ಕನ್ನಡ ಚಲನಚಿತ್ರ ನಟಿ ರನ್ಯಾ ರಾವ್ ಅವರು ಚಿನ್ನದ ಕಳ್ಳಸಾಗಣೆಯ ಪ್ರಕರಣದಲ್ಲಿ ಬಂಧಿಯಾಗಿರುವುದು ಆಕೆಯ ಮಲತಂದೆ, ಹಿರಿಯ ಐಪಿಎಸ್ ಅಧಿಕಾರಿ ರಾಮಚಂದ್ರ ರಾವ್ ಅವರಿಗೂ ವಿಚಾರಣೆಯ ಬಿಸಿ ಮುಟ್ಟಿಸಿದ್ದು, ಅವರ ಹಿಂದಿನ ವಿವಾದಾತ್ಮಕ ಪ್ರಕರಣಗಳು ಈಗ ಮತ್ತೊಮ್ಮೆ ಬೆಳಕಿಗೆ ಬಂದಿವೆ. ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿರುವ ರಾಮಚಂದ್ರ ರಾವ್ ಅವರ ಮಲಮಗಳಾದ ರನ್ಯಾ ರಾವ್ ಅವರನ್ನು ಮಾರ್ಚ್ 3ರಂದು 14.2 ಕೆಜಿ ಚಿನ್ನದ ಅಕ್ರಮ ಸಾಗಣೆ ನಡೆಸಿದ ಆರೋಪದಡಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಬಂಧಿಸಲಾಗಿತ್ತು.
ತನ್ನ ಮೊದಲ ಪತ್ನಿಯ ನಿಧನದ ಬಳಿಕ, ಡಿಜಿಪಿ ರಾಮಚಂದ್ರ ರಾವ್ ಎರಡನೇ ಮದುವೆಯಾಗಿದ್ದರು. ರಾವ್ ಎರಡನೇ ಪತ್ನಿಗೂ ಇದು ಎರಡನೇ ಮದುವೆಯಾಗಿದ್ದು, ಮೊದಲ ಮದುವೆಯಿಂದ ಅವರು ಇಬ್ಬರು ಹೆಣ್ಣು ಮಕ್ಕಳನ್ನು ಹೊಂದಿದ್ದು, ರನ್ಯಾ ಅವರಲ್ಲೊಬ್ಬರಾಗಿದ್ದರು. ರನ್ಯಾ ರಾವ್ ದುಬೈನಿಂದ ಎಮಿರೇಟ್ಸ್ ವಿಮಾನದಲ್ಲಿ ಬೆಂಗಳೂರಿಗೆ ಬಂದಾಗ, ಆಕೆ ವಿದೇಶದಲ್ಲಿ ಯಾವುದೇ ಉದ್ಯಮವನ್ನಾಗಲಿ, ಕುಟುಂಬಸ್ಥರನ್ನಾಗಲಿ ಹೊಂದಿರದಿದ್ದರೂ, ಪದೇ ಪದೇ ವಿದೇಶ ಪ್ರಯಾಣ ನಡೆಸುವ ಕಾರಣಕ್ಕೆ ಆಕೆಯ ಮೇಲೆ ಕಣ್ಣಿಡಲಾಗಿತ್ತು.
ಇದನ್ನೂ ಓದಿ : ಈ ಬಾರಿಯ ಐಪಿಎಲ್ ಬೆಂಗಳೂರಿನಲ್ಲಿ ಜಲಕಂಟಕ : ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಜಲಮಂಡಳಿಯಿಂದ ಸಂಸ್ಕರಿಸಿದ ನೀರು ಮಾತ್ರ ಬಳಕೆ
ಆಕೆ ಕೇವಲ 15 ದಿನಗಳ ಅವಧಿಯಲ್ಲಿ ನಾಲ್ಕು ಬಾರಿ ದುಬೈಗೆ ಪ್ರಯಾಣ ಬೆಳೆಸಿದ್ದಾಗಿ ಅಧಿಕಾರಿಗಳು ತಿಳಿಸಿದ್ದು, ಇದು ಆಕೆಯ ಕುರಿತು ಅನುಮಾನ ಮೂಡಲು ಕಾರಣವಾಗಿತ್ತು. ಆಕೆ ಅಪಾರ ಮಾಣದಲ್ಲಿ ಚಿನ್ನವನ್ನು ಧರಿಸಿದ್ದು ಮಾತ್ರವಲ್ಲದೆ, ಬಹಳಷ್ಟು ಚಿನ್ನದ ಗಟ್ಟಿಗಳನ್ನು ತಾನು ಧರಿಸಿದ್ದ ಬಟ್ಟೆಯೊಳಗೆ ಅಳವಡಿಸಿಕೊಂಡು ಬಂದಿದ್ದನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದರು. ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟಲಿಜೆನ್ಸ್ (ಡಿಆರ್ಐ) ಹೇಳಿಕೆಯ ಪ್ರಕಾರ, ಆಕೆಯ ಬಳಿ 12.56 ಕೋಟಿ ರೂಪಾಯಿ ಮೌಲ್ಯದ 14.2 ಕೆಜಿ ಚಿನ್ನವಿತ್ತು. ಈ ಅಪಾರ ಪ್ರಮಾಣದ ಚಿನ್ನವನ್ನು 1962ರ ಕಸ್ಟಮ್ಸ್ ಕಾಯಿದೆಯಡಿ ವಶಪಡಿಸಿಕೊಳ್ಳಲಾಯಿತು.
