)
FKCCI on Trump tariff : ಮುಂದಿನ ಸವಾಲುಗಳನ್ನು ಪರಿಗಣಿಸಿ ಎಫ್ ಕೆಸಿಸಿಐ ಸದಸ್ಯರು ತೆಗೆದುಕೊಳ್ಳಬೇಕಾದ ಕ್ರಮಗಳನ್ನು FKCCI ಅಧ್ಯಕ್ಷ ಎಂ.ಜಿ. ಬಾಲಕೃಷ್ಣ ವಿವರಿಸಿದರು. "ಯುಎಸ್ನಿಂದ ಸುಂಕಗಳ ಹೇರಿಕೆಯು ನಮ್ಮ ರಫ್ತುದಾರರ ಸ್ಪರ್ಧಾತ್ಮಕತೆಗೆ ನಿಜವಾದ ಬೆದರಿಕೆಯನ್ನು ಒಡ್ಡುತ್ತದೆ. ಇದು ದೊಡ್ಡ ಕಂಪನಿಗಳಿಗೆ ಮಾತ್ರವಲ್ಲ, ವಿಶೇಷವಾಗಿ ಸಣ್ಣ ಲಾಭದಲ್ಲಿ ನಡೆಯುವ ಸಣ್ಣ ರಫ್ತುದಾರರಿಗೆ ಸಮಸ್ಯೆಯಾಗಿದೆ." ಎಂದರು.
ಬೆಂಗಳೂರಿನಲ್ಲಿ ನಡೆದ ಎಫ್ ಕೆಸಿಸಿಐ ರಫ್ತು ಶ್ರೇಷ್ಠತೆ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು, 'ಸುಂಕದ ಸವಾಲನ್ನು' ಎದುರಿಸಲು ಸದಸ್ಯರು ಏನು ಮಾಡಬೇಕೆಂದು ಎಫ್ಕೆಸಿಸಿಐ ಪಟ್ಟಿ ಮಾಡಿದ್ದು, ರಫ್ತಿನ ಆವೇಗ ಹಳಿತಪ್ಪದಂತೆ ನೋಡಿಕೊಳ್ಳಲು ಭಾರತ ಸರ್ಕಾರವು ಉತ್ತೇಜಕ ಪ್ಯಾಕೇಜ್ ಅಥವಾ ಪರಿಹಾರ ಕ್ರಮಗಳೊಂದಿಗೆ ಹೆಜ್ಜೆ ಹಾಕುವಂತೆ ಒತ್ತಾಯಿಸಿದೆ.
ರಫ್ತಿನ ಆವೇಗ ಹಳಿತಪ್ಪದಂತೆ ನೋಡಿಕೊಳ್ಳಿ : ಕರ್ನಾಟಕದ ಗುರಿ, ಭಾರತದ ರಫ್ತಿಗೆ ಮತ್ತಷ್ಟು ಕೊಡುಗೆ ನೀಡುವುದಾಗಿದೆ ಎಂದು ಅವರು ಹೇಳಿದರು. ಕರ್ನಾಟಕವು ನಿರಂತರವಾಗಿ ಅಗ್ರ ಮೂರು ರಫ್ತು ರಾಜ್ಯಗಳಲ್ಲಿ ಸ್ಥಾನ ಪಡೆದಿದ್ದು, ಭಾರತದ ಒಟ್ಟು ಸಾಫ್ಟ್ವೇರ್ ರಫ್ತಿನ ಸುಮಾರು ನಾಲ್ಕನೇ ಒಂದು ಭಾಗವನ್ನು ಹೊಂದಿದೆ, ಆದರೆ ಏರೋಸ್ಪೇಸ್, ಯಂತ್ರೋಪಕರಣಗಳು, ಬಯೋಟೆಕ್, ಕಾಫಿ, ರೇಷ್ಮೆ ಮತ್ತು ಎಂಜಿನಿಯರಿಂಗ್ ಸರಕುಗಳಂತಹ ವಲಯಗಳು ಅಭಿವೃದ್ಧಿ ಹೊಂದುತ್ತಲೇ ಇವೆ.
