ಮುಗಿಯದ ಕರ್ `ನಾಟಕ` : ಸೋಮವಾರಕ್ಕೆ ವಿಧಾನಸಭೆ ಕಲಾಪ ಮುಂದೂಡಿಕೆ
ರಾಜ್ಯಪಾಲರ ಎರಡು ಪತ್ರಗಳಿಗೆ ಕ್ಯಾರೆ ಎನ್ನದೆ ಸಿಎಂ ಕುಮಾರಸ್ವಾಮಿ ಈಗ ಸದನದ ನಡಾವಳಿಯಲ್ಲಿ ರಾಜ್ಯಪಾಲರ ಹಸ್ತಕ್ಷೇಪವನ್ನು ಪ್ರಶ್ನಿಸಿ ಸುಪ್ರೀಂಗೆ ಮೊರೆಹೋಗಿದ್ದಾರೆ.
ಬೆಂಗಳೂರು: ರಾಜ್ಯಪಾಲರ ಎರಡು ಪತ್ರಗಳಿಗೆ ಕ್ಯಾರೆ ಎನ್ನದೆ ಸಿಎಂ ಕುಮಾರಸ್ವಾಮಿ ಈಗ ಸದನದ ನಡಾವಳಿಯಲ್ಲಿ ರಾಜ್ಯಪಾಲರ ಹಸ್ತಕ್ಷೇಪವನ್ನು ಪ್ರಶ್ನಿಸಿ ಸುಪ್ರೀಂಗೆ ಮೊರೆಹೋಗಿದ್ದಾರೆ.
ಇನ್ನೊಂದೆಡೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ವಿಶ್ವಾಸ ಮತಯಾಚನೆಯನ್ನು ಸೋಮವಾರಕ್ಕೆ ಮುಂದೂಡುವಂತೆ ಪಟ್ಟು ಹಿಡಿದ ಬೆನ್ನಲ್ಲೇ ಒತ್ತಾಯಕ್ಕೆ ಮಣಿದ ಸ್ಪೀಕರ್ ಈಗ ಕಲಾಪವನ್ನು ಮುಂದೂಡಿದ್ದಾರೆ. ಆ ಮೂಲಕ ಈಗ ವಿಶ್ವಾಸಮತದ ಬೆಳವಣಿಗೆ ಈಗ ಸೋಮವಾರಕ್ಕೆ ಶಿಫ್ಟ್ ಆಗಿದೆ.
ರಾಜ್ಯಪಾಲರು ಶುಕ್ರವಾರದಂದು ಎರಡು ಡೆಡ್ ಲೈನ್ ಗಳನ್ನು ನೀಡಿ ಸಿಎಂ ಕುಮಾರಸ್ವಾಮಿಗೆ 1.30 ಕ್ಕೆ ವಿಶ್ವಾಸ ಮತಯಾಚನೆ ಕೊರಲು ಆದೇಶಿಸಿದ್ದರು. ಇದಾದ ನಂತರ ಎರಡನೇ ಡೆಡ್ ಲೈನ್ ಆಗಿ ಸಾಯಂಕಾಲ 6 ಗಂಟೆಗೆ ನಿಗದಿಪಡಿಸಿದ್ದರು. ಆದರೆ ಇದಕ್ಕೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಸಿಎಂ ಈಗ ಸದನದ ನಡಾವಳಿಯಲ್ಲಿ ರಾಜ್ಯಪಾಲರು ಹಸ್ತಕ್ಷೇಪವನ್ನು ಮಾಡುತ್ತಿದ್ದಾರೆ ಎಂದು ಸುಪ್ರೀಂಕೋರ್ಟ್ ಗೆ ದೂರು ನೀಡಿದ್ದಾರೆ.
ಸುಪ್ರೀಂಕೋರ್ಟ್ ಗೆ ಮೊರೆ ಹೋಗಿರುವ ವಿಚಾರವಾಗಿ ಮಾತನಾಡಿದ ಡಿಸಿಎಂ ಪರಮೇಶ್ವರ್ ' ನಾವು ಎರಡು ಪ್ರಮುಖ ವಿಷಯಗಳಿಗೆ ತಡೆ ನೀಡುವ ವಿಚಾರವಾಗಿ ಸುಪ್ರೀಂಗೆ ಮೊರೆಹೋಗಿದ್ದೇವೆ. ರಾಜಕೀಯ ಪಕ್ಷಗಳಿಗೆ ತನ್ನ ಸದಸ್ಯರಿಗೆ ವೀಪ್ ನೀಡುವ ಹಕ್ಕು ಇದೆ ಇದನ್ನು ಕಸಿದುಕೊಳ್ಳಲು ಸಾದ್ಯವಿಲ್ಲ. ಇನ್ನು ಸದನ ನಡೆಯುತ್ತಿರುವಾಗ ರಾಜ್ಯಪಾಲರು ಯಾವುದೇ ನಿರ್ದೇಶನ ಹಾಗೂ ಡೆಡ್ ಲೈನ್ ಗಳನ್ನು ನೀಡುವಂತಿಲ್ಲ' ಎಂದು ಹೇಳಿದರು.
ಇನ್ನೊಂದೆಡೆಗೆ ವಿಪಕ್ಷದ ನಾಯಕ ಯಡಿಯೂರಪ್ಪ ' ಸ್ಪೀಕರ್ ಸರ್ ನಾವು ನಿಮ್ಮನ್ನು ಗೌರವಿಸುತ್ತೇವೆ. ರಾಜ್ಯಪಾಲರ ಎರಡನೇ ಪತ್ರ ಇಂದೇ ಮತಯಾಚನೆ ಮಾಡಲು ಸೂಚಿಸಿದೆ. ನಮ್ಮ ಕಡೆಯವರು ರಾತ್ರಿಯಿಡಿ ಶಾಂತಿಯಿಂದ ಕುಳಿತುಕೊಳ್ಳುತ್ತೇವೆ. ಅದೆಷ್ಟು ಸಮಯ ತೆಗೆದುಕೊಳ್ಳುತ್ತದೆಯೋ ತೆಗೆದುಕೊಳ್ಳಲಿ, ಇದರ ಜೊತೆಗೆ ನಾವು ರಾಜ್ಯಪಾಲರ ನಿರ್ದೇಶನವನ್ನು ಕೂಡ ಗೌರವಿಸುತ್ತೇವೆ ಎಂದು ಹೇಳಿದರು.