ಬೆಂಗಳೂರು: ಮಾತೆತ್ತಿದರೆ ಗೋ ಹತ್ಯೆ ನಿಷೇಧ ಮಾಡುತ್ತೇವೆ ಎಂದು ಬೊಬ್ಬಿಡುವ ಆರ್ ಎಸ್ ಎಸ್ ನಾಯಕರು ಗೊಡ್ಡಾದ ಹಸುಗಳನ್ನು ಮತ್ತು ಮುದಿಯಾದ ಹಸುಗಳನ್ನು ತಮ್ಮ ಮನೆಗೆ ಕರೆದುಕೊಂಡು ಹೋಗುತ್ತಾರಾ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಪ್ರಶ್ನಿಸಿದ್ದಾರೆ.


COMMERCIAL BREAK
SCROLL TO CONTINUE READING

ವಿಧಾನಸೌಧದಲ್ಲಿ‌ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಹಸುಗಳು ಮುದಿಯಾಗುತ್ತವೆ ಅಥವಾ ಗೊಡ್ಡಾಗುತ್ತವೆ. ಆಗ ಅವುಗಳನ್ನು ಏನು‌ ಮಾಡಬೇಕು? ಆರ್‌ಎಸ್‌ಎಸ್ (RSS) ನಾಯಕರು ಮನೆಗೆ ಕರೆದುಕೊಂಡು ಹೋಗುತ್ತಾರಾ? "ಅವರು ಹಾಲು, ಬೆಣ್ಣೆ, ತುಪ್ಪ ತಿನ್ನುವವರು, ರೈತರು ಸೆಗಣಿ ಎತ್ಕೊಂಡೇ ಇರಬೇಕಾ? ಎಂದು ಖಡಕ್ ಆಗಿ ಪ್ರಶ್ನಿಸಿದರು.


ನಾನು ಸಗಣಿ ಎತ್ತಿದ್ದೇನೆ, ಗಂಜಲ ಬಾಚಿದ್ದೇನೆ. ಇವರು ಯಾವತ್ತಾದ್ರೂ ಸಗಣಿ ಎತ್ತಿದ್ದಾರಾ? ಗೋವನ್ನು ಪೂಜೆ ಮಾಡುತ್ತೇವೆ ಎನ್ನುತ್ತಾರೆ. ಆದರೆ ಇವರು ಹಸುಗಳಿಗೆ (Cow) ಹುಲ್ಲು ಹಾಕಿದ್ದಾರಾ? ಎಂದು ಕೂಡ ಪ್ರಶ್ನಿಸಿದರು.


ಲವ್ ಜಿಹಾದ್ ಬಗ್ಗೆಯೂ ಕಿಡಿಕಾರಿದ ಸಿದ್ದರಾಮಯ್ಯ, ಮದುವೆ ಮಾಡಿಕೊಳ್ಳೋದು ಅವರವರ ವೈಯುಕ್ತಿಕ ವಿಚಾರ. ಇಂತಹವರನ್ನೇ ಮಾಡಿಕೊಳ್ಳಬೇಕು ಅಂತಾ ಬೇರೆಯವರು ಹೇಳುವುದು ಸರಿಯಲ್ಲ. ಅಲಹಾಬಾದ್ ಹೈಕೋರ್ಟ್ ಕೂಡ ಇದೇ ಮಾತನ್ನು ಹೇಳಿದೆ. ಕರ್ನಾಟಕ ಹೈಕೋರ್ಟ್ (Karnataka Highcourt) ಕೂಡ ಮದುವೆ ಹಕ್ಕು ಅವರವರ ವೈಯುಕ್ತಿಕ ನಿರ್ಧಾರವೆಂದು ಸ್ಪಷ್ಟವಾಗಿ ತಿಳಿಸಿದೆ. ಆದರೆ ಆರ್‌ಎಸ್ ಎಸ್ ಮತ್ತು ಬಿಜೆಪಿಯವರು ರಾಜಕೀಯ ಕಾರಣಗಳಿಗಾಗಿ ಇದನ್ನು ತರುತ್ತಿದ್ದಾರೆ. ಇದಕ್ಕೆ ನಮ್ಮ ವಿರೋಧವಿದೆ ಎಂದರು.


