)
varamahalakshmi festival 2025 : ಶ್ರಾವಣ ಮಾಸದ ಹುಣ್ಣಿಮೆಗೂ ಮುನ್ನ ಬರುವ ಶುಕ್ರವಾರದಂದು ವರಲಕ್ಷ್ಮಿ ವ್ರತವನ್ನು ಆಚರಿಸಲಾಗುತ್ತದೆ. ಅಂದರೆ ಈ ವರ್ಷ ಆಗಸ್ಟ್ 08 ರಂದು ವರಮಹಾಲಕ್ಷ್ಮಿ ಹಬ್ಬ ಬಂದಿದೆ. ಈ ದಿನದಂದು ಇಂದ್ರ ಯೋಗ ಮತ್ತು ಸುಕರ್ಮ ಯೋಗದಂತಹ ವಿಶೇಷ ಯೋಗಗಳು ರೂಪುಗೊಳ್ಳುತ್ತಿವೆ. ಸನಾತನ ಧರ್ಮದಲ್ಲಿ ಲಕ್ಷ್ಮಿ ದೇವಿಗೆ ವಿಶೇಷ ಸ್ಥಾನವಿದೆ. ಲಕ್ಷ್ಮಿ ದೇವಿಯನ್ನು ಸಂಪತ್ತಿನ ದೇವತೆ ಎಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿ ದೇವಿಯ ಅನುಗ್ರಹದಿಂದ ಜೀವನದಲ್ಲಿ ಶಾಂತಿ, ಸಂಪತ್ತು, ಸಂತೋಷ ಮತ್ತು ಸಮೃದ್ಧಿ ಬರುತ್ತದೆ.
ವರಮಹಾಲಕ್ಷ್ಮಿ ಹಬ್ಬದ ದಿನದಂದು ಮಹಿಳೆಯರು ತಮ್ಮ ಕುಟುಂಬ ಸಂತೋಷಕ್ಕಾಗಿ ಮಹಾಲಕ್ಷ್ಮಿಯನ್ನು ಪೂಜಿಸುತ್ತಾರೆ. ಈ ವ್ರತವನ್ನು ವಿಶೇಷವಾಗಿ ದಕ್ಷಿಣ ಭಾರತ ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚು ಆಚರಿಸಲಾಗುತ್ತದೆ. ಮೊದಲು ಇಡೀ ಮನೆಯನ್ನು ಹಿಂದಿನ ದಿನ ಸ್ವಚ್ಛವಾಗಿಸಿ ಸಿದ್ಧವಾಗಿಟ್ಟುಕೊಳ್ಳಬೇಕು. ಏಕೆಂದರೆ ಹಬ್ಬದ ದಿನ ಮನೆಯನ್ನು ಸ್ವಚ್ಛಗೊಳಿಸಲು ಸಮಯ ಸಾಕಾಗುವುದಿಲ್ಲ.
ಮಾವಿನ ಎಲೆಗಳನ್ನು ಬಳಸಿ ತಳಿರು ತೋರಣಗಳಿಂದ ಮನೆಯ ಬಾಗಿಲನ್ನು ಸಿಂಗರಿಸಬೇಕು. ಹೂವಿನ ಮಾಲೆಗಳನ್ನು ಮನೆಯಲ್ಲಿ ಬಾಗಿಲಿಗೆ ಕಟ್ಟಬೇಕು. ಇದರಿಂದಾಗಿ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ.
ಮಂಟಪವನ್ನು ಹೀಗೆ ಅಲಂಕರಿಸಬೇಕು:
ಮೊದಲು ಮಂಟಪವನ್ನು ತೊಳೆಯಿರಿ. ಬಳಿಕ ನಾಲ್ಕು ಕಡೆ ಬಾಳೆ ದಿಂಡನ್ನು ಕಟ್ಟಿ ಮಾವಿನ ತೋರಣದಿಂದ ಅಲಂಕರಿಸಬೇಕು. ಮಂಟಪಕ್ಕೂ ಮಾಲೆ ಕಟ್ಟಬೇಕು. ಸಾಧ್ಯವಾದರ ದೀಪಾಲಂಕಾರ ಮಾಡಿ. ಈ ರೀತಿ ಮಾಡಿದ ಮಂಟಪವನ್ನು ಪೂರ್ವ ದಿಕ್ಕಿಗೆ ಅಭಿಮುಖವಾಗಿ ಇಡಬೇಕು.
ವರಮಹಾಲಕ್ಷ್ಮಿ ಪೂಜೆಗೆ ಮುಹೂರ್ತಗಳು:
ಸಿಂಹ ಲಗ್ನ: ಬೆಳಿಗ್ಗೆ 6:29 ರಿಂದ 8:46 ರವರೆಗೆ.
ವೃಶ್ಚಿಕ ಲಗ್ನ: ಮಧ್ಯಾಹ್ನ 1:22 ರಿಂದ 3:41 ರವರೆಗೆ.
ಕುಂಭ ಲಗ್ನ: ಸಂಜೆ 7:27 ರಿಂದ 8:54 ರವರೆಗೆ.
ವೃಷಭ ಲಗ್ನ: ರಾತ್ರಿ 11:55 ರಿಂದ 1:50 ರವರೆಗೆ.
