ಬೆಂಗಳೂರು: ನಗರದ ಮಾರತ್ ಹಳ್ಳಿ ಬಿಡ್ಜ್ ಸಮೀಪದ ಅಶ್ವತ್ ನಗರದಲ್ಲಿ ಮಾಜಿ ಬಿಇಎಲ್ ನೌಕರ ಗೋವಿಂದನ್ ಮತ್ತು ಆತನ ಪತ್ನಿ ಸರೋಜಾರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಸ್ಥಳಕ್ಕೆ ಎಚ್ ಎ ಎಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


COMMERCIAL BREAK
SCROLL TO CONTINUE READING

ಕಣ್ಣಿಗೆ ಬಟ್ಟೆಕಟ್ಟಿ ಬಳಿಕ ಚಾಕುವಿನಿಂದ ಇರಿದು ದಂಪತಿಗಳನ್ನು ಹತ್ಯೆ ಮಾಡಲಾಗಿದ್ದು, ಮೇಲ್ನೋಟಕ್ಕೆ ಕಳ್ಳತನಕ್ಕೆ ಬಂದು ಕೊಲೆ ಮಾಡಿರಬಹುದು. ಕಳ್ಳತನ ಮಾಡಲು ಬಂದ ಇಬ್ಬರಿಂದ ಈ ಕೃತ್ಯ ನಡೆದಿದೆ ಹಾಗೂ ಓರ್ವ ಮಹಿಳೆ ಮಾತು ಯುವಕನಿಂದ ಕೃತ್ಯ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.


ಕಳೆದು ಎರಡು ದಿನಗಳ ಹಿಂದೆ ಕೊಲೆ ನಡೆದಿದೆ ಎಂದು ಅನುಮಾನ ವ್ಯಕ್ತಪಡಿಸಿರುವ ಪೊಲೀಸರು ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಓಪನ್ ಮಾಡಲಾಗಿದೆ, ದಂಪತಿಯ ಮೃತ ದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.


ಮೃತ ಗೋವಿಂದನ್ ಕೆಲವು ವರ್ಷಗಳ ಹಿಂದೆಯೇ ನಿವೃತ್ತಿಯಾಗಿದ್ದರು. ಮೃತರ ಮಗಳು ಉಷಾ ಪಕ್ಕದ ಮನೆಯಲ್ಲಿ ವಾಸವಿದ್ದರು. ಕಳೆದ ಭಾನುವಾರ ಓಂಶಕ್ತಿ ದೇವಾಲಯಕ್ಕೆ ಹೋಗುವುದಾಗಿ ದಂಪತಿಗಳು ಮಗಳಿಗೆ ತಿಳಿಸಿದ್ದರು. ಮನೆಯಲ್ಲಿ ಸಿಲಿಂಡರ್ ಗ್ಯಾಸ್ ವಾಸನೆ ಬರುತ್ತಿರುವುದನ್ನ ಗಮನಿಸಿದ ಸ್ಥಳೀಯರು ಉಷಾಳಿಗೆ ಮಾಹಿತಿ ನೀಡಿದರು. ಸ್ಥಳೀಯರ ಮಾಹಿತಿ ಮೇರೆಗೆ ಪೋಷಕರ ಮನೆಗೆ ಬಂದು ನೋಡಿದ ಉಷಾ ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. ಸದ್ಯ ಈ ಸಂಬಂದ ಎಚ್ ಎಎಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.