ಕುಮಾರಸ್ವಾಮಿ ಅವರಿಂದ ಸೋಂಕು ನಿವಾರಕ ಟನಲ್‌ಗಳ ಸ್ಥಾಪನೆ

ರಾಮನಗರ ಜಿಲ್ಲೆಯಲ್ಲಿ ಈಗಾಗಲೇ ನಾಲ್ಕು ಟನಲ್‌ಗಳನ್ನು ಸ್ಥಾಪಿಸಲಾಗಿದ್ದು ಇಂದು ಚನ್ನಪಟ್ಟಣ ಮತ್ತು ರಾಮನಗರದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಣಾ ಟನಲ್‌ಗಳನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ  ಉದ್ಘಾಟಿಸಿದರು‌. 

Written by - Yashaswini V | Last Updated : Apr 6, 2020, 01:40 PM IST
ಕುಮಾರಸ್ವಾಮಿ ಅವರಿಂದ ಸೋಂಕು ನಿವಾರಕ ಟನಲ್‌ಗಳ ಸ್ಥಾಪನೆ title=

ಬೆಂಗಳೂರು: ಕೊರೊನಾ ವೈರಸ್‌ ಹರಡುವುದನ್ನು ತಡೆಯುವ ಸಲುವಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಅವರು ವಿಧಾನಸಭೆಗೆ ಪ್ರತಿನಿಧಿಸಿರುವ ಚನ್ನಪಟ್ಟಣ ಮತ್ತು ಅವರ ಪತ್ನಿ ಅನಿತಾ ಕುಮಾರಸ್ವಾಮಿ ಪ್ರತಿನಿಧಿಸಿರುವ ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಣಾ ಟನಲ್‌ಗಳನ್ನು ಸ್ಥಾಪಿಸಿದ್ದಾರೆ.

ರಾಮನಗರ ಜಿಲ್ಲೆಯಲ್ಲಿ ಈಗಾಗಲೇ ನಾಲ್ಕು ಟನಲ್‌ಗಳನ್ನು ಸ್ಥಾಪಿಸಲಾಗಿದ್ದು ಇಂದು ಚನ್ನಪಟ್ಟಣ ಮತ್ತು ರಾಮನಗರದಲ್ಲಿ ಸೋಂಕು ನಿವಾರಕ ದ್ರಾವಣ ಸಿಂಪಡಣಾ ಟನಲ್‌ಗಳನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ  ಉದ್ಘಾಟಿಸಿದರು‌. ರಾಮನಗರ ಎಪಿಎಂಸಿ ಮಾರುಕಟ್ಟೆ,  ರೇಷ್ಮೆ ಮಾರುಕಟ್ಟೆ, ಚನ್ನಪಟ್ಟಣದ ಎಪಿಎಂಸಿ ಮಾರುಕಟ್ಟೆ ಮತ್ತು ರೇಷ್ಮೆ ಮಾರುಕಟ್ಟೆಯ ಬಳಿ ಒಂದೊಂದು ಟನಲ್‌ಗಳನ್ನು ಸ್ಥಾಪಿಸಲಾಗಿದ್ದು ಅವುಗಳನ್ನು ಈಗ  ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುತ್ತದೆ. 

ರಾಮನಗರದಲ್ಲಿ ಟನಲ್ ಗಳನ್ನು ಉದ್ಘಾಟಿಸಿ ಮಾತನಾಡಿದ ಕುಮಾರಸ್ವಾಮಿ, ಸಾರ್ವಜನಿಕ ಹೆಚ್ಚು ಓಡಾಡುವ ಸ್ಥಳದಲ್ಲಿ ತಮಿಳುನಾಡಿನ ಜಿಲ್ಲಾಧಿಕಾರಿಯೊಬ್ಬರು ಟನಲ್ ಮಾಡುವ ಮೂಲಕ‌ ರೋಗವನ್ನ ತಾತ್ಕಾಲಿಕವಾಗಿ ತಡಿಯುವುದಕ್ಕೆ ಶುರು ಮಾಡಿದ್ದರು. ಇದು ನಮ್ಮಲ್ಲೂ ಪ್ರಾರಂಭವಾಗಿದೆ. ಸರ್ಕಾರದಿಂದ ಮಾಡಿಸಲು ತುಂಬಾ ಸಮಯ ತಗೆದುಕೊಳ್ಳುತ್ತದೆ. ಈ ದೃಷ್ಟಿಯಿಂದ ಚನ್ನಪಟ್ಟಣ, ರಾಮನಗರ‌ ಕ್ಷೇತ್ರಗಳ ಐದು ಸ್ಥಳದಲ್ಲಿ ಟನಲ್ ಗಳನ್ನು ತಾವೇ ಆರಂಭಿಸುತ್ತಿರುವುದಾಗಿ ತಿಳಿಸಿದರು. 