ರನ್ಯಾ ಪದೇ ಪದೇ ದುಬೈ ಹಾಗೂ ಇತರ ದೇಶಗಳಿಗೆ ತೆರಳುವುದು ಆಕೆಯ ಬಂಧನಕ್ಕೂ ಮುನ್ನವೇ ಅನುಮಾನಗಳಿಗೆ ಹಾದಿ ಮಾಡಿಕೊಟ್ಟಿತ್ತು. ಡಿಆರ್ಐ ತನಿಖಾಧಿಕಾರಿಗಳು ಈ ಕುರಿತು ವಿಸ್ತೃತ ತನಿಖೆ ನಡೆಸುತ್ತಿದ್ದು, ರನ್ಯಾ ರಾವ್ ತನ್ನ ಮಲತಂದೆಯ ಪ್ರಭಾವವನ್ನು ಬಳಸಿಕೊಂಡು, ವಿಮಾನ ನಿಲ್ದಾಣದಲ್ಲಿ ಭದ್ರತಾ ತನಿಖೆಯನ್ನು ಒಂದು ಅಧಿಕಾರಿಗಳಿಗೆ ಸಂಬಂಧಿಸಿದ ಶಿಷ್ಟಾಚಾರವನ್ನು ಬಳಸಿ ತಪ್ಪಿಸಿಕೊಳ್ಳುತ್ತಿದ್ದರು ಎಂದಿದ್ದಾರೆ. ಈ ಶಿಷ್ಟಾಚಾರ ತ್ವರಿತವಾದ ಭದ್ರತಾ ಅನುಮತಿಯನ್ನು ಒಳಗೊಂಡಿದ್ದಿರಬಹುದು ಎಂದು ಅಧಿಕಾರಿಗಳು ಭಾವಿಸಿದ್ದಾರೆ. ರನ್ಯಾ ರಾವ್ ಜೊತೆಗೆ, ಆಕೆಯ ಆತ್ಮೀಯನಾದ ಟಿ ರಾಜ್ ಎಂಬಾತ, ಮತ್ತು ಆಕೆಯ ಜೊತೆಗೆ ದುಬೈಗೆ ತೆರಳಿದ್ದ ಸ್ನೇಹಿತ ತರುಣ್ ಕೊಂಡರಾಜು ಎಂಬವರನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಪಡಿಸಿಕೊಳ್ಳಲಾಗಿದೆ.
ನಟಿ ರನ್ಯಾ ರಾವ್ ಅವರನ್ನು ಮಾರ್ಚ್ 10ರಂದು ಮಾರ್ಚ್ 24ರ ತನಕ ನ್ಯಾಯಾಂಗ ಬಂಧನಕ್ಕೆ ಒದಗಿಸಲಾಗಿದ್ದು, ಆಕೆಯ ಜಾಮೀನು ವಿಚಾರಣೆ ಮಂಗಳವಾರ ನಡೆಯಲಿದೆ.
