)
ಬೆಂಗಳೂರು : ಮೂರು ತಿಂಗಳ ಬಳಿಕ ರಾಜ್ಯ ಬಿಜೆಪಿ ಕಚೇರಿಯಲ್ಲಿ ಕೋರ್ ಕಮಿಟಿ ಸಭೆ ನಿನ್ನೆ ಸಂಜೆ ನಡೆದಿದೆ. ಸಭೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನ ವಿಚಾರ ಚರ್ಚೆ ಆಗದೇ ಇದ್ದರೂ, ಆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ. ವ್ಯಕ್ತಿ ಪೂಜೆ ಬಿಜೆಪಿಯಲ್ಲಿ ಇಲ್ಲ. ಯಾರೇ ಅಧ್ಯಕ್ಷ ಇದ್ದರೂ ಪಕ್ಷ ಸಂಘಟನೆಯೇ ಮುಖ್ಯ. ಪದಾಧಿಕಾರಿಗಳು ಸಪ್ಪಗಾಗಿದ್ದಾರೆ. ಪ್ರಮುಖರ ನಡುವೆಯೇ ಅಸಮಾಧಾನವಿದೆ ಎಂದು ಸುದ್ದಿಯಾಗುತ್ತಿದೆ. ಮೊದಲು ಇದೆಲ್ಲ ನಿಲ್ಲಬೇಕು ಎಂದು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್ ಖಾರವಾಗಿಯೇ ಹೇಳಿದ್ದಾರೆ.
ರಾಜ್ಯಮಟ್ಟದ ನಾಯಕರಲ್ಲಿ ಮುನಿಸಿದ್ದರೆ, ಅದರ ಪರಿಣಾಮ ಜಿಲ್ಲಾಮಟ್ಟಕ್ಕೂ ವಿಸ್ತರಣೆಯಾಗುತ್ತದೆ. ಹಾಗಾಗಿ ಇದಕ್ಕೆ ಮೊದಲು ಕಡಿವಾಣ ಹಾಕಿ ಎಂದು ಹೇಳಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಕೇಂದ್ರದ ಮಾಜಿ ಸಚಿವ ಜಿ. ಎಂ. ಸಿದ್ದೇಶ್ ಹಾಗೂ ಮಾಜಿ ಸಚಿವ ರೇಣುಕಾಚಾರ್ಯ ನಡುವೆ ಕಲಹ ನಡೆಯುತ್ತಿದೆ. ಇದು ಹೀಗೆಯೇ ಮುಂದುವರೆದರೆ ಇಡಿ ರಾಜ್ಯಕ್ಕೆ ವಿಸ್ತರಣೆಯಾಗುತ್ತದೆ. ಅಕ್ಟೋಬರ್ 6 ರಂದು ಸಭೆ ಕರೆದು ಸಮಸ್ಯೆ ಸರಿ ಮಾಡುತ್ತೇನೆ ಎಂದು ಅಗರವಾಲ್ ಹೇಳಿದ್ದಾರೆ.
ಇದಕ್ಕೆ ಸಭೆಯಲ್ಲಿ ಪ್ರತಿಕ್ರಿಯಿಸಿರುವ ರಾಜ್ಯಾಧ್ಯಕ್ಷ ವಿಜಯೇಂದ್ರ, ನಾನು ಯಾರ ಪರವೂ ಇಲ್ಲ. ಸಂಘಟನೆ ಆಗಬೇಕು. ಜಿಲ್ಲಾಧ್ಯಕ್ಷರನ್ನ ಯಾವ ಬಣದವರನ್ನೂ ಮಾಡಿಲ್ಲ. ಆದರೆ ನನಗೆ ಬೇಕಾದವರನ್ನ ಮಾಡಿದ್ದೇನೆ ಎಂಬ ಭಾವನೆ ಸಿದ್ದೇಶ್ ಬಣಕ್ಕೆ ಬಂದಿದೆ ಅಷ್ಟೆ. ಬೇಕಿದ್ದರೆ ಅವರನ್ನೂ ಬದಲಾಯಿಸಿ. ಪಕ್ಷ ಸದೃಢವಾಗಬೇಕು. ಯಾರ ಪರವೂ ನಾನು ವಕಾಲತ್ತು ವಹಿಸಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಪ್ರತಿದಿನವೂ ಒಂದೊಂದು ವಿಚಾರಕ್ಕೆ ಜನರ ವಿರೋಧ ಕಟ್ಟಿಕೊಳ್ಳುತ್ತಿದೆ. ಇದರ ಲಾಭ ಪಡೆಯಲು ಬಿಜೆಪಿ ವಿಪಕ್ಷವಾಗಿ ಇನ್ನಷ್ಟು ಬಲವಾಗಬೇಕು. ರಸ್ತೆ ಗುಂಡಿ ವಿಚಾರದಲ್ಲಿ, ಮುಡಾ ಪ್ರಕರಣದಲ್ಲಿ ಬಿಜೆಪಿ ಮಾಡಿದ ಹೋರಾಟ ಜನರನ್ನ ತಲುಪಿದೆ. ಇಂತಹ ಪ್ರತಿರೋಧ ಹೆಚ್ಚಾಗಬೇಕು. ನಾಯಕರೆಲ್ಲ ಒಂದೇ ಮನಸ್ಸಿನಿಂದ ಹೋಗಬೇಕು. ಆಗ ಮಾತ್ರವೇ ಸರ್ಕಾರವನ್ನ ಕಟ್ಟಿಹಾಕಲು ಸಾಧ್ಯ. ಯಾವುದೇ ಸಂದರ್ಭದಲ್ಲಿ ಬೆಂಗಳೂರು ಮಹಾನಗರ ಪಾಲಿಕೆಗೆ ಚುನಾವಣೆ ಬರಬಹುದು. ಈಗಿನಿಂದಲೇ ಸಿದ್ದತೆ ಆಗಬೇಕು ಎಂದು ಅಗರವಾಲ್ ಸೂಚಿಸಿದ್ದಾರೆ. ಅಲ್ಲದೆ ರಾಜ್ಯ ಘಟಕದ ಪದಾಧಿಕಾರಿಗಳು ಇನ್ನಷ್ಟು ಚುರುಕಾಗಿ ಕೆಲಸ ಮಾಡಬೇಕು. ನಾಲ್ವರು ಪ್ರದಾನ ಕಾರ್ಯದರ್ಶಿಗಳನ್ನ ತಕ್ಷಣ ನೇಮಕ ಮಾಡಿ. ಎಲ್ಲ ಸಮುದಾಯಕ್ಕೂ ನ್ಯಾಯ ಕೊಡುವ ರೀತಿಯಲ್ಲಿ, ಚಾಣಾಕ್ಷತನದಿಂದ ಕೆಲಸ ಮಾಡುವವರಿಗೆ ಜವಾಬ್ದಾರಿ ಕೊಡಿ ಎಂದು ಹೇಳಿದ್ದಾರೆ. ನಾಲ್ವರಲ್ಲಿ ಓರ್ವ ಮಹಿಳೆಯೂ ಇರಬೇಕು ಎಂದು ಹೇಳಿದ್ದಾರೆ.
ಕೋರ್ ಕಮಿಟಿ ಸಭೆ ಅಂದರೆ ಅದು ಪಕ್ಷವನ್ನ ಬಲಪಡಿಸುವ, ಪಕ್ಷದೊಳಗಿನ ಹುಳುಕುಗಳಿಗೆ, ಅಹಂ ಗೆ, ಕಚ್ಚಾಟಕ್ಕೆ ಬ್ರೇಕ್ ಹಾಕಿ ಹೊಸ ದಿಕ್ಕು ನೀಡುವ ವೇದಿಕೆ. ನಿನ್ನೆಯ ಸಭೆಯಲ್ಲಿ ಈ ಎಲ್ಲ ವಿಷಯಗಳ ಪ್ರಸ್ತಾಪವಾಗಿದೆ. ಎಲ್ಲವನ್ನೂ ಸರಿಪಡಿಸುವ ಪ್ರಯತ್ನ ಮಾಡುವ ಬಗ್ಗೆ ಎಲ್ಲರೂ ತಲೆಯಾಡಿಸಿದ್ದಾರೆ. ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಕಮಲ ಪಾಳಯದಲ್ಲಿನ ಒಡೆದ ಮನಸ್ಸುಗಳನ್ನ ಒಂದುಗೂಡಿಸುವ ಕೆಲಸ ಶೀಘ್ರದಲ್ಲಿಯೇ ಆರಂಭವಾಗಲಿದೆ. ಆದರೆ ರಾಜ್ಯ ಮಟ್ಟದಲ್ಲಿರುವ ರೆಬಲ್ಸ್ ಟೀಂ, ತಟಸ್ಥಬಣ, ವಿಜಯೇಂದ್ರ ಬಣ, ಹಿರಿಯರ ಬಣ ಹೀಗೆ ನಾಲ್ಕಾರು ಬಣಗಳನ್ನ ಒಂದೇ ತಕ್ಕಡಿಗೆ ಹಾಕುವ ಯತ್ನ ಹೈಕಮಾಂಡ್ ನಿಂದ ಯಾವಾಗ ಆಗಲಿದೆ. ? ರಾಜ್ಯಾಧ್ಯಕ್ಷರು ವಿಜಯೇಂದ್ರ ಅವರೇ ಇರುತ್ತಾರಾ ಎಂದಾದರೆ ಅಧಿಕೃತ ಘೋಷಣೆ ಯಾವಾಗ ? ಈ ಎಲ್ಲ ಪ್ರಶ್ನೆಗಳನ್ನ ಪಕ್ಷದ ಕಾರ್ಯಕರ್ತರು ಒಳಗೊಳಗೇ ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಉತ್ತರ ಕಾಲವೇ ಹೇಳಲಿದೆ.