ಈ ಸೋಂಕು ನಿವಾರಕ ದ್ರಾವಣ ಸಿಂಪಡಣಾ ಟನಲ್‌ಗಳಲ್ಲಿ ಹಳ್ಳಿಯಿಂದ ಬರುವ ರೈತರಿಗೆ ಸೋಂಕು ತಡೆಯುವ ಸಣ್ಣ ಕಾರ್ಯವನ್ನು ಪ್ರಾರಂಭ ಮಾಡುದ್ದೇವೆ. ಎಲ್ಲಾ ಕಡೆ ಈ ರೀತಿ ಟನಲ್ ಗಳನ್ನ ಸ್ಥಾಪನೆ ಮಾಡಬೇಕು.‌ ಇದು ಸರ್ಕಾರವನ್ನು ಟೀಕೆ‌ ಮಾಡುವ ಸಮಯ ಅಲ್ಲ. ಸರ್ಕಾರ ಸರಿಯಾದ ರೀತಿ ಕೆಲಸ ಮಾಡಬೇಕು ಎಂದು ಸಲಹೆ ಕೊಡುತ್ತೇನೆ. ಅರೊಗ್ಯ ಸೇವೆ ಮಾಡುತ್ತಿರುವವರಿಗೆ ಅಗತ್ಯ ವಸ್ತುಗಳನ್ನು ಕೊಡಲು ಹೇಳುತ್ತೇನೆ. ಪಿಪಿಇ ಸೆಟ್ ಹಾಗೂ ಕಿಟ್ ಗಳನ್ನು ತಕ್ಷಣ ತರುವ ವ್ಯವಸ್ಥೆಯಾಗಬೇಕು ಎಂದು ಅವರು ಹೇಳಿದರು.

ಒಂದು ಟನಲ್‌ ಸ್ಥಾಪಿಸಲು ಒಂದು ಲಕ್ಷ ರೂಪಾಯಿ ವೆಚ್ಚ ತಗಲುತ್ತದೆ. ಸದ್ಯ ಪ್ರಾಯೋಗಿಕವಾಗಿ ಈಗ ರಾಮನಗರ ಜಿಲ್ಲೆಯಲ್ಲಿ ನಾಲ್ಕು ಟನಲ್‌ಗಳನ್ನು ಸ್ಥಾಪಿಸಲಾಗುತ್ತಿದೆ. ಮುಂದೆ ಅಗತ್ಯಕ್ಕೆ ಅನುಗುಣವಾಗಿ ರಾಜ್ಯದ ಇತರ ಭಾಗಗಳಲ್ಲೂ ಟನಲ್‌ಗಳನ್ನು ಅನುಸ್ಥಾಪಿಸಲು ಕುಮಾರಸ್ವಾಮಿ ದೊಡ್ಡ ಮಟ್ಟದ ಯೋಜನೆ ಹಾಕಿಕೊಂಡಿರುವುದಾಗಿ ಅವರು ತಿಳಿಸಿದರು.

ಕೊರೊನಾ ವೈರಸ್‌  (Coronavirus) ತಡೆಯಲು ದೇಶದಲ್ಲಿ ಜಾರಿಗೆ ತರಲಾಗಿರುವ ಲಾಕ್‌ಡೌನ್ (Lockdown) ನಿಂದಾಗಿ ಆಹಾರದ ಸಮಸ್ಯೆಗೆ ಸಿಲುಕಿರುವವರಿಗಾಗಿ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಅವರು ಈಗಾಗಲೇ ‘ಎಚ್‌ಡಿಕೆ ಜನತಾ ದಾಸೋಹ’ ಎಂಬ ಕಾರ್ಯಕ್ರಮವನ್ನೂ ಜಾರಿಗೆ ತಂದಿದ್ದು, ಈ ಕಾರ್ಯಕ್ರಮವನ್ನು ಕ್ಷೇತ್ರದ ಹಂತದಲ್ಲಿ ಶಾಸಕರು, ನಾಯಕರು, ಮುಖಂಡರು ಪಾಲಿಸುತ್ತಿದ್ದಾರೆ. ಹಸಿದವರಿಗೆ ಈ ಕಾರ್ಯಕ್ರಮದ ಮೂಲಕ ಆಹಾರದ ವ್ಯವಸ್ಥೆ ಮಾಡಲಾಗುತ್ತಿದೆ.

Trending News