)
ಪ್ರತಿ ಮನೆಯ ಮುಂದೆ ತುಳಸಿ ಇದ್ದೇ ಇರುತ್ತದೆ. ಬೆಳಗ್ಗೆ ಎದ್ದ ಕೂಡಲೇ ತುಳಸಿಗೆ ಪೂಜೆ ಮಾಡಿದರೆ ಮಾತ್ರ ಮಹಿಳೆಯರಿಗೂ ಸಮಾಧಾನ. ಇದೇ ಕಾರಣಕ್ಕೆ ಹಿಂದೂಗಳ ಮನೆಯ ಮುಂದೆ ತುಳಸಿಗೆ ಒಂದು ಮಹತ್ವದ ಸ್ಥಾನ ಇರುತ್ತದೆ. ಒಂದು ವೇಳೆ ಮನೆಯಲ್ಲಿ ತುಳಸಿ ಕಟ್ಟೆ ಇಲ್ಲದೇ ಹೋದರೆ ಹೂ ಕುಂಡದಲ್ಲಿಯಾದರೂ ತುಳಸಿಯನ್ನು ನೆಟ್ಟು ಪೂಜೆ ಮಾಡಲಾಗುತ್ತದೆ. ತುಳಸಿ ಅಂದರೆ ಲಕ್ಷ್ಮೀ ಸ್ವರೂಪ. ಇದೇ ಕಾರಣಕ್ಕೆ ಮನೆ ಮುಂದೆ ಇರುವ ತುಳಸಿಗೆ ಬೆಳಿಗ್ಗೆ, ಸಂಜೆ ಪೂಜೆ ಮಾಡುವುದು ಪದ್ಧತಿ.
ಮುಂಜಾನೆ ಎದ್ದು ಮಡಿಯುಟ್ಟ ನಂತರ ತುಳಸಿ ಗಿಡಕ್ಕೆ ನೀರು ಹಾಕಿ, ದೀಪ ಬೆಳಗಿಸಿ, ತುಳಸೀ ಪೂಜೆ ಮಾಡಲಾಗುತ್ತದೆ. ಪ್ರತಿ ನಿತ್ಯ ಶೃದ್ದಾ ಭಕ್ತಿಯಿಂದ ತುಳಸಿ ಪೂಜೆ ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಕೆಲವೊಮ್ಮೆ ಮನೆಯಂಗಳದ ತುಳಸಿ ಇದ್ದಕ್ಕಿದ್ದ ಹಾಗೆ ಬಾಡಿ ಬಿಡುತ್ತದೆ. ನಿತ್ಯ ತುಳಸಿ ಸಸ್ಯಕ್ಕೆ ನೀರು ಹಾಕಿದರೂ ಸೊರಗಿ ಬಿಡುತ್ತದೆ. ಇನ್ನೂ ಕೆಲವೊಮ್ಮೆ ಆಶ್ಚರ್ಯ ಎನ್ನುವಂತೆ ಮನೆಯಲ್ಲಿ ಇರುವ ಬೇರೆಲ್ಲಾ ಗಿಡಗಳು ಸೊಂಪಾಗಿಯೇ ಬೆಳೆಯುತ್ತಿರುತ್ತವೆ. ಆದರೆ ತುಳಸಿ ಮಾತ್ರ ಸೊರಗಿ ಬಿಡುತ್ತದೆ. ಇದು ಯಾಕೆ ಹೀಗಾಗುತ್ತದೆ ಎನ್ನುವುದು ಅರ್ಥವಾಗುವುದಿಲ್ಲ. ತುಳಸಿ ಒಣಗುತ್ತಿರುವುದರ ಹಿಂದಿನ ಅರ್ಥವೆಂದರೆ ಭವಿಷ್ಯದಲ್ಲಿ ಎದುರಾಗಲಿರುವ ಸಮಸ್ಯೆಗಳ ಸೂಚಕ. ತುಳಸಿ ಗಿಡ ಒಣಗುತ್ತಿದ್ದರೆ ಭವಿಷ್ಯದಲ್ಲಿ ಎದುರಾಗುವ ಸಮಸ್ಯೆಗಳ ಮುನ್ಸೂಚನೆ ಎಂದೇ ಹೇಳಲಾಗುತ್ತದೆ.
ತುಳಸಿ ಒಣಗುವುದು ಅಶುಭ :
ಹಿಂದೂ ಧರ್ಮ ಗ್ರಂಥಗಳ ಪ್ರಕಾರ, ತುಳಸಿ ಸಸ್ಯ ಒಣಗುವುದು ಅಶುಭ. ನಾವಿರುವ ಮನೆಗೆ ಏನಾದರೂ ಸಮಸ್ಯೆಗಳು ಎದುರಾದರೆ, ಆ ಸಮಸ್ಯೆಯ ತಾಪವನ್ನು ಮೊದಲು ತುಳಸಿ ತನ್ನತ್ತ ಸೆಳೆದುಕೊಳ್ಳುತ್ತಾಳಂತೆ. ಹಾಗಾಗಿ ಇದ್ದಕ್ಕಿದ್ದಂತೆ ತುಳಸಿ ಒಣಗಿ ಹೋಗುತ್ತದೆ. ಇನ್ನೊಂದು ನಂಬಿಕೆಯ ಪ್ರಕಾರ, ಮನೆಗೆ ಸಮಸ್ಯೆಗಳು ಎದುರಾಗುವುದಾದರೆ ಮೊದಲು ಲಕ್ಷ್ಮೀ ಸಮಾನಳಾಗಿರುವ ತುಳಸಿ ಎದ್ದು ಹೊರ ನಡೆಯುತ್ತಾಳೆ ಎನ್ನುವುದು.
ಇದಲ್ಲದೆ, ತುಳಸಿ ಸಸಿ ಒಣಗುವುದಕ್ಕೂ ಬುಧ ಗ್ರಹಕ್ಕೂ ಸಂಬಂಧವಿದೆ. ಜ್ಯೋತಿಷ್ಯದ ಪ್ರಕಾರ, ಬುಧದ ಬಣ್ಣವು ಹಸಿರು. ಇದನ್ನು ಮರ ಮತ್ತು ಸಸ್ಯಗಳ ಅಂಶವೆಂದು ಪರಿಗಣಿಸಲಾಗುತ್ತದೆ. ಮಾತ್ರವಲ್ಲ, ಬುಧ ಇತರ ಗ್ರಹಗಳ ಒಳ್ಳೆಯ ಮತ್ತು ಕೆಟ್ಟ ಫಲಗಳನ್ನು ವ್ಯಕ್ತಿಗೆ ರವಾನಿಸುತ್ತದೆ. ಒಂದು ಗ್ರಹವು ಅಶುಭ ಫಲಗಳನ್ನು ನೀಡುವುದಾದರೆ, ಇದರ ಪ್ರಭಾವ ಬುಧ ಗ್ರಹಕ್ಕೆ ಸಂಬಂಧಿಸಿದ ವಸ್ತುಗಳ ಮೇಲೆ ಮೊದಲು ಆಗುತ್ತದೆ. ತುಳಸಿ ಕೂಡಾ ಬುಧ ಗ್ರಹಕ್ಕೆ ಸಂಬಂಧಿಸಿದ್ದು.