)
Dharmasthala case: ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತುಹಾಕಿರುವ ಆರೋಪ ಪ್ರಕರಣ ತನಿಖೆ ಹೊಸ ತಿರುವು ಪಡೆದುಕೊಂಡಿದೆ. ಪ್ರಕರಣವನ್ನು ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳು ಸಾಕ್ಷಿ ದೂರುದಾರನನ್ನು ಜೊತೆಯಲ್ಲಿ ಕರೆದುಕೊಂಡು ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆಗೆ ತೆರಳಿ ಮಹಜರು ನಡೆಸಿದ್ದಾರೆ.
ಬೆಳ್ತಂಗಡಿ ನ್ಯಾಯಾಲಯದಿಂದ ಆ.25 ರಂದು ಸರ್ಚ್ ವಾರಂಟ್ ಪಡೆದುಕೊಂಡ ಎಸ್ಐಟಿ ತಂಡ, ತನಿಖಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಅವರ ನೇತೃತ್ವದಲ್ಲಿ ತಿಮರೋಡಿ ಹಾಗೂ ಅವರ ಸಹೋದರರ ಮನೆಗಳಿಗೆ ಭೇಟಿ ನೀಡಿದೆ. ಈ ವೇಳೆ ಸಾಕ್ಷಿ ದೂರುದಾರನು ತಾನು ಉಜಿರೆಯಲ್ಲಿ ಇರುವ ತಿಮರೋಡಿ ಅವರ ನಿವಾಸದಲ್ಲಿ ಆಶ್ರಯ ಪಡೆದಿದ್ದೆ ಎಂದು ಹೇಳಿಕೆ ನೀಡಿದ್ದಾನೆ.
ಪ್ರಕರಣದ ಪ್ರಮುಖ ಹಂತವಾಗಿ ಪರಿಗಣಿಸಲ್ಪಟ್ಟಿರುವ ಈ ಸ್ಥಳ ಮಹಜರಿನಲ್ಲಿ, ಬುರುಡೆ ಪ್ರಕರಣದಲ್ಲಿ ಕಳೆದ ಎರಡು ತಿಂಗಳಿಂದ ತಿಮರೋಡಿ ಸಾಕ್ಷಿ ದೂರುದಾರನಿಗೆ ಆಶ್ರಯ ನೀಡಿದ್ದರು ಎಂಬ ಆರೋಪವೂ ಬೆಳಕಿಗೆ ಬಂದಿದೆ. ಇದರಿಂದಾಗಿ ಪ್ರಕರಣದಲ್ಲಿ ತಿಮರೋಡಿ ಅವರ ಪಾತ್ರ ಮತ್ತಷ್ಟು ಕುತೂಹಲ ಹುಟ್ಟಿಸಿದೆ.
ಸ್ಥಳ ಪರಿಶೀಲನೆಯ ಬಳಿಕ, ಎಸ್ಐಟಿ ಅಧಿಕಾರಿಗಳು ಅಗತ್ಯ ದಾಖಲೆಗಳನ್ನು ಸಂಗ್ರಹಿಸಿದ್ದು, ಮುಂದಿನ ಹಂತಗಳಲ್ಲಿ ಪ್ರಕರಣದ ತನಿಖೆ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.