ಕರ್ನಾಟಕವು ಈಗ ನವೀನ ರೀತಿಯಲ್ಲಿ ರಫ್ತು ಮಾರುಕಟ್ಟೆಗಳನ್ನು ಪ್ರವೇಶಿಸುತ್ತಿರುವ ನವೋದ್ಯಮಗಳಿಗೆ ಕೇಂದ್ರವಾಗಿ ಹೊರಹೊಮ್ಮಿದೆ. ನಿಜಕ್ಕೂ, ನಮ್ಮ ರಾಜ್ಯವು ಜಾಗತಿಕ ವ್ಯಾಪಾರದಲ್ಲಿ ಸಂಪ್ರದಾಯ ಮತ್ತು ಆಧುನಿಕತೆ ಎರಡನ್ನೂ ಪ್ರತಿನಿಧಿಸುತ್ತದೆ. ಎಫ್ಕೆಸಿಸಿಐ ತನ್ನ ಸದಸ್ಯರನ್ನು ರಫ್ತು ನೆಲೆಗಳನ್ನು ವೈವಿಧ್ಯಗೊಳಿಸುವಂತೆ ಸಲಹೆ ನೀಡಿದೆ. ಈ ಮೂಲಕ ಅಮೆರಿಕ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಬಹುದು. ಸಿಇ ಪ್ರಮಾಣೀಕರಣ, ಸುಸ್ಥಿರತೆ ಲೇಬಲ್ಗಳು ಮತ್ತು ಗುಣಮಟ್ಟದ ಮಾನದಂಡಗಳನ್ನು ಪಡೆಯುವ ಮೂಲಕ ರಫ್ತು ಸಮುದಾಯವು ಯುರೋಪಿಯನ್ ಒಕ್ಕೂಟದ ಮಾನದಂಡಗಳೊಂದಿಗೆ ಹೊಂದಿಕೊಳ್ಳಬೇಕೆಂದು ಅದು ಸೂಚಿಸಿದೆ.
ನಮ್ಮ ರಫ್ತಿನ ಗಮನವು ವಿಯೆಟ್ನಾಂ, ಇಂಡೋನೇಷ್ಯಾ, ದಕ್ಷಿಣ ಕೊರಿಯಾ ಮುಂತಾದ ಹೆಚ್ಚಿನ ಬೆಳವಣಿಗೆಯ ಆರ್ಥಿಕತೆ ಹೊಂದಿದ ದೇಶಗಳ ಮೇಲೆ ಗಮನ ಹರಿಸಬೇಕು. ಚೀನಾ+1 ತಂತ್ರವನ್ನು ಬಳಸಿಕೊಂಡು ಭಾರತವನ್ನು ಜಾಗತಿಕ ಪೂರೈಕೆ ಸರಪಳಿಗಳಿಗೆ ಸ್ಥಿರ ಪರ್ಯಾಯವಾಗಿ ಇರಿಸುವ ಸಮಯ ಇದು ಎಂದು ವಿವರಿಸಿದರು.
ಐಟಿ-ಬಿಟಿ ವಲಯ ಮತ್ತು ಎಂಜಿನಿಯರಿಂಗ್ ವಲಯದಲ್ಲಿ (ಏರೋಸ್ಪೇಸ್, ನಿಖರತೆ) ಕರ್ನಾಟಕದ ಸಾಮರ್ಥ್ಯಗಳನ್ನು ಬಳಸಿಕೊಳ್ಳುವ ಸಮಯ ಬಂದಿದೆ ಎಂದು ಅಧ್ಯಕ್ಷರು ವಿವರಿಸಿದರು. ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರು ಅಗ್ರ 40 ರಫ್ತು ಕಂಪನಿಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.