ನವದೆಹಲಿ: ನವದೆಹಲಿಯಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡುತ್ತ, ಕಾಂಗ್ರೆಸ್ ಪಕ್ಷ ತನ್ನ ನಾಯಕರ ಈ ವರ್ತನೆಯಿಂದಾಗಿಯೇ ದೇಶಾದ್ಯಂತ ತಿರಸ್ಕೃತಗೊಳ್ಳುತ್ತಿದೆ ಎಂದು ಟೀಕಿಸಿದರು.
ದೇಶದಲ್ಲಿ ಜನರಷ್ಟೇ ಅಲ್ಲ, ಇವರೊಂದಿಗೆ ಮೈತ್ರಿ ಮಾಡಿಕೊಂಡವರೂ ಒಬ್ಬೊಬ್ಬರಾಗೇ ಹೊರ ಹೋಗುತ್ತಿದ್ದಾರೆ. ಶಿವಸೇನಾ, ಎನ್ ಸಿಪಿ ಆಯಿತು, ಈಗ ಎಸ್ಪಿಯನ್ನೂ ಕೈ ಬಿಡುತ್ತಿದ್ದಾರೆ. ಹೀಗೆ ಎಲ್ಲೆಲ್ಲಿ ಪ್ರಾದೇಶಿಕ ಪಕ್ಷಗಳ ಕೈ ಹಿಡಿದಿದ್ದರೋ ಅಲ್ಲೆಲ್ಲಾ ಹೊರಗಿಡುತ್ತಿದ್ದಾರೆ. ಇವರ ವರ್ತನೆಯೇ ಇದಕ್ಕೆಲ್ಲ ಕಾರಣ ಎಂದು ಹೇಳಿದರು.
ಹಿಂದೆಯೂ ಹೀಗೆ 15 ದಿನಗಳ ಕಾಲ ಸದನ ನಡೆಯಲು ಬಿಟ್ಟಿರಲಿಲ್ಲ. ಆಗ ತೀವ್ರ ಮುಖಭಂಗಕ್ಕೆ ಒಳಗಾದರು. ಈಗಲೂ ಅದೇ ಹಾದಿ ಹಿಡಿದಿದ್ದಾರೆ. ಕಾಂಗ್ರೆಸ್ ಎಲ್ಲಾ ರೀತಿಯಿಂದಲೂ ಸದನದ ಶಿಷ್ಟಾಚಾರವನ್ನು ಮುರಿಯುತ್ತಿದೆ ಎಂದು ಜೋಶಿ ಆರೋಪಿಸಿದರು.
ಭಾರತದ ವ್ಯವಸ್ಥೆಯನ್ನೇ ಅಪಮಾನಿಸುತ್ತಿದೆ ಕಾಂಗ್ರೆಸ್: ವಿದೇಶಿ ಸಂಸ್ಥೆಯೊಂದರ ವರದಿ ಆಧಾರದ ಮೇಲೆ ಈಗಲೂ ಸದನಕ್ಕೆ ಅಡ್ಡಿಪಡಿಸುತ್ತ ಅಗೌರವ ತೋರುತ್ತಿದ್ದಾರೆ. ಈ ಮೂಲಕ ಭಾರತದ ಪ್ರಜಾಭುತ್ವ, ಭಾರತದ ವ್ಯವಸ್ಥೆ, ದೇಶದ ನೀತಿ - ನಿಯಮಗಳನ್ನು, ಭಾರತ ದೇಶದ ಕಾನೂನು, ಸಂವಿಧಾನವನ್ನು ಅಪಮಾನಿಸುತ್ತಿದೆ, ಅಣಕಿಸುತ್ತಿದೆ ಎಂದು ಆರೋಪಿಸಿದರು.
ಚರ್ಚೆಗೆ ಬರಲಿ: ಅದೇನೇ ವಿರೋಧ ಇರಲಿ ಕಾಂಗ್ರೆಸ್ಸಿನವರು ಮೊದಲು ಸದನದಲ್ಲಿ ಚರ್ಚೆಗೆ ಬರಲಿ. ಸರ್ಕಾರ ಚರ್ಚೆಗೆ ಸಿದ್ಧವಿದೆ ಎಂಬುದನ್ನು ಸ್ಪೀಕರ್ ಸಹ ಹೇಳಿದ್ದಾರೆ ಎಂದು ಸಚಿವ ಜೋಶಿ ಹೇಳಿದರು.
ನಿಯಮದ ಪ್ರಕಾರ ಕ್ರಮ: ಕಾಂಗ್ರೆಸ್ ಇದೇ ಧೋರಣೆ ತೋರಿದರೆ ಮುಂದಿನ ದಿನಗಳಲ್ಲಿ ಸದನ ಸುಗಮವಾಗಿ ನಡೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಜರುಗಿಸಲಾಗುತ್ತದೆ. ಸಂಬಂಧಪಟ್ಟ ಸಚಿವರು ಆ ಬಗ್ಗೆ ಚರ್ಚಿಸಿ ತೀರ್ಮಾನ ಮಾಡುತ್ತಾರೆ ಎಂದು ಜೋಶಿ ಪ್ರತಿಕ್ರಿಯಿಸಿದರು.
ಕ್ಷಮೆ ಕೇಳಿ ಚರ್ಚೆಗೆ ಬರಲಿ: ಸದನಕ್ಕೆ ಪದೇ ಪದೇ ಅಡ್ಡಿಪಡಿಸುತ್ತ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡುತ್ತಿರುವುದಕ್ಕೆ ಕಾಂಗ್ರೆಸ್ ನಾಯಕರು ಕ್ಷಮೆ ಕೇಳಿ ಸದನದೊಳಗೆ ಚರ್ಚೆಗೆ ಬರಲಿ ಎಂದು ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.