)
Male Mahadeshwara tigers death: ಇಡೀ ವಿಶ್ವವೇ ನೆನಪಿಡುವ ದೊಡ್ಡ ವನ್ಯಜೀವಿ ದುರಂತ ರಾಜ್ಯದಲ್ಲಿ ಘಟಿಸಿದೆ. ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಲಯದಲ್ಲಿ ನಾಲ್ಕು ಮರಿ ಹಾಗೂ ಒಂದು ತಾಯಿ ಹುಲಿ ಸೇರಿದಂತೆ ಒಟ್ಟು ಐದು ಹುಲಿಗಳು ಸಾವನ್ನಪ್ಪಿವೆ. ಲಭ್ಯ ದಾಖಲೆ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಒಂದೇ ದಿನ ಒಂದೇ ಸ್ಥಳದಲ್ಲಿ ಸಾವನ್ನಪ್ಪಿದ ಅತಿಹೆಚ್ಚು ಹುಲಿಗಳ ಸಾವು ಇದಾಗಿದೆ. ವಿಷ ಸೇವಿಸಿ ಈ ಸಾವು ನಡೆದಿದೆಯೆಂದು ಹೇಳಲಾಗಿದೆ. ಸನಿಹದಲ್ಲಿ ಹಸುವೊಂದು ಸಾವನ್ನಪ್ಪಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಬಗ್ಗೆ ತನಿಖೆ ನಡೆದಿದೆ.
ಮರಿ ಹಾಕಿದ ಹುಲಿಗಳು ಏಳೆಂಟು ವಾರಗಳ ಕಾಲ ಮರಿಯನ್ನು ಜೊತೆಗೆ ಒಯ್ದು ಬೇಟೆ ಆಹಾರ ಒದಗಿಸುತ್ತವೆ. ಇದಲ್ಲದೇ ಮರಿಗಳಿಗೆ ಬೇಟೆ ಕಲಿಸುವ ಕಾರಣಕ್ಕೆ ಹೆಚ್ಚು ಬೇಟೆಯಾಡುತ್ತವೆ. ಇಂಥ ಸಂದರ್ಭದಲ್ಲಿ ಮರಿಗಳ ರಕ್ಷಣೆಗೆ ಇವುಗಳು ಸಾಮಾನ್ಯವಾಗಿ ಒಂದೇ ಸ್ಥಳದಲ್ಲಿ ಇರುತ್ತವೆ. ಜಾಗ ಬದಲಿಸುವಾಗ ಕಚ್ಚಾ ಮಣ್ಣಿನ ರಸ್ತೆಯಲ್ಲಿ ಕಾಡಿನ ಇನ್ನೊಂದು ಪ್ರದೇಶಕ್ಕೆ ಮರಿಗಳ ಜೊತೆಗೆ ಸಂಚರಿಸುವ ಹೆಜ್ಜೆ ಗುರುತುಗಳು ಕಾಣುತ್ತವೆ. ಕಾಟಿ, ಹಂದಿ, ಜಿಂಕೆಗಳ ಸಾಂದ್ರತೆ ಕಡಿಮೆ ಇದ್ದರೆ ಸುತ್ತಲಿನ ದನಕರು ಹಿಡಿಯುವುದು ಸಹಜವಾಗಿದೆ. ಕಾಡಿಗೆ ಮೇಯಲು ಹೋದ ದನಕರುಗಳ ನಿರಂತರ ಸಾವು ಘಟನೆಗೆ ಕಾರಣವೇ? ಹುಲಿ ಸಾವಿನ ಘಟನೆಯನ್ನು ಈ ಹಿನ್ನಲೆಯಲ್ಲಿ ಕೂಡ ತನಿಖೆಗೆ ಒಳಪಡಿಸುವ ಅಗತ್ಯವಿದೆ. ವನ್ಯಜೀವಿ ಹಾಗೂ ಕೃಷಿ/ಜನಜೀವನ ಸಂಘರ್ಷದಲ್ಲಿ ಕಾಡಿನ ಮೇಲೆ ಸೇಡು ಹುಟ್ಟದಂತೆ ಇಲಾಖೆ ಎಚ್ಚರಬೇಕು. ಜನರ ಜೊತೆಗೆ ನಿರಂತರ ಸಂಪರ್ಕ, ವನ್ಯ ಜೀವಿಗಳ ಹಾನಿಗೆ ಶೀಘ್ರ ಪರಿಹಾರ ಕ್ರಮ ಮುಖ್ಯವಾಗುತ್ತವೆ. ದೂರವಿರುವ ನಮಗೆ ಹುಲಿಯ ಸಾವಿನ ವರದಿ ಕಾಣುತ್ತದೆ. ಕಾಡಂಚಿನ ಗ್ರಾಮಗಳಲ್ಲಿ ನಿತ್ಯ ಏನು ನಡೆಯುತ್ತಿದೆ? ಅರಿತು ನಡೆಯುವುದು ಭವಿಷ್ಯದ ವನ್ಯಜೀವಿಗಳ ಸಂರಕ್ಷಣೆಯ ಮುಖ್ಯ ಹೆಜ್ಜೆಯಾಗಿದೆ.
