)
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿರುವ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದೇವಾಲಯವಿದ್ದು, ಅದು ಭಾರತದ ಪ್ರತಿಷ್ಠಿತ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಪೈಕಿ ಒಂದಾಗಿದೆ. ಶ್ರೀ ಕ್ಷೇತ್ರಕ್ಕೆ ವರ್ಷಂಪ್ರತಿ ಜಗತ್ತಿನೆಲ್ಲೆಡೆಯಿಂದ ಕೋಟ್ಯಾಂತರ ಭಕ್ತರು ಆಗಮಿಸಿ ತಮ್ಮ ಆರಾಧ್ಯ ದೇವರ ದರ್ಶನವನ್ನು ಪಡೆಯುತ್ತಾರೆ. ಧರ್ಮಕ್ಕೆ ಪ್ರತಿರೂಪವಾಗಿರುವ ಧರ್ಮಸ್ಥಳಕ್ಕೆ ಇಂದು ಪಟ್ಟಬದ್ಧ ಹಿತಾಸಕ್ತಿಗಳು ಹಾಗೂ ಹಿಂದೂ ವಿರೋಧಿ ಶಕ್ತಿಗಳು ವ್ಯಾಪಕವಾಗಿ ಅಪಪ್ರಚಾರವೆಸಗುತ್ತಾ ಕ್ಷೇತ್ರದ ಗೌರವ ಹಾಗೂ ಘನತೆಯನ್ನು ಕುಗ್ಗಿಸಲೆತ್ನಿಸುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಅಭಿಪ್ರಾಯ ಪಟ್ಟಿದೆ.
ಬೆಳ್ತಂಗಡಿ ಪೋಲೀಸ್ ಸ್ಟೇಷನ್ ವ್ಯಾಪ್ತಿಗೆ ಸೇರಿದ ಪ್ರದೇಶದಲ್ಲಿ 2012ರಲ್ಲಿ ನಡೆದ ಕುಮಾರಿ ಸೌಜನ್ಯಳ ಕ್ರೌರ್ಯಭರಿತ ಹತ್ಯೆಗೆ ಸಂಬಂಧಿಸಿ ಸಮಗ್ರವಾದ ಪಾರದರ್ಶಕ ತನಿಖೆ ನಡೆದು ಅಪರಾಧಿಗಳಿಗೆ ಕಠಿಣಾಧಿ ಕಠಿಣ ಶಿಕ್ಷೆಯಾಗಬೇಕು ಎಂದು ವಿಶ್ವ ಹಿಂದೂ ಪರಿಷತ್ ಆಗ್ರಹಿಸುತ್ತಲೇ ಬಂದಿದೆ. ಅಷ್ಟೇ ಅಲ್ಲದೆ ಅಂದಿನಿಂದಲೂ ಆ ನಿಟ್ಟಿನಲ್ಲಿ ನಡೆದ ಎಲ್ಲಾ ಪೂರ್ವಾಗ್ರಹರಹಿತ ಹೋರಾಟಗಳಿಗೆ ತನ್ನ ಬೆಂಬಲವನ್ನೂ ನೀಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಇದಿಷ್ಟರ ನಡುವೆ ಇದೀಗ ಅನಾಮಿಕ ವ್ಯಕ್ತಿಯೊಬ್ಬ ತಾನು 10-20 ವರ್ಷಗಳ ಹಿಂದೆ ನೂರಾರು ಹಣಗಳನ್ನು ಧರ್ಮಸ್ಥಳದ ಕಾಡುಗಳಲ್ಲಿ ಹೂತಿದ್ದೇನೆ ಎಂಬ ಹೇಳಿಕೆಯನ್ನು ಆಧರಿಸಿ ಶ್ರೀ ಕ್ಷೇತ್ರದ ಘನತೆಗೆ ಹಾಗೂ ಹಿಂದೂ ಧಾರ್ಮಿಕ ನಂಬಿಕೆಗೆ ಚ್ಯುತಿ ತರುವ ಸಂಚನ್ನು ವ್ಯವಸ್ಥಿತವಾಗಿ ಮಾಡಲಾಗುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ಆರೋಪಿಸಿದೆ. ಧರ್ಮಸ್ಥಳವನ್ನು ಗುರಿಯಾಗಿಸಿಕೊಂಡು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿರುವುದನ್ನು ನೋಡಿದಾಗ ಇದೊಂದು ಬಹು ದೊಡ್ಡ ಪಡ್ಯಂತ್ರವೆಂಬುದು ಕಂಡುಬರುತ್ತಿದೆ ಎಂದು ಕಿಡಿ ಕಾರಿದೆ. ಮಾತ್ರವಲ್ಲದೇ ಇದನ್ನು ಅಂತರಾಷ್ಟ್ರೀಯ ಸುದ್ದಿ ವಾಹಿನಿಗಳಲ್ಲಿ ಭಿತ್ತರಿಸುವ ಮೂಲಕ ಇದೊಂದು ಅಂತರಾಷ್ಟ್ರೀಯ ಮಟ್ಟದ ಪಿತೂರಿ ಎಂದು ಹಿಂದೂ ವಿರೋಧಿ ಶಕ್ತಿಗಳು ಸಾಬೀತು ಪಡಿಸುತ್ತಿವೆ ಎದ್ನು ಹೇಳಿದೆ.
