)
ಬೆಂಗಳೂರು: ಬಿಜೆಪಿ ಸಂಸದ ಡಾ ಕೆ ಸುಧಾಕರ್ ಪತ್ನಿಗೆ ಹೌಸ್ ಅರೆಸ್ಟ್ ಮಾಡಿರೊ ಸೈಬರ್ ವಂಚಕರು 14 ಲಕ್ಷ ಹಣ ವಂಚಿಸಿದ್ದರು. ಆದ್ರೆ ಪೊಲೀಸರು ಚಾಲಾಕಿಗಳ ಪ್ಲಾನ್ ಉಲ್ಟಾ ಮಾಡಿದ್ದು, ಸಂಪೂರ್ಣ ಹಣವನ್ನು ರಿಕವರಿ ಮಾಡಿದ್ದಾರೆ. ಹಾಗಾದ್ರೆ ಅವತ್ತು ಆಗಿದ್ದೇನು ಎನ್ನುವುದನ್ನು ತಿಳಿದುಕೊಳ್ಳೋಣ ಬನ್ನಿ.
ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಸದಾನಂದಗೌಡರ 3 ಲಕ್ಷ ಹಣವನ್ನ ಸೈಬರ್ ಚೋರರು ವಂಚಿಸಿದ್ರು. ಇದೀಗ ಚಿಕ್ಕಬಳ್ಳಾಪುರ ಸಂಸದ ಸುಧಾಕರ್ ಪತ್ನಿ, ವೃತ್ತಿಯಲ್ಲಿ ವೈದ್ಯೆಯಾಗಿರೊ ಡಾ ಪ್ರೀತಿರವರಿಗೆ ಡಿಜಿಟಲ್ ಅರೆಸ್ಟ್ ಹೆಸರಲ್ಲಿ 14 ಲಕ್ಷ ರೂ. ವಂಚಿಸಿದ್ದಾರೆ.
ಕಳೆದ ಆಗಸ್ಟ್ 26ರಂದು ಡಾ. ಪ್ರೀತಿ ಸುಧಾಕರ್ ರ ಮೊಬೈಲ್ ಗೆ ಬೆಳಗ್ಗೆ 9:30 ಕ್ಕೆ ಸೈಬರ್ ವಂಚಕರು ಕರೆ ಮಾಡಿ, ನಾವು ಮುಂಬೈ ಸೈಬರ್ ಡಿಪಾರ್ಟ್ಮೆಂಟ್ ನಿಂದ ಮಾತನಾಡ್ತಿರೋದು. ನಿಮ್ಮ ದಾಖಲೆಗಳನ್ನ ಸದ್ಭತ್ ಖಾನ್ ಎಂಬ ಅಪರಿಚಿತ ಬಳಸಿಕೊಂಡು ಕ್ರೆಡಿಡ್ ಕಾರ್ಡ್ ಮಾಡಿಸಿ ಅದರಿಂದ ಇಲ್ಲಿಗಲ್ ಟ್ರಾನ್ಸಾಕ್ಷನ್ ನಡೆಸಿ ವಿದೇಶಕ್ಕೆ ಕಾನೂಬಾಹಿರ ಚಟುವಟಿಕೆ ನಡೆಸಲು ಜನರನ್ನ ಕಳುಹಿಸಿರೋದಾಗಿ ಹೇಳಿದ್ರಂತೆ.