ಇದನ್ನೂ ಓದಿ : ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ತಲಾ 50 ಕೋಟಿ ವಿಶೇಷ ಅನುದಾನ: ಸಿಎಂ ಸಿದ್ದರಾಮಯ್ಯ
ಡಿಜಿಪಿ ರಾಮಚಂದ್ರ ರಾವ್ ಈ ಪ್ರಕರಣದಲ್ಲಿ ತನ್ನ ಯಾವುದೇ ಪಾತ್ರವಿಲ್ಲ ಎಂದಿದ್ದು, ತನ್ನ ಮಲಮಗಳ ಬಂಧನದ ವಿಚಾರ ತಿಳಿದು ಆಘಾತವಾಯಿತು ಎಂದಿದ್ದಾರೆ. ಮಾರ್ಚ್ 5ರಂದು ಹೇಳಿಕೆ ಬಿಡುಗಡೆಗೊಳಿಸಿದ ರಾಮಚಂದ್ರ ರಾವ್, ತಾನು ಯಾವುದೇ ತಪ್ಪು ಕಾರ್ಯಗಳಲ್ಲಿ ಭಾಗಿಯಾಗಿಲ್ಲ ಎಂದಿದ್ದಾರೆ. ನಾಲ್ಕು ತಿಂಗಳ ಹಿಂದೆ ರನ್ಯಾ ರಾವ್ ವಿವಾಹವಾದ ಬಳಿಕ ತಾನು ಆಕೆಯೊಡನೆ ಸಂಪರ್ಕದಲ್ಲಿಲ್ಲ ಎಂದಿರುವ ರಾವ್, ರನ್ಯಾ ಮತ್ತು ಆಕೆಯ ಪತಿ ಜತಿನ್ ಹುಕ್ಕೇರಿಯವರ ವ್ಯವಹಾರದ ಕುರಿತು ತನಗೆ ಮಾಹಿತಿ ಇಲ್ಲ ಎಂದಿದ್ದಾರೆ.
2014ರ ಹವಾಲಾ ಹಗರಣ ಮತ್ತು ರಾವ್ ವರ್ಗಾವಣೆ:
ಡಿಜಿಪಿ ರಾವ್ ತಾನು ಈ ಪ್ರಕರಣದಲ್ಲಿ ನಿರಪರಾಧಿ ಎಂದು ಹೇಳುತ್ತಾ ಬಂದಿದ್ದರೂ, ಅವರ ವೃತ್ತಿಜೀವನದಲ್ಲಿ ಹಿಂದಿನ ಘಟನೆಗಳು ಅವರ ನಡತೆಯ ಕುರಿತು ಹಲವಾರು ಅನುಮಾನಗಳನ್ನು ಮೂಡಿಸಲು ಕಾರಣವಾಗಿದೆ. 2014ರಲ್ಲಿ ಮೈಸೂರಿನಲ್ಲಿ ದಕ್ಷಿಣ ವಿಭಾಗದ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ) ಆಗಿದ್ದ ಸಂದರ್ಭದಲ್ಲಿ, ರಾಮಚಂದ್ರ ರಾವ್ ಅವರ ವೃತ್ತಿಜೀವನ ವಿವಾದಾತ್ಮಕ ತಿರುವು ಪಡೆಯಿತು. ಪೊಲೀಸರು ಒಂದು ಬಸ್ಸನ್ನು ತಡೆದು, ಅದರಲ್ಲಿದ್ದ 20 ಲಕ್ಷ ರೂಪಾಯಿ ಅಕ್ರಮ ಹಣವನ್ನು ವಶಪಡಿಸಿಕೊಂಡಾಗ ರಾವ್ ಹೆಸರು ಒಂದು ದೊಡ್ಡ ಹವಾಲಾ ಹಗರಣದಲ್ಲಿ ಕೇಳಿಬಂತು. ಬಳಿಕ, ಕೇರಳದ ಓರ್ವ ಉದ್ಯಮಿ ವಾಸ್ತವವಾಗಿ ವಶಪಡಿಸಿಕೊಂಡಿದ್ದ ಮೊತ್ತ 2.07 ಕೋಟಿ ರೂಪಾಯಿ ಎಂದು ಹೇಳಿಕೆ ನೀಡಿದ್ದರು.