ವರಮಹಾಲಕ್ಷ್ಮೀ ಪೂಜಾ ವಿಧಾನ:
ಚಿನ್ನ, ಬೆಳ್ಳಿ, ತಾಮ್ರ ಅಥವಾ ಯಾವುದೇ ಲೋಹದ ಕಲಶವನ್ನು ತೆಗೆದುಕೊಳ್ಳಬೇಕು. ಅದನ್ನು ಅಲಂಕರಿಸಿ ಸ್ವಲ್ಪ ಅಕ್ಕಿಯನ್ನು ಹಾಕಿ 5 ವೀಳ್ಯದೆಲೆ ಇರಿಸಿ. ಕಲಶದಲ್ಲಿ ಅಕ್ಕಿಯ ಜೊತೆ ಅರಿಶಿನ, ಕುಂಕುಮ, ಅಡಿಕೆ ಮತ್ತು ನಾಣ್ಯಗಳನ್ನು ಹಾಕಿ. ನಂತರ ಕಲಶದ ಮೇಲೆ ಅಂದರ 5 ವಿಳ್ಯದೆಲೆಗಳು ಸುತ್ತಲೂ ಬರುವ ಹಾಗೆ ತೆಂಗಿನಕಾಯಿಯನ್ನು (ಲಕ್ಷ್ಮೀ ಕಾಯಿ ಎಂದು ಸಿಗುತ್ತದೆ) ಇರಿಸಿ. ಬಳಿಕ ಲಕ್ಷ್ಮೀ ದೇವಿಯ ಫೋಟೋವನ್ನು ಈ ಕಲಶದ ಹಿಂಬದಿಯಲ್ಲಿಡಿ. ಕೆಂಪು ಬ್ಲೌಸ್ ಪೀಸ್, ಆಭರಣಗಳು ಮತ್ತು ಹೂವುಗಳಿಂದೀ ಕಲಶವನ್ನು ಅಲಂಕರಿಸಬೇಕು. ಬಳಿಕ ದೇವಿಯನ್ನು ಪ್ರತಿಷ್ಠಾಪಿಸಿ, ಎರಡೂ ಬದಿಯಲ್ಲಿ ದೀಪವನ್ನು ಹಚ್ಚಬೇಕು. ಬಳಿಕ ವರಮಹಾಲಕ್ಷ್ಮಿಯ ಕತೆ ಓದಿ, ಹಾಡು ಹೇಳಿ ಆರತಿ ಮಾಡಬೇಕು. ಲಕ್ಷ್ಮೀದೇವಿಗೆಂದು ತಯಾರಿಸಿದ ಕಡುಬು, ಚಕ್ಕುಲಿ, ಕರ್ಚಿಕಾಯಿ, ಬೇಸನ್ ಲಾಡು, ಚಿತ್ರಾನ್ನವನ್ನು ನೈವೇದ್ಯ ಮಾಡಬೇಕು.
ಪೂಜೆ ಮುಗಿದ ನಂತರ ಮುತ್ತೈದೆಯರಿಗೆ ಅರಿಶಿನ ಕುಂಕುಮ ಜೊತೆಗ ಬಾಗಿನ ಕೊಡಬೇಕು. ಇದನ್ನು ನೀಡುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಸದಾ ದೊರೆಯುತ್ತದೆ ಎಂಬ ನಂಬಿಕೆ ಇದೆ. ವರಲಕ್ಷ್ಮಿ ವ್ರತವನ್ನು ಹೀಗೆ ಮಾಡಿದರೆ ಮನೆಯಲ್ಲಿ ಸುಖ-ಸಂತೋಷ ನೆಲೆಸುತ್ತದೆ.
ವರಮಹಾಲಕ್ಷ್ಮೀ ಪೂಜೆಯ ಮಹತ್ವ:
ವಿವಾಹಿತ ಮಹಿಳೆಯರು ವರಮಹಾಲಕ್ಷ್ಮಿ ವ್ರತವನ್ನು ಇಡೀ ಕುಟುಂಬಕ್ಕೆ, ವಿಶೇಷವಾಗಿ ಅವರ ಪತಿ ಮತ್ತು ಮಕ್ಕಳಿಗೆ ಆಶೀರ್ವಾದವನ್ನು ಪಡೆಯಲು ಆಚರಿಸುತ್ತಾರೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ, ಈ ಮಂಗಳಕರ ದಿನದಂದು ಲಕ್ಷ್ಮಿಯನ್ನು ಆರಾಧಿಸುವುದು ಅಷ್ಟಲಕ್ಷ್ಮಿಯನ್ನು ಪೂಜಿಸುವುದಕ್ಕೆ ಸಮಾನವಾದ ಫಲಗಳನ್ನು ನೀಡುತ್ತದೆ ಎಂದು ನಂಬಲಾಗಿದೆ. ವರಮಹಾಲಕ್ಷ್ಮಿ ಹಬ್ಬದ ಪೂಜೆಯಿಂದ ಸಂಪತ್ತು, ಶಕ್ತಿ, ಶಾಂತಿ, ಕೀರ್ತಿ, ಸಂತೋಷ, ಭೂಮಿ ಮತ್ತು ಶಿಕ್ಷಣ ಲಭಿಸುತ್ತದೆ ಎಂಬ ನಂಬಿಕೆಯಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.