ಹುಲಿಗಳ ಸಾವಿನ ಹಿನ್ನಲೆಯಲ್ಲಿ ಹಳೆಯ ದಾಖಲೆ ನೆನಪಾಗುತ್ತಿದೆ. 1878ರಲ್ಲಿ ಒಂದು ತಾಯಿ ಹುಲಿ ಹಾಗೂ ಐದು ಪುಟ್ಟ ಮರಿಗಳನ್ನು ಉತ್ತರ ಕನ್ನಡ ಜಿಲ್ಲೆಯ ತಿನೈ ಸನಿಹ ಭೇಟೆಯಾಡಲಾಗಿದೆ. 1882ರ ಏಪ್ರಿಲ್ ತಿಂಗಳಲ್ಲಿ ಸೂಪಾ ಸನಿಹದ ಪೊಟೊಲಿಯಲ್ಲಿ ತಾಯಿ ಹುಲಿ ಹಾಗೂ ಏಳು ತಿಂಗಳ ಪ್ರಾಯದ ಐದು ಮರಿಗಳು ಸೇರಿದಂತೆ ಆರು ಹುಲಿಗಳ ಭೇಟೆಯಾಡಲಾಗಿತ್ತು. 1875 ಏಪ್ರಿಲ್ 3ರಂದು ಸೂಪಾ ಸನಿಹದ ಕುಂಡಪೆ ಎಂಬಲ್ಲಿ ಎರಡು ಹುಲಿಗಳ ನಡುವೆ ಕದನ ನಡೆದು ಒಂದು ಹುಲಿ ಸಾವನ್ನಪ್ಪಿದೆ. ಈ ಘಟನೆ ವನ್ಯಜೀವಿ ಚರಿತ್ರೆಯಲ್ಲಿ ವಿಶೇಷವಾಗಿದೆ. ಒಂದು ಗಂಡು ಹುಲಿ ಕಾಡಲ್ಲಿ ಒಂದು ಎತ್ತನ್ನು ಬೇಟೆಯಾಡಿ ರಾತ್ರಿ ಸ್ಪಲ್ಪ ತಿಂದು ಮುಗಿಸಿತ್ತು. ಮರುದಿನ ಏಪ್ರಿಲ್ 3ರಂದು ರಾತ್ರಿ ಹೆಣ್ಣು ಹುಲಿಯೊಂದು ಅದೇ ಮಾರ್ಗದಲ್ಲಿ ಪುಟ್ಟ ಮರಿಗಳ ಜೊತೆಗೆ ಆಕಸ್ಮಿಕವಾಗಿ ಬಂದಿತ್ತು. ಸಾವನ್ನಪ್ಪಿದ ಎತ್ತಿನ ಇನ್ನುಳಿದ ಮಾಂಸವನ್ನು ತನ್ನ ಮರಿಗಳ ಜೊತೆಗೆ ತಿನ್ನಲು ಆರಂಭಿಸಿತ್ತು. ಅಷ್ಟರಲ್ಲಿ ಹಿಂದಿನ ದಿನ ಎತ್ತನ್ನು ಬೇಟೆಯಾಡಿದ ಗಂಡು ಹುಲಿ ಅಲ್ಲಿಗೆ ಬಂದು ಕದನಕ್ಕೆ ನಿಂತಿತ್ತು. ಅರ್ಧಗಂಟೆ ಕಾಲ ಜೋರಾಗಿ ಕಚ್ಚಾಟ, ಗಲಾಟೆಯನ್ನು ಸನಿಹದ ಹಳ್ಳಿಗರು ಆಲಿಸಿದ್ದರು. ಮರುದಿನ ಬೇಟೆಗಾರನೊಬ್ಬ ಈ ಜಾಗಕ್ಕೆ ಹೋದಾಗ ಹುಲಿ-ಹುಲಿಯ ನಡುವೆ ಕದನ ನಡೆದು ಒಂದು ಹುಲಿ ಸತ್ತಿದ್ದು ದಾಖಲಾಯಿತು.