ಜನ ಕಷ್ಟದಲ್ಲಿರುವಾಗ ಈ ನಿಗಮ-ಪ್ರಾಧಿಕಾರಗಳಿಗೆ ಹಣ ಎಲ್ಲಿಂದ ತರುತ್ತೀರಿ?: ಸಿದ್ದರಾಮಯ್ಯ


ಕುರುಬ ಸಮುದಾಯದ ಒಗ್ಗಟ್ಟನ್ನು ಹೊಡೆಯಲು ಆರ್‌ಎಸ್‌ಎಸ್ STಗೆ ಸೇರಿಸುವ ವರಸೆ ಶುರುಮಾಡಿದೆ. ಆದರೆ ಈಶ್ವರಪ್ಪಗೆ ಇದು ಅರ್ಥ ಆಗೊಲ್ಲ. ಈಶ್ವರಪ್ಪಗೆ ಇದ್ದಕ್ಕಿದ್ದಂತೆ ಕುರುಬರ ಬಗ್ಗೆ ಕಾಳಜಿ ಬಂದಿದೆ. ಈಗ ಸ್ವಾಮೀಜಿ ಕರೆದು ಪಾದಯಾತ್ರೆ ಮಾಡುತ್ತಿದ್ದೀಯಲ್ಲಾ ಈಶ್ವರಪ್ಪ, ಹಿಂದೆ ಮಠ ಸ್ಥಾಪನೆಯಾದಗ ಎಲ್ಲಿಗೆ ಹೋಗಿದ್ದಪ್ಪಾ‌? ಕನಕ ಗೋಪುರ ಕೆಡವಿದಾಗ ಎಲ್ಲಿಗೆ ಹೋಗಿದ್ದಪ್ಪಾ? ಈವರೆಗೆ ಮಂಡಲ್ ಕಮೀಷನ್ ಬಗ್ಗೆ ಏನಾದ್ರೂ‌ ಮಾತನಾಡಿದಿಯಾ? ಬಿಜೆಪಿಯಿಂದ ರಾಜ್ಯಸಭಾ ಸದಸ್ಯರಾಗಿದ್ದ ರಾಮಾಜೋಯಿಸ್ ಸುಪ್ರೀಂ ಕೋರ್ಟಿನಲ್ಲಿ ಮಂಡಲ್ ಆಯೋಗದ ಶಿಫಾರಸನ್ನು ಚಾಲೆಂಜ್ ಮಾಡಿದ್ದರು.‌ ಆಗ ಎಲ್ಲಿಗೆ ಹೋಗಿದ್ದಪ್ಪಾ? ಆಗಲೂ ಕೆ.ಎಸ್. ಈಶ್ವರಪ್ಪ (KS Eshwarappa) ಬಿಜೆಪಿಯಲ್ಲೇ ಇರಲಿಲ್ವಾ? ರಾಮಜೋಯಿಸ್ ಬಿಜೆಪಿಯವರಲ್ವಾ? ರಾಮಾಜೋಯಿಸ್ ಅವರ ವಿರುದ್ಧ ಯಾಕೆ ಮಾತನಾಡಲಿಲ್ಲ? ಹಿಂದುಳಿದವರ ವಿರುದ್ಧ ರಾಮಾ ಜೋಯಿಸ್ ಚಾಲೆಂಜ್ ಮಾಡಿದ್ದರೂ ಸುಮ್ಮನಿದ್ದದ್ದು ಏಕೆ? ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಎಸೆದರು.


ರೈತರ ಆದಾಯ ದುಪ್ಪಟ್ಟುಗೊಳಿಸ್ತೀವಿ ಅಂತ ಈಗ ಬೆಂಬಲ ಬೆಲೆಯನ್ನೂ ನೀಡದೆ ಸರ್ಕಾರ ಕೈತೊಳೆದುಕೊಂಡಿದೆ-ಸಿದ್ಧರಾಮಯ್ಯ


ಈಶ್ವರಪ್ಪ ಮುಗ್ಧ ಜನರಿಗೆ ಮೋಸ ಮಾಡಲು ಹೊರಟಿದ್ದಾರೆ. ಅವರನ್ನು ಪ್ರಭಾವಿ ನಾಯಕ ಅಂತ ಯಾರು ಹೇಳಿದ್ದು? ಅವರು ಸದನದ ಹೊರಗೆ ಅಥವಾ ಒಳಗೆ ಏನಾದರೂ ಮಾತನಾಡಿದ್ದಾರಾ? ಇದು ಈಶ್ವರಪ್ಪನ ಸ್ವಂತ ಬುದ್ಧಿಯಲ್ಲ. ಆರ್ ಎಸ್ ಎಸ್ ನವರು ಇವರನ್ನು ಬಳಸಿಕೊಳ್ಳುತ್ತಿದ್ದಾರೆ‌. ಕುರುಬ ಸಮುದಾಯದ ಒಗ್ಗಟ್ಟನ್ನು ಛಿದ್ರಗೊಳಿಸುವ ಈ ಕುತಂತ್ರದ ಹಿಂದೆ ಬಿ.ಎಲ್. ಸಂತೋಷ್, ದತ್ತಾತ್ರೇಯ ಹೊಸಬಾಳೆ ಇದಾರೆ ಎಂದು ಹೇಳಿದರು.