ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ 10 ದಿನಗಳು ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ.
ಉಪಚುನಾವಣೆ ಪ್ರಚಾರದ ವೇಳೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ(HD Kumaraswamy) ಅವರು ಬಳಲಿದ್ದು ವೈದ್ಯರ ಸೂಚನೆ ಮೇರೆಗೆ ಅವರು 10 ದಿನಗಳ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.
ಈ ಅವಧಿಯಲ್ಲಿ ಯಾವುದೇ ಪ್ರವಾಸ, ರಾಜಕೀಯ ನಾಯಕರು, ಸಾರ್ವಜನಿಕರ ಭೇಟಿ ಮಾಡದೇ ವಿಶ್ರಾಂತಿ ಪಡೆಯಬೇಕೆಂದು ವೈದ್ಯರು ಸೂಚಿಸಿರುವ ಹಿನ್ನೆಲೆಯಲ್ಲಿ ಹೆಚ್ಡಿಕೆ ಸಾರ್ವಜನಿಕ ಭೇಟಿಗೆ ಲಭ್ಯವಿರುವುದಿಲ್ಲ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅನಾರೋಗ್ಯದ ನಿಮಿತ್ತ ಬುಧವಾರ ವೈದ್ಯರನ್ನು ಭೇಟಿಯಾಗಿದ್ದ ಕುಮಾರಸ್ವಾಮಿ ಅವರು ವೈದ್ಯರ ಸೂಚನೆ ಮೇರೆಗೆ ಹಲವು ತಪಾಸಣೆಗೆ ಒಳಪಟ್ಟರು. ಪರೀಕ್ಷಾ ವರದಿಗಳಿಂದ ರಕ್ತದಲ್ಲಿ ಸೋಂಕು ಉಂಟಾಗಿರುವುದು ಗೊತ್ತಾಗಿದೆ. ಇದೇ ಹಿನ್ನೆಲೆಯಲ್ಲಿ ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.
2009ರಲ್ಲಿ ಉತ್ತರ ಕರ್ನಾಟಕ ಪ್ರವಾಹ ಪೀಡಿತರ ಪರಿವೀಕ್ಷಣೆಗೆ ಹೋಗಿದ್ದಾಗ ಇದೇ ರೀತಿ ಅವರಿಗೆ ಸೋಂಕು ಉಂಟಾಗಿತ್ತು. ಈಗಲೂ ಅವರಿಗೆ ಅದೇ ರೀತಿಯ ಸೋಂಕು ಉಂಟಾಗಿರುವ ಕಾರಣ ಸಾರ್ವಜನಿಕರು ಸಹಕರಿಸಬೇಕಾಗಿ ಹೆಚ್ಡಿಕೆ ಕುಟುಂಬ ಮನವಿ ಮಾಡಿದೆ.