟಿದೆ.
ಮಂಗಳವಾರ (ಆ.05) ಬೆಳಗ್ಗೆ ಚಾಮರಾಜನಗರದಲ್ಲಿ ಬೆರಳೆಣಿಕೆಯಷ್ಟು ಬಸ್ ಸಂಚಾರ ಮಾತ್ರ ಇದ್ದಿದ್ದರಿಂದ ಸಮರ್ಪಕವಾಗಿ ಬಸ್ ಇಲ್ಲದೇ ಪ್ರಯಾಣಿಕರ ಪರದಾಡಿದರು.
ಚಾಮರಾಜನಗರದಿಂದ ಮೈಸೂರು, ಗುಂಡ್ಲುಪೇಟೆ, ಬೆಂಗಳೂರು ಕಡೆಗೆ ತೆರಳಲು ತಾಸುಗಟ್ಟಲೇ ಕಾದು ಕಾದು ಪ್ರಯಾಣಿಕರು ಸುಸ್ತಾದರು. ಬೆಳ್ಳಂಬೆಳಗ್ಗೆ ಬೆರಳೆಣಿಕೆಯಷ್ಟು ಮಾತ್ರ ಬಸ್ ಸಂಚಾರ ಆಗುತ್ತಿರುವುದರಿಂದ ಪ್ರಯಾಣಿಕರು ತೀರಾ ಪ್ರಯಾಸ ಪಡುವಂತಾಗಿದೆ.
ಬಸ್ ನಿಲ್ದಾಣ, ಡಿಪೋದಲ್ಲಿ ಖಾಕಿ ಕಟ್ಟೆಚ್ಚರ :
ವೇತನ ಹೆಚ್ಚಳ ಮತ್ತು ವೇತನ ಬಾಕಿಗಾಗಿ ಒತ್ತಾಯಿಸಿ ಸಾರಿಗೆ ಇಲಾಖೆ ನೌಕರರು ಮುಷ್ಕರರು ನಡೆಸುತ್ತಿರುವ ಹಿನ್ನೆಲೆ ಚಾಮರಾಜನಗರ ಬಸ್ ನಿಲ್ದಾಣ, ಡಿಪೋದಲ್ಲೇ ಖಾಕಿ ಕಟ್ಟೆಚ್ಚರ ವಹಿಸಿದ್ದಾರೆ.
ಬಸ್ ನಿಲ್ದಾಣಗಳು ಹಾಗೂ ಡಿಪೋದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಗಳ ನೇತೃತ್ವದಲ್ಲಿ ಡಿಎಆರ್ ತುಕಡಿ, ಪೊಲೀಸರು ಕಟ್ಟೆಚ್ಚರ ವಹಿಸಿದ್ದು ಕರ್ತವ್ಯಕ್ಕೆ ಹಾಜರಾಗಿ, ಸೂಕ್ತ ರಕ್ಷಣೆ ಕೊಡುತ್ತೇವೆಂದು ಸಾರಿಗೆ ನೌಕರರಿಗೆ ಪೊಲೀಸರು ಅಭಯ ನೀಡುತ್ತಿದ್ದಾರೆ.
ನಿಗದಿಯಂತೆ ರೂಟ್ ಗಳಲ್ಲಿ ಸಂಚರಿಸಿ, ಯಾವುದೇ ಭಯ ಬೇಡವೆಂದು ಸಾರಿಗೆ ಅಧಿಕಾರಿಗಳು, ಪೊಲೀಸರಿಂದ ಮನವೊಲಿಕೆ ಮಾಡುತ್ತಿದ್ದು ಸದ್ಯ, ಚಾಮರಾಜನಗರ ವಿಭಾಗ ವ್ಯಾಪ್ತಿಯಲ್ಲಿ ಶೇ. 20 ರಷ್ಟು ಮಾತ್ರ ಬಸ್ ಸಂಚಾರ ನಡೆಸುತ್ತಿವೆ.