ಈ ಕೇಸಲ್ಲಿ ಸದ್ಬತ್ ಖಾನ್ ಎನ್ನುವ ವ್ಯಕ್ತಿಯನ್ನು ಅರೆಸ್ಟ್ ಮಾಡಲಾಗಿದ್ದು, ಆತನ ಹೇಳಿಕೆಯಲ್ಲಿ ನಿಮ್ಮ ಹೆಸರಿನ ದಾಖಲೆಯಿದೆ. ಈ ಹಿನ್ನೆಲೆ ವಿಚಾರಣೆ ಅವಶ್ಯಕತೆಯಿದ್ದು ವಿಡಿಯೋ ಕಾಲ್ ಅಟೆಂಡ್ ಮಾಡುವಂತೆ ಸೂಚಿಸಿದ್ದಾರೆ. ನಂತರ ನಿಮ್ಮ ದಾಖಲೆ ಹಾಗೂ ವೈಯಕ್ತಿಕ ದಾಖಲೆಗಳನ್ನು ರದ್ದು ಮಾಡ್ತೀನಿ. ನಿಮ್ಮ ಗಂಡ ಎಂಪಿ ಅಂತಾ ಗೊತ್ತು. ಸ್ಮಾರ್ಟ್ ಆಗಿ ಆ್ಯಕ್ಟ್ ಮಾಡಿದ್ರೆ ನಿಮ್ಮ ಹಿಂದೆಯೇ ನಮ್ಮ ಇಡಿ ಅಧಿಕಾರಿಗಳು ಇದ್ದಾರೆ.ನಾವು ಸೂಚಿಸಿದ ಖಾತೆಗೆ ಹಣ ಹಾಕದಿದ್ರೆ ನಿಮ್ಮನ್ನು ಬಂಧಿಸುತ್ತಾರೆ ಎಂದು ಬೆದರಿಸಿದ್ದಾರೆ.ಇದರಿಂದ ಗಾಬರಿಯಾದ ಪ್ರೀತಿಯವರು ಸದಾಶಿವನಗರಿಂದ ಬಸವೇಶ್ವರ ನಗರದ ಎಸ್ ಬ್ಯಾಂಕ್ ಗೆ ಬಂದಿದ್ದಾರೆ. ಹಣ ಜಮೆ ಮಾಡೋವರೆಗೂ ಸಹ ಸೈಬರ್ ವಂಚಕ ವಿಡಿಯೋ ಕಾಲ್ ನಲ್ಲೇ ಇದ್ದನಂತೆ.
ಹಣ ಹಾಕಿದ ಬಳಿಕ ಆರ್ಬಿಐ ರೂಲ್ಸ್ ಪರಿಶೀಲನೆ ಮಾಡಿ 45 ನಿಮಿಷದಲ್ಲಿ ವಾಪಸ್ ಹಾಕೋದಾಗಿ ಹೇಳಿದ್ದಕ್ಕೆ ಪ್ರೀತಿ ಸುಧಾಕರ್ 14 ಲಕ್ಷ ರೂ.ಹಣವನ್ನ ವಂಚಕರು ಹೇಳಿದ ಖಾತೆಗೆ ಆರ್ಟಿಜಿಎಸ್ ಮಾಡಿದ್ರಂತೆ. ಹಣ ಹಾಕಿದ ನಂತರ ವಂಚನೆಯಾಗಿರೋದು ಗೊತ್ತಾಗಿ ಪ್ರೀತಿಯವರು ತಕ್ಷಣ ವೆಸ್ಟ್ ಸೆನ್ ಠಾಣೆಗೆ ದೂರು ನೀಡಿದ್ದಾರೆ.
ದೂರು ಬಂದ ತಕ್ಷಣವೇ ಪೊಲೀಸರು ಕ್ಷೀಪ್ರ ಗತಿಯಲ್ಲಿ ಪ್ರೀತಿಯವರು ಹಣ ಜಮೆ ಮಾಡಿದ್ದ ಖಾತೆಯನ್ನು ಕೇವಲ ಎರಡು ಗಂಟೆಯಲ್ಲಿ ಅಂದರೆ ಗೋಲ್ಡನ್ ಅವರ್ ನಲ್ಲಿ ಪ್ರೀಜ್ ಮಾಡಿಸಿದ್ದಾರೆ. ಸದ್ಯ ಕೋರ್ಟ್ ಆದೇಶ ಪಡೆದು 14 ಲಕ್ಷ ಹಣವನ್ನು ಪ್ರೀತಿಯವರಿಗೆ ಹಿಂದಿರುಗಿಸಲಾಗಿದೆ. ಇನ್ನೂ ಡಿಜಿಟಲ್ ಅರೆಸ್ಟ್ ಮಾಡಿ ವಂಚಿಸಲು ಯತ್ನಿಸಿದ ಸೈಬರ್ ಚೋರರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಒಟ್ಟಾರೆ ಕಾನೂನು ರೂಪಿಸುವ ಸಂಸದರ ಮನೆಯಲ್ಲೇ ಹೀಗಾದ್ರೆ ಜನ ಸಾಮಾನ್ಯರ ಪಾಡೇನು ಅನ್ನೊ ಪ್ರಶ್ನೆ ಸಹಜವಾಗಿ ಉದ್ಭವವಾಗಿದೆ.
ವರದಿ: ವಿಶ್ವನಾಥ್ ಎನ್ ಹರಿಹರ ಜೀ ಕನ್ನಡ ನ್ಯೂಸ್- ಬೆಂಗಳೂರು