ಧರ್ಮಸ್ಥಳದ ವಿರುದ್ಧ ಷಡ್ಯಂತ್ರ :ಸಮಗ್ರ ತನಿಖೆಗೆ ಆಗ್ರಹ :
ರಾಜ್ಯ ಸರಕಾರವು SIT ತನಿಖೆಯನ್ನು ಮುಂದುವರಿಸುವಾಗ ಶ್ರೀ ಕ್ಷೇತ್ರ ಧರ್ಮಸ್ಥಳದ ಘನತೆ ಮತ್ತು ಹಿಂದೂ ಶ್ರದ್ಧೆ - ಭಾವನೆ ನಂಬಿಕೆಗಳಿಗೆ ಅಪಚಾರವಾಗದೇ ಇರುವ ರೀತಿಯಲ್ಲಿ ಎಚ್ಚರಿಕೆ ವಹಿಸುವಂತೆ ಸರ್ಕಾರದಲ್ಲಿ ಮನವಿ ಮಾಡಲಾಗಿದೆ. ಶ್ರೀ ಕ್ಷೇತ್ರದ ವಿರುದ್ಧ ಷಡ್ಯಂತ್ರ ಮಾಡಿ ಸನಾತನ ಧರ್ಮದೊಳಗೆ ಬಿರುಕು ಮೂಡಿಸಲು ಯತ್ನಿಸುತ್ತಿರುವವರ ವಿರುದ್ಧ ಈ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಆಗ್ರಹಿಸಿದೆ. ಇತ್ತೀಚಿಗೆ ನಡೆಯುತ್ತಿರುವ ಎಲ್ಲಾ ಘಟನೆಗಳ ಸಮಗ್ರ ತನಿಖೆಯಾಗಬೇಕಾಗಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಆದರೆ ಧರ್ಮಸ್ಥಳದಂತಹ ಶ್ರದ್ಧಾಕೇಂದ್ರದ ಘನತೆ ಗೌರವಗಳಿಗೆ ಯಾವುದೇ ಹಾನಿಯಾಗಬಾರದು ಎಂದು ವಿಹೆಚ್ ಪಿ ಆಗ್ರಹಿಸಿದೆ.
ಧರ್ಮಸ್ಥಳ ಮಾತ್ರವಲ್ಲದೆ ರಾಜ್ಯ ಹಾಗು ದೇಶದ ಇನ್ನೂ ಅನೇಕ ಹಿಂದೂ ಧಾರ್ಮಿಕ ಕೇಂದ್ರಗಳ ವಿರುದ್ಧ ಪಿತೂರಿ ಮಾಡುವ ಶಕ್ತಿಗಳ ವಿರುದ್ಧ ವಿಶ್ವ ಹಿಂದು ಪರಿಷತ್ ಎಲ್ಲಾ ರೀತಿಯ ಹೋರಾಟ ಮಾಡಲು ಸಿದ್ಧವಿದೆ ಎಂದು ವಿಶ್ವ ಹಿಂದೂ ಪರಿಷತ್ತಿನ ಪ್ರಾಂತ ಅಧ್ಯಕ್ಷರು ದೀಪಕ್ ರಾಜ್ ಗೋಪಾಲ್ ಹಾಗು ವಿಶ್ವ ಹಿಂದೂ ಪರಿಷತ್ತಿನ ನಿಕಟಪೂರ್ವ ಪ್ರಾಂತ ಕಾರ್ಯಾಧ್ಯಕ್ಷರು ಡಾ ಎಂಬಿ ಪುರಾಣಿಕರು ಜಂಟಿ ಪ್ರಕಟಣಾ ಹೇಳಿಕೆ ನೀಡಿದ್ದಾರೆ.