ಯುವತಿ ನೀಡಿದ ದೂರಿನ ಆಧಾರವಾಗಿ ಈ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಐಐಎಂ-ಕಲ್ಕತ್ತಾ ಜೋಕಾ ಕ್ಯಾಂಪಸ್ನ ಹಾಸ್ಟೆಲ್ ಕೋಣೆ ಒಳಗೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಐಐಎಂ ಕ್ಯಾಂಪಸ್ ನಲ್ಲಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯದ ನಂಟು ಬಾಗಲಕೋಟೆಗೆ ಬಂದು ತಲುಪಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಲೋಕಾಪುರ ನಿವಾಸಿಯನ್ನ ಬಂಧಿಸಿಲಾಗಿದೆ. ಆದರೆ ಸಂತ್ರಸ್ತೆಯ ತಂದೆ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ನೀಡಿದ್ದಾರೆ.
ಸದ್ಯ ದೇಶಾದ್ಯಂತ ಸದ್ದು ಮಾಡುತ್ತಿರುವ ಕಲ್ಕತ್ತ ಗ್ಯಾಂಗ್ ರೇಪ್ ಪ್ರಕರಣ ಬಾಗಲಕೋಟೆ ಜಿಲ್ಲೆಗೆ ನಂಟು ಬೆಸೆದುಕೊಂಡಿದೆ. ಪ್ರಕರಣದಲ್ಲಿ ಬಾಗಲಕೋಟೆ ಜಿಲ್ಲೆಯ ಲೋಕಾಪುರ ಮೂಲದ ಪರಮಾನಂದ ಟೋಪಣ್ಣವರ(26) ಎನ್ನುವ ವಿದ್ಯಾರ್ಥಿಯನ್ನ ಕಲ್ಕತ್ತದಲ್ಲಿಯೇ ಬಂಧಿಸಲಾಗಿದೆ. ಕಲ್ಕತ್ತಾದ ಹರಿದೇವಾಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಕೇಸ್ ಸಂಖ್ಯೆ 415/2025 ಅನ್ನು ಭಾರತೀಯ ನ್ಯಾಯ ಸಂಹಿತೆ, 2023ರ ಸೆಕ್ಷನ್ 123 ಮತ್ತು 64ರಡಿ ಪ್ರಕರಣ ದಾಖಲಿಸಲಾಗಿದೆ. ಯುವತಿ ನೀಡಿದ ದೂರಿನ ಆಧಾರವಾಗಿ ಈ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಐಐಎಂ-ಕಲ್ಕತ್ತಾ ಜೋಕಾ ಕ್ಯಾಂಪಸ್ನ ಹಾಸ್ಟೆಲ್ ಕೋಣೆ ಒಳಗೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆರೋಪಿತನು ಪರಮಾನಂದ ಮಹಾವೀರ್ ಟೋಪಣ್ಣವರ (ವಯಸ್ಸು 26), ಐಐಎಂ-ಕಲ್ಕತ್ತಾದ ಎರಡನೇ ವರ್ಷದ ಎಂ.ಬಿ.ಎ ವಿದ್ಯಾರ್ಥಿಯಾಗಿದ್ದಾನೆ. ಸದ್ಯ ಈತನನ್ನ ಬಂಧಿಸಿರುವ ಹರಿದೇವಾಪುರ ಪೊಲೀಸರು ತನಿಖೆಯನ್ನ ಮುಂದುವರೆಸಿದ್ದಾರೆ.
ಇನ್ನು ಸುದ್ದಿ ತಿಳಿಯುತ್ತಿದ್ದಂತೆ ಲೋಕಾಪೂರ ಪಟ್ಟಣದಲ್ಲಿರುವ ಬಂಧಿತ ವಿದ್ಯಾರ್ಥಿ ಪರಮಾನಂದ ಅವರ ತಂದೆ ಉದ್ಯಮಿ ಮಹಾವೀರ ಹಾಗೂ ಪೋಷಕರು ಕಲ್ಕತ್ತಕ್ಕೆ ವಕೀಲರ ಸಮೇತ ದೌಡಾಯಿಸಿದ್ದಾರೆ.
ಜುಲೈ ೧೨ರಂದು ಪರಮಾನಂದನನ್ನು ಐಐಎಂ ಜೋಕಾ ಹಾಸ್ಟೆಲ್ನಿಂದ ಬಂಧಿಸಲಾಗಿದೆ. ಇದೇ ದಿನ ಕಲ್ಕತ್ತಾದ ಅಲಿಪೋರ್ನ ಹೆಚ್ಚುವರಿ ಮುಖ್ಯ ನ್ಯಾಯಮೂರ್ತಿ (ACJM) ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಜು.19 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಪ್ರಕರಣದ ತನಿಖೆಯನ್ನು ಕೋಲ್ಕತ್ತಾ ಹರಿದೇವಾಪುರ ಪೊಲೀಸರು ಮುಂದುವರೆಸಿದ್ದಾರೆ. ಕಲ್ಕತ್ತ ಸರ್ಕಾರ ಈ ಕುರಿತು ಎಸ್.ಐ.ಟಿ ತಂಡ ರಚನೆ ಮಾಡಿದೆ ಎಂದು ಮಾಹಿತಿ ಲಭ್ಯವಾಗಿದೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ಸಂತ್ರಸ್ತೆಯ ತಂದೆ ನನ್ನ ಮಗಳ ಜೊತೆಗೆ ಯಾರೂ ಅಸಭ್ಯವಾಗಿ ನಡೆದುಕೊಂಡಿಲ್ಲ, ನನ್ನ ಮಗಳು ಎಲ್ಲಿಯೋ ಬಿದ್ದು ಗಾಯಗೊಂಡು ಬಂದಿದ್ದಾಳೆ. ಇದೆಲ್ಲ ಸುಳ್ಳು ಎಂದು ಕಲ್ಕತ್ತ ಮಾಧ್ಯಮಗಳಿಗೆ ಹೇಳಿಕೆ ನೀಡದ್ದಾರೆ. ಇತ್ತ ಪರಮಾನಂದ ಪರ ವಕೀಲ ವರುಣ ಪಾಟೀಲ್ ಘಟನೆ ನಡೆದ ಸಮಯಕ್ಕೂ ಪ್ರಕರಣ ದಾಖಲಾದ ಸಮಯಕ್ಕೂ ವ್ಯತ್ಯಾಸವಿದೆ. ಹಾಗಾಗಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇನ್ನು ಬಾಗಲಕೋಟೆ ಪೊಲೀಸರು ಕಲ್ಕತ್ತ ಪೊಲೀಸರ ತನಿಖೆಗೆ ಸಹಕರಿಸುತ್ತೇವೆ ಎಂದಿದ್ದಾರೆ.