ಈ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಯಿತು. ಬಳಿಕ ನಡೆದ ವಿಚಾರಣೆಯಲ್ಲಿ, ಪೊಲೀಸ್ ಮಾಹಿತಿದಾರರು ಮತ್ತು ರಾಮಚಂದ್ರ ರಾವ್ ಅವರ ವೈಯಕ್ತಿಕ ಗನ್ ಮ್ಯಾನ್ ಬಂಧನಕ್ಕೊಳಗಾದರು. ಸಿಐಡಿ ವರದಿಯನ್ನು ಕ್ಷಿಪ್ರವಾಗಿ ಪೊಲೀಸ್ ಮಹಾ ನಿರ್ದೇಶಕರು ಮತ್ತು ಐಜಿ ಅವರಿಗೆ ಒದಗಿಸಲಾಯಿತು. ಇದರ ಪರಿಣಾಮವಾಗಿ, ರಾಜ್ಯ ಪೊಲೀಸ್ ಮುಖ್ಯಸ್ಥರಾಗಿದ್ದ ಓಂ ಪ್ರಕಾಶ್ ಕ್ರಮ ತೆಗೆದುಕೊಳ್ಳಬೇಕಾಯಿತು. ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾರ್ವಜನಿಕವಾಗಿ ಟೀಕಿಸಿದರೂ, ರಾಮಚಂದ್ರ ರಾವ್ ಈ ಪ್ರಕರಣದಲ್ಲಿ ಯಾವುದೇ ಗಂಭೀರ ಸಮಸ್ಯೆಗೆ ಸಿಲುಕದೆ ಬಚಾವಾಗಿದ್ದರು. ಅನಾಮಧೇಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಓಂ ಪ್ರಕಾಶ್ ಕೇವಲ ಶಿಸ್ತು ಕ್ರಮವನ್ನು ಮಾತ್ರವೇ ತೆಗೆದುಕೊಳ್ಳುವಂತೆ ಸೂಚಿಸಿದ್ದರು. ಅದರ ಪರಿಣಾಮವಾಗಿ, ರಾಮಚಂದ್ರ ರಾವ್ ಅವರನ್ನು ದಕ್ಷಿಣ ವಿಭಾಗದ ಐಜಿಪಿ ಹುದ್ದೆಯಿಂದ ತೆಗೆದು, ಮುಖ್ಯ ಕಚೇರಿಗೆ ಮರಳಿ ವರ್ಗಾವಣೆಗೊಳಿಸಲಾಯಿತು.
ಇದನ್ನೂ ಓದಿ : ಗೋಲ್ಡ್ ಸ್ಮಗ್ಲಿಂಗ್ ಕೇಸ್ನಲ್ಲಿ ರನ್ಯಾ ರಾವ್ ಜೈಲು ಪಾಲು
2017ರ ಎನ್ಕೌಂಟರ್: ಆರೋಪಗಳು ಮತ್ತು ನಿರಾಕರಣೆ
ನವೆಂಬರ್ 2018ರಲ್ಲಿ, ಉತ್ತರ ವಲಯದ ಐಜಿಪಿ ಆಗಿದ್ದ ರಾಮಚಂದ್ರ ರಾವ್ ಹಾಗೂ ವಿಜಯಪುರ ಎಸ್ಪಿ ಆಗಿದ್ದ ಕುಲ್ದೀಪ್ ಜೈನ್ ಅವರು ಅಕ್ಟೋಬರ್ 2017ರ ಎನ್ಕೌಂಟರ್ ಕುರಿತು ವಿಚಾರಣೆ ಎದುರಿಸಬೇಕಾಯಿತು. ಈ ಪ್ರಕರಣ, ರೌಡಿಗಳಾದ ಧರ್ಮರಾಜ್ ಮತ್ತು ಗಂಗಾಧರ ಚಡಚಣ ಅವರ ಸಾವಿನತ್ತ ಕೇಂದ್ರಿತವಾಗಿದ್ದು, ವಿಜಯಪುರ ಜಿಲ್ಲೆಯ, ಇಂಡಿ ತಾಲೂಕಿನಲ್ಲಿ ನಡೆದ ಅವರ ಎನ್ಕೌಂಟರ್ ನಕಲಿ ಎಂದು ಅನುಮಾನ ಹೊಂದಿತ್ತು.