ಬ್ರಿಟಿಷ್ ಕಾಲದಲ್ಲಿ ಹುಲಿ ಬೇಟೆಗೆ ಪ್ರೋತ್ಸಾಹ ನೀಡಲಾಗುತ್ತಿತ್ತು. ಒಂದು ಹುಲಿ ಹೊಡೆದರೆ ಒಂದೆರಡು ರೂಪಾಯಿ ಬಹುಮಾನ ಸಿಗುತ್ತಿತ್ತು. 1857-77ರ 20 ವರ್ಷಗಳಲ್ಲಿ 510 ಹುಲಿಗಳ ಬೇಟೆ ನಮ್ಮ ಕೆನರಾ ಜಿಲ್ಲೆಯಲ್ಲಿ ನಡೆದಿತ್ತು. ಈಗ 2022ರ ಹುಲಿ ಗಣತಿ ಪ್ರಕಾರ ನಮ್ಮ ರಾಜ್ಯದಲ್ಲಿ ಇರೋದು 563 ಹುಲಿಗಳು ಮಾತ್ರ! ಗಮನಿಸಬೇಕಾದ ಸಂಗತಿಯೆಂದರೆ 2006ರಲ್ಲಿ 290 ಹುಲಿಗಳು ಮಾತ್ರವಿದ್ದ ನಮ್ಮ ರಾಜ್ಯದಲ್ಲಿ ಸಂರಕ್ಷಣಾ ಪ್ರಯತ್ನದಿಂದ ಏರಿಕೆ ಕಂಡಿದೆ. ಈಗ ಒಮ್ಮೆಗೇ ಐದು ಹುಲಿಗಳ ಸಾವು ಅರಣ್ಯ ಇಲಾಖೆಯ ಹುಲಿ ಸಂರಕ್ಷಣಾ ಕಾರ್ಯಗಳನ್ನು ಈಗ ಜಗತ್ತು ಮರು ಪರಿಶೀಲಿಸುವ ಸಂದರ್ಭ ತಂದಿದೆ. ಸಂರಕ್ಷಣಾ ಅನುಕೂಲಕ್ಕೆ ನಿಗದಿತ ಅರಣ್ಯ ಪ್ರದೇಶವನ್ನು ವನ್ಯಜೀವಿ ಸಂರಕ್ಷಣಾ ವಲಯಕ್ಕೆ ಒಳಪಡಿಸಲಾಗಿದೆ. ಇವುಗಳಲ್ಲಿ ತೇಗದ ನೆಡುತೋಪು ಕೂಡ ಸೇರಿವೆ. ಇಲ್ಲಿ ಹುಲಿಗಳಿಗೆ ಆಹಾರವಾದ ಜಿಂಕೆ, ಕಾಟಿಗಳ ಆಹಾರ ಆವಾಸಕ್ಕೇ ಅಗತ್ಯ ಹುಲ್ಲು ಕೂಡ ಇರೋದಿಲ್ಲ. ಹೀಗಾಗಿ ಹಲವು ಕಡೆ ದನಕರು ತಿಂದೇ ಹುಲಿ ತನ್ನ ಆಹಾರ ಹುಡುಕುವ ಪರಿಸ್ಥಿತಿ ಇದೆ.
