)
ಸಂದೇಹ ಎನ್ನುವುದು ಜೀವನವನ್ನೇ ಹಾಳು ಮಾಡಿ ಬಿಡುತ್ತದೆ. ಕಾಮಲೆ ಕಣ್ಣಿಗೆ ಲೋಕವೆಲ್ಲಾ ಹಳದಿ ಎನ್ನುವ ಹಾಗೆ ಇಲ್ಲೊಬ್ಬ ವ್ಯಕ್ತಿಗೆ ಎಲ್ಲವನ್ನೂ ಸಂದೇಹದ ಕಣ್ಣುಗಳಿಂದಲೇ ನೋಡಿ ತನ್ನ ಕರುಳ ಕುಡಿಗಳನ್ನೇ ನಿರ್ದಾಕ್ಷಿಣ್ಯವಾಗಿ ಕಡಿದು ಹಾಕಿದ್ದಾನೆ. ರಾತ್ರಿ ಮಲಗಿದ ಮಕ್ಕಳು ಮುಂಜಾನೆ ಕಣ್ಣುಬೀಡುವ ಮುನ್ನವೇ ಸ್ಮಶಾನದ ಬಾಗಿಲು ತೋರಿಸಿದ್ದಾನೆ ಈ ಪಾಪಿ ತಂದೆ.
ಯಾದಗಿರಿ ತಾಲೂಕಿನ ಹತ್ತಿಕುಣಿ ಗ್ರಾಮದ ಹತ್ತಿರದ ದೂಗನೂರ ಕ್ಯಾಂಪಿನಲ್ಲಿ ವಾಸಮಾಡುವ ಶರಣಪ್ಪ ಎಂಬಾತ, ತನ್ನದೇ ಮಕ್ಕಳನ್ನು ಕಡಿದು ಹಾಕಿದ್ದಾನೆ. ಮನೆಯ ಮುಂಭಾಗ ಆಟವಾಡುವ ಮಕ್ಕಳ ಜೀವಕ್ಕೆ ಜವರಾಯನಂತೆ ಎರುಗಿ ಹುಟ್ಟಿಸಿದ ಮಕ್ಕಳನ್ನೇ ಕೊಚ್ಚಿ ಕೊಲೆ ಮಾಡಿದ್ದಾನೆ.
ಕೌಟುಂಬಿಕ ಕಲಹದಿಂದ ತವರು ಮನೆಯಲ್ಲಿದ್ದ ಹೆಂಡತಿ ಮಕ್ಕಳನ್ನು ಚೆನ್ನಾಗಿ ಬಾಳೋಣ ಎಂದು ಕರೆತಂದ ಶರಣಪ್ಪ, ಹೆಂಡತಿಯ ಶೀಲ ಶಂಕಿಸಿ ಮೂರು ಮಕ್ಕಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಇದರಿಂದ ಇಬ್ಬರು ಮಕ್ಕಳಾದ ಭಾರ್ಗವ್ ( 5) ಹಾಗೂ ಸಾನ್ವಿ (3) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮತ್ತೊಬ್ಬ ಮಗ ಹೇಮಂತ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಅನುಮಾನದ ಪಿಶಾಚಿ ತಲೆಹೊಕ್ಕಿಸಿಕೊಂಡಿದ್ದ ಶರಣಪ್ಪ ಮಕ್ಕಳು ನನ್ನದಲ್ಲ. ಈ ಮಕ್ಕಳು ಬೇರೆಯವರಿಗೆ ಹುಟ್ಟಿವೆ ಇವರನ್ನು ಸಾಯಿಸಬೇಕೆಂದು ತಲೆಯಲ್ಲಿ ತುಂಬಿಕೊಂಡಿದ್ದ. ಆದರೆ ತಾಯಿ ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದಳು. ಇದನ್ನು ಗಮನಿಸಿದ ಶರಣಪ್ಪ ಮುಂಜಾನೆ ತಾಯಿ ಬಹಿರ್ದೆಸೆಗೆ ಹೋದ ಸಂದರ್ಭದಲ್ಲಿ ಕೊಡಲಿಯಿಂದ ಹಲ್ಲೆ ಮಾಡಿ ಮಕ್ಕಳನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.
ಇದನ್ನೂ ಓದಿ : ಎಸ್.ಎಲ್.ಭೈರಪ್ಪ ಜೀವನ ʻಪರ್ವʼ ಮುಕ್ತಾಯ
ಹೆಂಡತಿ ಮೇಲಿನ ಸೇಡಿಗೆ ಮಕ್ಕಳ ಮೇಲೆ ಪ್ರತೀಕಾರ :
ಕಣ್ಣ ಮುಂದೆಯ ಆಡಿ ನಲಿಯುವ ಮಕ್ಕಳ ಬಾಳಿಗೆ ತಂದೆಯೇ ಮುಳ್ಳಾಗಿ ಜೀವ ತೆಗೆಯುವ ಮೂಲಕ ವಿಕೃತ ಮೆರೆದಿದ್ದಾನೆ. ತಂದೆಯ ಸಂದೇಹಕ್ಕೆ ಇಲ್ಲಿ ಬಲಿಯಾಗಿದ್ದು ಬದುಕಿ ಬಾಳಬೇಕಾದ ಕಂದಮ್ಮಗಳು. ಅನುಮಾನದ ಪಿಶಾಚಿ ಕುಟುಂಬದ ಸಂತೋಷವನ್ನೇ ಸುಟ್ಟು ಹಾಕಿದೆ. ವಿಷಯ ತಿಳಿಯುತ್ತಿದಂತೆ ಸ್ಥಳಕ್ಕೆ ಯಾದಗಿರಿ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.