ರಾಮಚಂದ್ರ ರಾವ್ ಈ ಕಾರ್ಯಾಚರಣೆಯ ಕುರಿತು ತನಗೆ ಪೂರ್ವ ಮಾಹಿತಿ ಇರಲಿಲ್ಲ ಎಂದಿದ್ದರು. ಆದರೆ, ರಾಮಚಂದ್ರ ರಾವ್ ಅವರಿಗೆ ಈ ಸಂಭಾವ್ಯ ಎನ್ಕೌಂಟರ್ ಕುರಿತು ಮೊದಲೇ ಮಾಹಿತಿ ಇದ್ದು, ಅದಕ್ಕಾಗಿಯೇ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗೋಪಾಲ್ ಹಲ್ಲೂರ್ ಅವರನ್ನು ಹಲವು ತಿಂಗಳ ಮೊದಲೇ ಚಡಚಣ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದರು ಎನ್ನಲಾಗಿತ್ತು. ಆದರೆ ರಾಮಚಂದ್ರ ರಾವ್ ಈ ವರ್ಗಾವಣೆ ಕೇವಲ ಇಲಾಖೆಯ ಪ್ರಕ್ರಿಯೆಯಾಗಿದ್ದು, ತನಗೆ ಎನ್ಕೌಂಟರ್ ಕುರಿತು ಯಾವುದೇ ಅರಿವಿರಲಿಲ್ಲ ಎಂದಿದ್ದರು. ತನಗೆ ಎನ್ಕೌಂಟರ್ ನಡೆದ ಬಳಿಕವೇ ರೌಡಿಗಳ ಸಾವಿನ ಕುರಿತು ಮಾಹಿತಿ ಲಭ್ಯವಾಗಿದ್ದು, ಅವರ ಕುಟುಂಬಸ್ಥರ ದೂರಿನ ಅನ್ವಯ, ತಾನು ತಕ್ಷಣವೇ ಅದರ ಕೂಲಂಕಷ ತನಿಖೆ ನಡೆಸುವಂತೆ ಆದೇಶಿಸಿದ್ದೆ ಎಂದಿದ್ದರು.
ಪೊಲೀಸ್ ಸೂಪರಿಂಟೆಂಡೆಂಟ್ ಕುಲ್ದೀಪ್ ಜೈನ್ ಅವರೂ ಸಹ ಈ ಪ್ರಕರಣದಲ್ಲಿ ತನ್ನ ಪಾತ್ರವನ್ನು ತಳ್ಳಿಹಾಕಿದ್ದು, ತಾನು ಸಿಐಡಿ ತನಿಖೆ ನಡೆಸಬೇಕೆಂದು ಶಿಫಾರಸು ಮಾಡಿದ್ದಕ್ಕೆ ಸ್ಥಳೀಯ ಪೊಲೀಸರು ತನ್ನನ್ನು ಹಾದಿ ತಪ್ಪಿಸಿದ್ದರು ಎಂದಿದ್ದರು. 2017ರಲ್ಲಿ ಒಂದು ಪೊಲೀಸ್ ದಾಳಿಯ ಸಂದರ್ಭದಲ್ಲಿ ಈ ಎನ್ಕೌಂಟರ್ ನಡೆದಿತ್ತು. ಧರ್ಮರಾಜ್ ಚಡಚಣ ಈ ದಾಳಿಯಲ್ಲಿ ಸಾವಿಗೀಡಾದರೆ, ಆತನ ಸಹೋದರನ ದೇಹ ಭೀಮಾ ನದಿಯ ಹಿನ್ನೀರಿನಲ್ಲಿ ದೊರಕಿತ್ತು. ಸಿಐಡಿ ತನಿಖೆ ಈ ಕಾರ್ಯಾಚರಣೆಯನ್ನು ಸ್ಥಳೀಯ ಕಾಂಗ್ರೆಸ್ ಮುಖಂಡ ಮಹದೇವ ಭೈರಗೊಂಡ ಆಯೋಜಿಸಿದ್ದರು ಎಂದು ಕಂಡುಹಿಡಿದಿತ್ತು.
ಸಿಐಡಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಎಸ್ಐ ಹಲ್ಲೂರ್, ಇನ್ಸ್ಪೆಕ್ಟರ್ ಎಂಬಿ ಅಸೋಡೆ, ಮೂವರು ಪೊಲೀಸ್ ಪೇದೆಗಳು, ಭೈರಗೊಂಡ ಮತ್ತು ಇತರ ಆರೋಪಿಗಳನ್ನು ಬಂಧಿಸಿತ್ತು. ಆರೋಪ ಪಟ್ಟಿ ಸಲ್ಲಿಕೆಯಾಗಿ, ಕಾನೂನಿನ ವ್ಯಾಪ್ತಿ ಮೀರಿ ಅವರ ಹತ್ಯೆ ನಡೆದಿದೆ ಎಂಬ ಅನುಮಾನಕ್ಕೆ ಇನ್ನಷ್ಟು ಪುಷ್ಟಿ ನೀಡಿತ್ತು. ರಾಮಚಂದ್ರ ರಾವ್ ತಾನು ಕೇವಲ ಅಧಿಕೃತ ಕರ್ತವ್ಯಕ್ಕೆ ಮಾತ್ರವೇ ಸೀಮಿತವಾಗಿದ್ದೆ ಎಂದರೂ, ಎನ್ಕೌಂಟರ್ಗೆ ಮುನ್ನ ಎಸ್ಐ ಹಲ್ಲೂರ್ ವರ್ಗಾವಣೆ ನಡೆಸಿದ್ದು ಅನುಮಾನದ ನಡೆಯಾಗಿತ್ತು.