ಹುಲಿ ಸಾವುಗಳ ಘಟನೆ ಹೇಳಿದ ಮೇಲೆ ಕೊನೆಗೊಂದು ಕರಣಾಜನಕ ಕಥೆ ಹೇಳಬೇಕು. ಕಾರವಾರ ಜಿಲ್ಲೆಯ ದೇವಕಾರು ಎಂಬ ಊರು ಕೈಗಾ ಸ್ಥಾವರದ ಸನಿಹದಲ್ಲಿದೆ. ಅಲ್ಲಿನ ಜನಕ್ಕೆ ಪರಿಹಾರ ನೀಡಿ ಅವರೆಲ್ಲ ಆರೇಳು ವರ್ಷಗಳ ಹಿಂದೆ ಬೇರೆಡೆ ಹೋಗಿದ್ದಾರೆ. ಕದ್ರಾ ಅಣೆಕಟ್ಟಿನ ಹಿನ್ನೀರು ಪ್ರದೇಶದ ಈ ಹಳ್ಳಿಗೆ ಹೋಗಲು ದೋಣಿಯಲ್ಲಿ ಸಾಗಬೇಕು. ಕೃಷಿಕರು ಊರು ಬಿಟ್ಟು ಹೋಗುವಾಗ 200-250 ದನಕರುವನ್ನು ದ್ವೀಪವಾದ ದೇವಕಾರಿನಲ್ಲಿ ಬಿಟ್ಟು ಊರು ತ್ಯಜಿಸಿದರು. ಅಲ್ಲಿನ ಎಲ್ಲಾ ದನಕರುವನ್ನು ಹುಲಿಗಳು ತಿಂದು ಮುಗಿಸಿವೆ. ವಿಶೇಷವೆಂದರೆ ಈ ಪ್ರದೇಶದಲ್ಲಿ ಜಿಂಕೆಗಳಿವೆ. ಅವು ಕೃಷಿಕರ ಭತ್ತದ ಗದ್ದೆಗಳಲ್ಲಿ ಹುಲ್ಲು ತಿಂದು ಬದುಕಿದ್ದವು. ಈಗ ಬಯಲಾದ ಗದ್ದೆ ಬಯಲು ಇಲಾಖೆಯ ಅಕೇಶಿಯಾ ನೆಡುತೋಪು ಆಗಿದೆ.
ದೋಣಿಯಲ್ಲಿ ಗಿಡ ಒಯ್ದು ವನ್ಯಜೀವಿಗಳ ವಲಯದಲ್ಲಿ ಅಕೇಶಿಯಾ ನಾಟಿ ಮಾಡಲಾಗಿದೆ. ಅಲ್ಲೀಗ ಅಂದಾಜು ಐದು ಹುಲಿಗಳಿರುವ ಮಾಹಿತಿ ಇದೆ. ನಮ್ಮ ಇಲಾಖೆ ವನ್ಯಜೀವಿ ವಲಯವೆಂದು ಘೋಷಣೆ ಮಾಡಿದರೆ ಸಾಲದು, ಅಲ್ಲಿ ಹುಲಿಗಳ ಆಹಾರವಾದ ಜಿಂಕೆಗಳಿಗೆ ಹುಲ್ಲಿದೆಯೇ? ಗಮನಿಸಬೇಕು. ಅಕೇಶಿಯ ನೆಟ್ಟು ಯಾರೂ ಇಲ್ಲದ ದ್ವೀಪದಲ್ಲಿ ತಂತಿ ಬೇಲಿ ಹಾಕಿದ ಇಲಾಖೆ ಕಾರ್ಯವೈಖರಿ ಕೂಡ ವಿಮರ್ಶೆಗೆ ಒಳಪಡಬೇಕು ಅಲ್ಲವೇ? ಅರಣ್ಯ ಸಚಿವರು ಇಂಥ ಸೂಕ್ಷ್ಮತೆ ಅರಿತು ಆಡಳಿತ ನಿರ್ಧಾರ ಮಾಡಬೇಕು. ನೆನಪಿಡಿ ಹುಲಿ ಸಾವಿನ ಕಾರಣಗಳ ಪೊಸ್ಟ್ ಮಾರ್ಟಮ್, ತನಿಖೆ ಸಾಗಲಿ. ಈ ಕುರಿತ ಚರ್ಚೆ ನಡೆಯಲಿ. ಆದರೆ ನಿಜವಾದ ಸಮಸ್ಯೆ ಅರಿತು ಮುಂದೆ ಸಾಯಲಿರುವ ಹುಲಿಗಳನ್ನು ಉಳಿಸಲು ಕಟ್ಟುನಿಟ್ಟಿನ ಎಚ್ಚರ ಎಲ್ಲದಕ್ಕಿಂತ ಮುಖ್ಯವಾಗಿದೆ.
✍️ಶಿವಾನಂದ ಕಳವೆ, ಲೇಖಕರು (ಈ ಲೇಖನವನ್ನ ಹಿರಿಯ ಲೇಖಕರಾದ ಶಿವಾನಂದ ಕಳವೆ ಅವರ ಫೇಸ್ಬುಕ್ ಖಾತೆಯಿಂದ ತೆಗೆದುಕೊಂಡು ಪ್ರಕಟಿಸಲಾಗಿದೆ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