Dr. Mogalli Ganesh : ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಹಿರಿಯ ಸಾಹಿತಿ, ಕಾದಂಬರಿಕಾರ, ವಿಮರ್ಶಕ ಮತ್ತು ಸಂಶೋಧಕ ಡಾ. ಮೊಗಳ್ಳಿ ಗಣೇಶ್ (64) ಅವರು ಭಾನುವಾರ ಮುಂಜಾನೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಅನಾರೋಗ್ಯದಿಂದ ನಿಧನರಾದರು. ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇಂದು ಬೆಳಗ್ಗೆ ಅಂಗಾಂಗ ವೈಫಲ್ಯ ಕಾರಣದಿಂದ ಕೊನೆಯುಸಿರೆಳೆದಿದ್ದಾರೆ.
ಡಾ. ಮೊಗಳ್ಳಿ ಗಣೇಶ್ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನ ಹೊಂದಿದ್ದವರು. ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ಸಾಹಿತ್ಯ ಜೀವನದ ಅವಧಿಯಲ್ಲಿ ಅವರು ಅನೇಕ ಕಥೆಗಳು, ಕಾದಂಬರಿಗಳು, ವಿಮರ್ಶೆಗಳು, ಸಂಶೋಧನಾ ಕೃತಿಗಳು ಹಾಗೂ ಜಾನಪದ ಅಧ್ಯಯನ ಕುರಿತ ಲೇಖನಗಳನ್ನು ರಚಿಸಿದ್ದಾರೆ.
ಅವರ ಪ್ರಮುಖ ಕಥಾಸಂಕಲನಗಳಲ್ಲಿ ‘ಬುಗುರಿ’, ‘ಮಣ್ಣು’, ‘ಅತ್ತೆ’, ‘ನನ್ನಜ್ಜನಿಗೊಂದಾಸೆಯಿತ್ತು’, ‘ಒಂದು ಹಳೆಯ ಚಡ್ಡಿ’ ಮುಂತಾದವುಗಳು ಪ್ರಸಿದ್ಧವಾಗಿವೆ. ಗ್ರಾಮೀಣ ಜೀವನದ ನಿಜವಾದ ಚಿತ್ರಣ ಮತ್ತು ಮಾನವೀಯ ಭಾವನೆಗಳನ್ನು ತಮ್ಮ ಕಥೆಗಳಲ್ಲಿ ಮೂಡಿಸುವಲ್ಲಿ ಅವರು ಅಸಾಧಾರಣ ಪ್ರತಿಭೆಯನ್ನು ತೋರಿದ್ದರು. ಹಳ್ಳಿ ಜೀವನದ ನಾಡಿನ ನುಡಿಗಟ್ಟುಗಳು, ಜನಪದ ಸಂಸ್ಕೃತಿ, ಸಾಮಾನ್ಯರ ಹೋರಾಟ, ಇವೆಲ್ಲ ಅಂಶಗಳು ಅವರ ಬರಹದ ಹೃದಯವಾಗಿದ್ದವು.
ಡಾ. ಗಣೇಶ್ ಅವರು 1963ರ ಜುಲೈ 1ರಂದು ಚನ್ನಪಟ್ಟಣ ತಾಲ್ಲೂಕಿನ ಸಂತೆಮೊಗೇನ ಹಳ್ಳಿಯಲ್ಲಿ ಜನಿಸಿದರು. ಹಳ್ಳಿಯ ವಾತಾವರಣದಲ್ಲಿ ಬೆಳೆದ ಅವರು ಅಲ್ಲಿ ಕಂಡ ಜನಜೀವನವೇ ಅವರ ಕಥೆಗಳಿಗೆ ಪ್ರೇರಣೆ ನೀಡಿತು. ಸಾಹಿತ್ಯದ ಜೊತೆಗೆ ಜಾನಪದ ಅಧ್ಯಯನಕ್ಕೂ ಅವರು ಅಮೂಲ್ಯ ಕೊಡುಗೆ ನೀಡಿದ್ದಾರೆ. ಅವರ ನಿಧನದಿಂದ ಕುಟುಂಬದವರ ಜೊತೆಗೆ ಸಾಹಿತ್ಯ ಲೋಕವೇ ದುಃಖದಲ್ಲಿದೆ. ಅವರ ನಿಧನಕ್ಕೆ ಕೇಂದ್ರ ಸಚಿವ ಕುಮಾರಸ್ವಾಮಿ, ಸಚಿವ ಎಚ್.ಸಿ. ಮಹದೇವಪ್ಪ, ಶಿವರಾಜ ತಂಗಡಗಿ ಸೇರಿದಂತೆ ಅನೇಕ ಗಣ್ಯರು ಮತ್ತು ಸಾಹಿತ್ಯಪ್ರೇಮಿಗಳು ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೂಡ ತಮ್ಮ X ಖಾತೆಯಲ್ಲಿ ಟ್ವೀಟ್ ಮಾಡುವ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.
ನಾಡಿನ ಪ್ರಖ್ಯಾತ ಸಾಹಿತಿ ಡಾ.ಮೊಗಳ್ಳಿ ಗಣೇಶ್ ಅವರ ಹಠಾತ್ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ಕನ್ನಡ ಸಾಹಿತ್ಯ ಲೋಕಕ್ಕೆ ಕತೆ, ಕಾವ್ಯ, ಕಾದಂಬರಿಗಳನ್ನು ನೀಡುವುದರ ಜೊತೆಯಲ್ಲಿ ಜಾನಪದವನ್ನೂ ಒಳಗೊಂಡಂತೆ ಸಾಂಸ್ಕೃತಿಕ ಕ್ಷೇತ್ರದಲ್ಲಿ ಅವರು ಮಾಡಿರುವ ಅಧ್ಯಯನ ಮತ್ತು ಸಂಶೋಧನೆ ಅನನ್ಯವಾದುದು.
ಸತ್ಯ ನಿಷ್ಠುರಿಯಾಗಿದ್ದ ಡಾ.ಮೊಗಳ್ಳಿ ಅವರು… pic.twitter.com/dHBVCEnD1m
— CM of Karnataka (@CMofKarnataka) October 5, 2025
ಅವರ ಅಂತ್ಯಕ್ರಿಯೆ ಇಂದು ಸಂಜೆ ಮದ್ದೂರಿನ ನಿಡಘಟ್ಟದ ಬಳಿ ಇರುವ ಸಂತೆಮೊಗೇನ ಹಳ್ಳಿಯಲ್ಲಿ, ಅವರ ಸ್ವಂತ ಊರಿನಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಡಾ. ಮೊಗಳ್ಳಿ ಗಣೇಶ್ ಅವರ ನಿಧನದಿಂದ ಕನ್ನಡ ಸಾಹಿತ್ಯ ಲೋಕವು ತನ್ನದೇ ಆದ ನಿಜವಾದ ಗ್ರಾಮೀಣ ಧ್ವನಿಯನ್ನು ಕಳೆದುಕೊಂಡಂತಾಗಿದೆ. ಅವರ ಕೃತಿಗಳು ಸದಾ ಓದುಗರ ಮನಸ್ಸಿನಲ್ಲಿ ಜೀವಂತವಾಗಿಯೇ ಉಳಿಯುತ್ತವೆ.