ರನ್ಯಾ ರಾವ್ ಅವರ ಅಕ್ರಮ ಚಿನ್ನ ಸಾಗಣೆಯ ಕುರಿತು ತನಿಖೆ ಮುಂದುವರಿದಿದ್ದು, ಡಿಜಿಪಿ ರಾಮಚಂದ್ರ ರಾವ್ ಅವರು ತನ್ನ ಮಲಮಗಳಿಗೆ ಶಿಷ್ಟಾಚಾರದ ವಿನಾಯಿತಿ ನೀಡಲು ನೆರವಾಗಿದ್ದರೇ ಎಂಬ ಕುರಿತು ಪ್ರಶ್ನೆಗಳು ಮೂಡಿವೆ. ಈ ಅನುಮಾನಗಳನ್ನು ಪರಿಹರಿಸುವ ನಿಟ್ಟಿನಲ್ಲಿ, ಕರ್ನಾಟಕ ಸರ್ಕಾರ ನಿನ್ನೆ ಒಂದು ಸೂಚನೆಯನ್ನು ನೀಡಿ, ರಾಮಚಂದ್ರ ರಾವ್ ಪಾತ್ರದ ಕುರಿತು ತನಿಖೆ ನಡೆಸುವಂತೆ ಆದೇಶಿಸಿದೆ. ಈ ಪ್ರಕರಣದಲ್ಲಿ, ಶಿಷ್ಟಾಚಾರ ಸೌಲಭ್ಯಗಳನ್ನು ಉಲ್ಲಂಘಿಸಲಾಗಿದೆಯೇ ಎಂಬ ಕುರಿತು ತನಿಖೆ ನಡೆಸಲು ಕರ್ನಾಟಕ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಹಿರಿಯ ಐಎಎಸ್ ಅಧಿಕಾರಿ ಗೌರವ್ ಗುಪ್ತಾ ಅವರನ್ನು ನೇಮಿಸಲಾಗಿದ್ದು, ಒಂದು ವಾರದಲ್ಲಿ ವರದಿ ಸಲ್ಲಿಸುವಂತೆ ಅವರಿಗೆ ಸೂಚನೆ ನೀಡಲಾಗಿದೆ.
ಇನ್ನೊಂದು ಪ್ರತ್ಯೇಕ ಆದೇಶದಲ್ಲಿ, ರಾಜ್ಯ ಸರ್ಕಾರ ಕ್ರಿಮಿನಲ್ ಇನ್ವೆಸ್ಟಿಗೇಶನ್ ಡಿಪಾರ್ಟ್ಮೆಂಟ್ಗೆ (ಸಿಐಡಿ) ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯವೇನಾದರೂ ಕಂಡುಬಂದಿದೆಯೇ ಎಂದು ವಿಚಾರಣೆ ನಡೆಸಿ, ಈ ಕುರಿತು ವರದಿ ಸಲ್ಲಿಸುವಂತೆ ಆದೇಶ ನೀಡಿದೆ.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಜೀ ಕನ್ನಡ ನ್ಯೂಸ್ ಈಗ: Zee5ನಲ್ಲೂ ಜೀ ಕನ್ನಡ ನ್ಯೂಸ್ ಲಭ್ಯ
Sun Direct-292
TATA PLAY- 1664
JIO TV-1334
NXT Digital-30
IN-CABLE-30
U-Digital-162
GTPL-17
Rockline Telecommunications ಬೆಂಗಳೂರು-42
V4 Digital Infotech ಮಂಗಳೂರು-628
Malanad infotech Pvt Ltd-56
Metrocast ಬೆಂಗಳೂರು, ಬೆಳಗಾವಿ-830 ಲಭ್ಯ









