ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಮಹಿಳೆಯ ವಿರುದ್ಧ ಗರಂ ಆದ ವಿಚಾರಕ್ಕೆ ಬಿಜೆಪಿ ಕರ್ನಾಟಕ ಘಟಕ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಸಮ್ಮಿಶ್ರ ಸರ್ಕಾರದ ನಾಯಕರು ಕೆಲವು ಸಂದರ್ಭಗಳಲ್ಲಿ ಮಹಿಳೆಯರ ಬಗ್ಗೆ ನೀಡಿದ್ದ ಹೇಳಿಕೆಗಳನ್ನು ಉದಾಹರಣೆಯಾಗಿಟ್ಟುಕೊಂಡು ಬಿಜೆಪಿ ಟ್ವೀಟ್ ಮೂಲಕ ಸಮ್ಮಿಶ್ರ ಸರ್ಕಾರವನ್ನು ಟೀಕಿಸಿದೆ.
"ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ರೈತ ಮಹಿಳೆಯನ್ನು ಎಲ್ಲಿ ಮಲಗಿದ್ದೆ ಅಂತ ಕೇಳ್ತಾರೆ. ಸಚಿವ ಸಾರಾ ಮಹೇಶ್ ಅವರು ಮಹಿಳಾ ಅಧಿಕಾರಿಯನ್ನು ಬ್ಲಡಿ ರಾಸ್ಕಲ್ ಅಂತ ಕರೀತಾರೆ, ಮತ್ತೊಂದೆಡೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಬಹಿರಂಗವಾಗಿ ಮಹಿಳೆಯನ್ನು ನಿಂದಿಸುತ್ತಾರೆ. ಇದೆಲ್ಲಾ ನೋಡ್ತಿದ್ರೆ, ದುಶ್ಯಾಸನ ರಾಜ್ಯದಲ್ಲಿ ಮರುಜನ್ಮ ತಾಳಿ ಅಧಿಕಾರ ಹಿಡಿದಿದ್ದಾನೆ ಎಂದು ಭಾಸವಾಗುತ್ತಿದೆ. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಮಹಿಳೆಯನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದು ಇದರಿಂದಲೇ ತಿಳಿಯುತ್ತದೆ" ಎಂದು ಬಿಜೆಪಿ ಟೀಕಿಸಿದೆ.
CM @hd_kumaraswamy asks a farmer women were she slept
JDS MLA Sa Ra Mahesh calls women cop bloody rascal
& here is @siddaramaiah threatening & abusing a women openly
Demon Dushyasana is finally reborn & resumed power in govt of Karnataka.
This is how Cong-JDS treats women pic.twitter.com/iMUIgzRFmC
— BJP Karnataka (@BJP4Karnataka) January 28, 2019
ಮೈಸೂರಿನ ವರುಣಾ ಕ್ಷೇತ್ರದಲ್ಲಿ ಇಂದು ನಡೆದ ಸಾರ್ವಜನಿಕ ಸಭೆಯಲ್ಲಿ ಗ್ರಾಮದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ, ಜನಪ್ರತಿನಿಧಿಗಳು ಕೈಗೆ ಸಿಗುತ್ತಿಲ್ಲ ಎಂದು ಅಸಮಾಧಾನಗೊಂಡು ಅಳಲು ತೋಡಿಕೊಂಡ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಜಮಲಾರ್ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಗರಂ ಆಗಿ ವರ್ತಿಸಿದ್ದರು. ಸದ್ಯ ಈ ವಿಚಾರ ಹಲವು ವಿವಾದಗಳಿಗೆ ಕಾರಣವಾಗಿದೆ.